ಚಲನಚಿತ್ರ ವಾಣಿಜ್ಯಮಂಡಳಿ ಯಾರೊಂದಿಗೂ ಸರೀಕಾಗಿಲ್ಲ - ತಲ್ಲಂ
ಬೆಂಗಳೂರು : ಕನ್ನಡ ಚಿತ್ರೋದ್ಯಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಳುವಾಗಿದೆ ಎನ್ನುವ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಹಾಗೂ ವಿತರಕರ ಸಂಘಗಳ ಆರೋಪವನ್ನು ವಾಣಿಜ್ಯ ಮಂಡಲಿ ಸಾರಾ ಸಗಟಾಗಿ ನಿರಾಕರಿಸಿದೆ.
ಚಿತ್ರಮಂದಿರಗಳ ಮಾಲೀಕರೊಂದಿಗೆ ಸರೀಕಾಗಿರುವ ಮಂಡಳಿ ನಿರ್ಮಾಪಕರ ಹಿತವನ್ನು ರಕ್ಷಿಸುತ್ತಿಲ್ಲ ಎನ್ನುವ ಆರೋಪಗಳನ್ನು ನಿರಾಕರಿಸಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ - ನಿರ್ಮಾಪಕರ ಹಿತಕ್ಕೆ ಮಂಡಳಿ ಬದ್ಧವಾಗಿದೆ ಹಾಗೂ ನಿರ್ಮಾಪಕರ ಪರವಾಗಿ ಮಂಡಳಿ ಹೋರಾಟ ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹಂಪಿ ವಿಶ್ವ ವಿದ್ಯಾಲಯ ಪ್ರಕಟಿಸಿರುವ ಕರ್ನಾಟಕ ಚಲನಚಿತ್ರ ಇತಿಹಾಸ ಪುಸ್ತಕದ ಎರಡು ಸಂಪುಟಗಳನ್ನು ಬಹಿಷ್ಕರಿಸಿರುವುದನ್ನು ಸಮರ್ಥಿಸಿಕೊಂಡಿರುವ ತಲ್ಲಂ, ಈ ಪುಸ್ತಕಗಳಲ್ಲಿ ಉದ್ಯಮದ ಗಣ್ಯರ ಹಾಗೂ ಮಂಡಳಿಯ ಸದಸ್ಯರ ಕುರಿತು ಅವಹೇಳನಕಾರಿ ಹೇಳಿಕೆಗಳಿದ್ದವು ಎಂದಿದ್ದಾರೆ.
ಪುಸ್ತಕದಲ್ಲಿನ ಮಾಹಿತಿಗಳು ತಪ್ಪು ಮಾಹಿತಿಗಳನ್ನು ಹೊಂದಿರುವುದರಿಂದ ಪುಸ್ತಕವನ್ನು ನಿಷೇಧಿಸಲಾಗಿದೆ ಎಂದು ತಲ್ಲಂ ಹೇಳಿದ್ದಾರೆ. ತಲ್ಲಂ ಅವರ ಈ ಹೇಳಿಕೆಗೆ ಚಿನ್ನೇಗೌಡ, ಜಯಮಾಲಾ, ಬಿ.ಕೆ.ಗಂಗಪ್ಪ , ಕೆ.ವಿ.ಚಂದ್ರಶೇಖರ್, ಥಾಮಸ್ ಡಿಸೋಜಾ ಹಾಗೂ ಪಿ.ನಾರಾಯಣರೆಡ್ಡಿ ಸಹಿ ಹಾಕಿದ್ದಾರೆ.


Click it and Unblock the Notifications











