ನನಗೆ ಪ್ರಶಸ್ತಿ ಬೇಕಿಲ್ಲ : ಸೀತಾರಾಂ ವಿರುದ್ಧ ಜಗ್ಗೇಶ್ ಕಿಡಿ
ನಾನು ನಾಯಕನೇ ಹೊರತು, ಪೋಷಕನಟನಲ್ಲ.. ಜನರ ಪ್ರೀತಿಯೇ ನನಗೆ ಪ್ರಶಸ್ತಿ..
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘ಮಠ’ ಚಿತ್ರದಲ್ಲಿ ನನ್ನದು ನಾಯಕನ ಪಾತ್ರ. ಆದರೆ ಆಯ್ಕೆ ಸಮಿತಿ ಪೋಷಕ ನಟನ ಪ್ರಶಸ್ತಿ ನೀಡಿದೆ. ಚಿತ್ರರಂಗದಲ್ಲಿ ನಾಯಕನಾಗಲು ನಾನು ಪಟ್ಟ ಪಾಡು, ಅಷ್ಟಿಷ್ಟಲ್ಲ. ಈಗ ಇನ್ನೊಂದು ಅವಮಾನ ನನ್ನ ಪಾಲಿಗೆ ಬಂದಿದೆ ಎಂದರು.
‘ಮಠ’ ನನ್ನ ಅಭಿನಯದ ನೂರನೇ ಚಿತ್ರ. ಜನಮೆಚ್ಚಿದ ಚಿತ್ರ. ಈ ಸರ್ಕಾರದಲ್ಲಿ ಪ್ರಶಸ್ತಿ ದಕ್ಕದು ಎಂಬುದು ನನಗೆ ಗೊತ್ತಿತ್ತು. ಟಿ.ಎನ್.ಸೀತಾರಾಂ ಅವರು ಆಯ್ಕೆ ಸಮಿತಿ ಅಧ್ಯಕ್ಷರಾದ ಮೇಲೆ ಪ್ರಶಸ್ತಿಯ ಆಸೆಯನ್ನು ಬಿಟ್ಟೆ. ಆಯ್ಕೆ ಸಮಿತಿ ನನ್ನನ್ನು ಅವಮಾನಿಸಲು ಪೋಷಕನಟ ಪ್ರಶಸ್ತಿ ನೀಡಿದೆ ಎಂದು ಜಗ್ಗೇಶ್ ದೂರಿದ್ದಾರೆ.
ಸೀತಾರಾಂ ಪ್ರತಿಕ್ರಿಯೆ : ಪೋಷಕ ನಟ ಪ್ರಶಸ್ತಿ ಬಗ್ಗೆ ಜಗ್ಗೇಶ್ ಹಗುರವಾಗಿ ಮಾತನಾಡಿದ್ದಾರೆ. ಈ ಹಿಂದೆ ರವಿಚಂದ್ರನ್, ಅಮಿತಾಭ್, ಅನಂತನಾಗ್ ಮತ್ತಿತರರಿಗೆ ಪೋಷಕ ನಟ ಪ್ರಶಸ್ತಿ ನೀಡಿ ಗೌರವಿಸಿದ ನಿದರ್ಶನಗಳಿವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಟಿ.ಎನ್.ಸೀತಾರಾಂ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications











