ಪಾರ್ವತಮ್ಮ ರಾಜ್ಕುಮಾರ್ ವಿರುದ್ಧ ವಾಣಿಜ್ಯ ಮಂಡಳಿ ಶಿಸ್ತುಕ್ರಮ?
ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್ಸಿಸಿ) ನಿರ್ಮಾಪಕಿ ಪಾರ್ವತಮ್ಮ ಸೇರಿದಂತೆ ಕೆಲವು ನಿರ್ಮಾಪಕರಿಗೆ ಎಚ್ಚರಿಕೆ ನೀಡಿದೆ. ಮಂಡಳಿಯ ನಾಮಫಲಕವನ್ನು ಡಿ.24 ರಂದು ಒತ್ತಾಯಪೂರ್ವಕವಾಗಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಬದಲಿಸಿರುವುದು ಸಲ್ಲದು. ಕೂಡಲೇ ತಪ್ಪನ್ನು ಸರಿಪಡಿಸುವಂತೆ ಕೆಎಫ್ಸಿಸಿ ಸೂಚಿಸಿದೆ.
ಮಂಡಳಿಯ ಅಧ್ಯಕ್ಷ ಎಚ್.ಡಿ.ಗಂಗರಾಜು ಸುದ್ದಿಗಾರರೊಂದಿಗೆ ಮಾತನಾಡಿ, ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮತ್ತಿತರರು ಈ ಕೃತ್ಯವೆಸಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒತ್ತಾಯ ಪೂರ್ವಕವಾಗಿ ಮಂಡಳಿಯ ಹೆಸರನ್ನು ಬದಲಿಸಿದ ಗುಂಪಿನ ಮೇಲೆ ಶಿಸ್ತು ಕ್ರಮ ಜರುಗಿಸಲು, ಮಂಡಳಿಯ 110 ಸದಸ್ಯರು ಲಿಖಿತವಾಗಿ ರೂಪದಲ್ಲಿ ಒತ್ತಾಯಿಸಿದ್ದಾರೆ. ಡಿ.24ರೊಳಗೆ ಮಂಡಳಿಯ ನಾಮಫಲಕವನ್ನು ಹಿಂದಿನಂತೆಯೇ ಬದಲಿಸಿ ಸರಿಪಡಿಸದಿದ್ದರೆ ಶಿಸ್ತುಕ್ರಮ ಅನಿವಾರ್ಯವಾಗುತ್ತದೆ. ಡಿ.24 ರಂದು ನಡೆವ ಸಭೆಯಲ್ಲಿ ಅಂತಿಮ ತೀರ್ಮಾನ ಹೊರ ಬರಲಿದೆ ಎಂದು ಗಂಗರಾಜು ತಿಳಿಸಿದ್ದಾರೆ.
ಅವಿಶ್ವಾಸ : ಕೆಎಫ್ಸಿಸಿ ಅಧ್ಯಕ್ಷ ಗಂಗರಾಜು ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ನಿರ್ಮಾಪಕರ ಸಂಘ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮಂಡಳಿಯ 100 ಸದಸ್ಯರ ಸಹಿಗಳನ್ನು ಸಂಗ್ರಹಿಸಲಾಗಿದೆ. ಪರಭಾಷಾ ಚಿತ್ರಗಳ ಪರವಾಗಿ ನಿಂತಿರುವ ಅಧ್ಯಕ್ಷರಿಂದ ಕನ್ನಡ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಸ್ತಿತ್ವಕ್ಕೆ ಅಪಾಯ ಬಂದಿದೆ. ಪರಭಾಷಾ ಚಿತ್ರಗಳ ವಿರುದ್ಧ ನಡೆದ ಚಿತ್ರೋದ್ಯಮದ ಸಮರದಲ್ಲಿ ಮಂಡಳಿ ಕಳೆದು ಹೋಗುವುದೇ ಎನ್ನುವುದನ್ನು ಕಾದು ನೋಡಬೇಕು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications