ಅಮಿತಾಭ್ರ ಕ್ಷಮೆಯಷ್ಟೇ ಸಾಲದು, ಶಿಕ್ಷೆ ಅನುಭವಿಸಲಿ...
ಪಣಜಿ : ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅಮಿತಾಭ್ ಬಚ್ಚನ್, ಈ ಬಗ್ಗೆ ಕ್ಷಮೆ ಕೇಳಿದ್ದರು. ಆದರೆ ಪಟ್ಟು ಬಿಡದ ನ್ಯಾಯಾಲಯ, ಈ ಸಂಬಂಧಿ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗಲು ಸಮನ್ಸ್ ಜಾರಿ ಮಾಡಿದೆ.
ರಾಷ್ಟ್ರೀಯ ತಂಬಾಕು ನಿರ್ಮೂಲನ ಸಂಘಟನೆ ಸಲ್ಲಿಸಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ, ಪಣಜಿಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ನ.29ರಂದು ಅಮಿತಾಭ್ ಹಾಜರಾಗುವಂತೆ ಸೂಚನೆ ನೀಡಿದೆ.
ಏನಿದು ಸಂಗತಿ? : ‘ಫ್ಯಾಮಿಲಿ’ ಚಿತ್ರದಲ್ಲಿ ಅಮಿತಾಭ್ ಸಿಗಾರ್ ಸೇದುವ ದೃಶ್ಯವೊಂದಿದೆ. ಆ ಚಿತ್ರವನ್ನು ತಂಬಾಕು ಕಂಪನಿಯಾಂದು, ಪ್ರಚಾರ ಫಲಕಗಳಲ್ಲಿ ಬಳಸಿಕೊಂಡಿದೆ. ಇಂತಹ ಜಾಹೀರಾತುಗಳಲ್ಲಿ ಪಾಲ್ಗೊಳ್ಳುವುದು ತಪ್ಪು. ಇದರಿಂದ ತಂಬಾಕು ಸೇವನೆಗೆ ಯುವಕರಿಗೆ ಉತ್ತೇಜನ ದೊರಕುತ್ತದೆ. ಅಮಿತಾಭ್ ತಮ್ಮ ಸ್ಥಾನದ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ರಾಷ್ಟ್ರೀಯ ತಂಬಾಕು ನಿರ್ಮೂಲನ ಸಂಘಟನೆಯ ಆಕ್ಷೇಪ.
ತಂಬಾಕು ಜಾಹೀರಾತುಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಪಾಲ್ಗೊಳ್ಳುವುದರಿಂದ, ಯುವಕರು ಅತ್ತ ಆಸಕ್ತರಾಗುತ್ತಾರೆ. ಶೇ.10ರಷ್ಟು ಮಂದಿ ತಂಬಾಕು ದಾಸರಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಅಮಿತಾಭ್ ಈ ಪ್ರಕರಣದಲ್ಲಿ ಕ್ಷಮೆ ಕೇಳಿದರಷ್ಟೇ ಸಾಲದು, ಕಾನೂನು ಉಲ್ಲಂಘಟನೆಗಾಗಿ ಶಿಕ್ಷೆ ಅನುಭವಿಸಬೇಕು ಎನ್ನುವುದು ಸಂಘಟನೆಯ ಬಿಗಿ ಪಟ್ಟು.
ತಂಬಾಕು ವಿರೋಧಿ ಆಂದೋಲನದ ರಾಯಭಾರಿಯಾಗಲು ಅಮಿತಾಭ್ ಮುಂದಾದರೆ, ಪ್ರಕರಣ ವಾಪಸ್ಸು ಪಡೆಯುವುದಾಗಿ ಸಂಘಟನೆ ಸ್ಪಷ್ಟಪಡಿಸಿದೆ.
(ಏಜನ್ಸೀಸ್)


Click it and Unblock the Notifications











