ಟ್ಯೂನ್ ಕದಿಯೋದು ಪೈರಸಿಗಿಂತ ನೀಚ ಕೆಲ್ಸ : ಮನೋಮೂರ್ತಿ
ಸಂಪಾದಕರೆ,
ಮುಂಗಾರು ಮಳೆ ಚಿತ್ರದ ಸಂಗೀತವನ್ನು 'ವಾನಾ' ಎಂಬ ತೆಲುಗು ಚಿತ್ರದಲ್ಲಿ ಬಳಸಿಕೊಳ್ಳುತ್ತಿರುವುದಾಗಿ ಎಂದು ನಾಲ್ಕು ತಿಂಗಳ ಹಿಂದೆ ಚೈನ್ನೈನ ಸಂಗೀತಗಾರರು ಹಾಗೂ ರೆಕಾರ್ಡಿಂಗ್ ಇಂಜೀನಿಯರ್ಗಳು ನನಗೆ ತಿಳಿಸಿದ್ದರು . ಆ ಸಮಯದಲ್ಲಿ ನಾನು ವಾನಾ ಚಿತ್ರದ ನಿರ್ಮಾಪಕರನ್ನು ಸಂಪರ್ಕಿಸಿದಾಗ, ಅವರು ನಾನು ಸಂಯೋಜನೆ ಮಾಡಿದ ಟ್ಯೂನ್ಗಳಿಗೆ ನನ್ನ ಹೆಸರೇ ನೀಡುವುದಾಗಿ ಭರವಸೆ ನೀಡಿದ್ದರು. ಕಳೆದ ಕೆಲ ದಿನಗಳ ಹಿಂದೆ 'ವಾನಾ' ಚಿತ್ರದ ಧ್ವನಿಸುರಳಿ ಬಿಡುಗಡೆಗೊಂಡಿದ್ದು, ಅದರಲ್ಲಿರುವ ನಾಲ್ಕು ಹಾಡುಗಳನ್ನು ಕೇಳಿದಾಗ, ಅವು ಮುಂಗಾರು ಮಳೆ ಚಿತ್ರದ ಹಾಡುಗಳ ಪಡಿಯಚ್ಚು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಅನಿಸುತ್ತಿದೆ ಯಾಕೋ ಇಂದು , ಮುಂಗಾರುಮಳೆ ಶೀರ್ಷಿಕೆ ಗೀತೆ, ಇವನು ಗೆಳೆಯನಲ್ಲ ಹಾಗೂ ಅರಳುತಿರು ಹಾಡುಗಳನ್ನು ತೆಲುಗಿಗೆ ಅದೇ ಟ್ಯೂನ್ನೊಂದಿಗೆ ಭಟ್ಟಿ ಇಳಿಸಲಾಗಿದೆ. ಧ್ವನಿಸುರುಳಿಯಲ್ಲಿ ನನ್ನ ಹೆಸರನ್ನು ನೀಡುವ ಸೌಜನ್ಯತೆಯನ್ನು ಅವರು ತೋರಿಸಿಲ್ಲ. ಇದು ಪೈರೆಸಿಗಿಂತಾ ನೀಚವಾದ ಕೆಲಸ. ಸೃಜನಶೀಲ ಕೃತಿಯೊಂದನ್ನು ಹಗಲು ಹೊತ್ತಿನಲ್ಲೇ ಹರಣ ಮಾಡಿದಂತಾಗಿದೆ. ಯಾರದೋ ಮಗುವನ್ನು ಎತ್ತಿಕೊಂಡು ಹೋಗಿ ತಮ್ಮದೇ ಆ ಮಗು ಎನ್ನುವಂತಿದೆ ಈ ಪ್ರಸಂಗ. ಇದರಿಂದ ನನಗೆ ನೋವಾಗಿದ್ದು, ನಾನು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇನೆ. ತೆಲುಗು ನಿರ್ಮಾಪಕರಿಗೆ ಸರಿಯಾದ ಪಾಠ ಕಲಿಸುವ ನಿರ್ಧಾರ ಮಾಡಿದ್ದೇನೆ.
-ಮನೋಮೂರ್ತಿ
ಸಂಗೀತ ನಿರ್ದೇಶಕ
ಪೂರಕ ಓದಿಗೆ
ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!


Click it and Unblock the Notifications











