Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾಗೆ ಚಿತ್ರರಂಗದಿಂದ 1 ವರ್ಷ ನಿಷೇಧ!
ಕನ್ನಡ ಚಿತ್ರರಂಗದಲ್ಲಿ ತಲೆದೋರಿದ್ದ ಒಣಪ್ರತಿಷ್ಠೆಯ ಕದನಕ್ಕೆ ಕೊನೆಗೂ ತೆರೆಬಿದ್ದಿದೆ. 'ದಂಡಂ ದಶಗುಣಂ' ಚಿತ್ರದ ಪ್ರಚಾರಕ್ಕೆ ಬರಲಿಲ್ಲ ಎಂಬ ಕಾರಣದಿಂದ ವಿವಾದದ ಕೇಂದ್ರಬಿಂದುವಾಗಿದ್ದ ಕನ್ನಡ ಚಿತ್ರರಂಗದ ಅಭಿನೇತ್ರಿ 'ಗೌರಮ್ಮ' ರಮ್ಯಾ ಅಕಾ ದಿವ್ಯಾ ಸ್ಪಂದನಾಗೆ ಕನ್ನಡ ಚಿತ್ರರಂಗದಿಂದ 1 ವರ್ಷದ ನಿಷೇಧ ಹೇರಲಾಗಿದೆ.
ಮಂಗಳವಾರ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ ಪಾಟೀಲ ಅವರು, ರಮ್ಯಾ ಚಿತ್ರ ಪ್ರಚಾರಕ್ಕೆ ತೋರಿದ 'ದಿವ್ಯ' ಅಸಡ್ಡೆಯಿಂದಾಗಿ ಅವರ ವಿರುದ್ಧ ಈ ಕಠಿಣ ಕ್ರಮ ಜಗುರಿಸಲಾಗಿದೆ. ಇನ್ನು ಒಂದು ವರ್ಷಗಳ ಕಾಲ ಅವರನ್ನು ಯಾವುದೇ ಚಿತ್ರಕ್ಕೂ ಸಹಿ ಮಾಡಿಸಿಕೊಳ್ಳುವಂತಿಲ್ಲ. ರಮ್ಯಾ ಯಾವುದೇ ಚಿತ್ರದಲ್ಲಿ ನಟಿಸುವಂತಿಲ್ಲ. ಚಿತ್ರರಂಗದ ಎಲ್ಲಾ ಸಂಘಗಳನ್ನು ಸಂಪರ್ಕಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ನುಡಿದರು.
'ದಂಡಂ ದಶಗುಣಂ' ಚಿತ್ರದ ನಿರ್ಮಾಪಕ ಗಣೇಶ್ ಅವರು ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ರಮ್ಯಾ ಬರದೆ ಉದ್ಧಟತನ ತೋರಿದ್ದರು ಎಂದು ದೂರಿದ್ದರೆ, ತಾನು ಅವರಿಗೆ ಹಣಕಾಸಿನ ಸಹಾಯ ಮಾಡಿದ್ದೇ ತಪ್ಪೆ ಎಂದು ರಮ್ಯಾ ಮಾಧ್ಯಮದೆದಿರು ಗೋಳಿಟ್ಟುಕೊಂಡು ಕಣ್ಣೀರುಗರೆದಿದ್ದರು. ಮಾಧ್ಯಮದೊಂದಿಗೆ ಮಾತನಾಡುವಾಗ ಕೆಲ ಹಿರಿಯ ನಿರ್ದೇಶಕ, ನಿರ್ಮಾಪಕರ ಬಗ್ಗೆಯೂ ಅವಹೇಳನಕಾರಿ ಮಾತುಗಳನ್ನು ರಮ್ಯಾ ಆಡಿದ್ದರು.
ಈ ಹಗರಣದಿಂದಾಗಿ ಕೆಎಫ್ ಸಿಸಿ ಅಧ್ಯಕ್ಷ ಬಸಂತಕುಮಾರ ಪಾಟೀಲ ಮತ್ತು ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ನಡುವಿನ ಕದನವೂ ಜೀವ ಪಡೆದುಕೊಂಡಿತ್ತು. ಪಾಟೀಲರೇನು ಸುಪ್ರೀಂ ಅಲ್ಲ ಎಂದು ಅಂಬರೀಷ್ ಮಾತಿನ ಚಾಟಿ ಬೀಸಿದ್ದರೆ, ನಾನು ಸುಪ್ರೀಂ ಅಲ್ಲ, ಆದರೆ ಮಂಡಳಿಯ ಆದೇಶವೇ ಸುಪ್ರೀಂ ಎಂದು ಮರುಮಾತಿನ ಉತ್ತರ ಪಾಟೀಲರು ನೀಡಿದ್ದರು. ರಮ್ಯಾ ವಿರುದ್ಧ ಹೇರಿರುವ ನಿಷೇಧದ ಈ ನಿರ್ಧಾರದಿಂದಾಗಿ ಇವರಿಬ್ಬರ ನಡುವಿನ ಗುದ್ದಾಟ ಯಾವ ಹಂತ ತಲುಪುವುದೋ?
ಮಾತ್ ಮಾತಲ್ಲಿ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ಕಿಚ್ಚ ಹುಚ್ಚ, ದಂಡಂ ದಶಗುಣಂ ಸೇರಿದಂತೆ ಅನೇಕ ಚಿತ್ರಗಳ ನಿರ್ಮಾಪಕ, ನಿರ್ದೇಶಕ, ನಟರೊಂದಿಗೆ ಒಂದಿಲ್ಲೊಂದು ವಿವಾದಕ್ಕೆ ಸಿಲುಕಿಕೊಂಡಿದ್ದ ರಮ್ಯಾ, ಈ ಎಲ್ಲ ಹಗರಣಗಳಿಂದ ಮನನೊಂದು ಕನ್ನಡ ಚಿತ್ರರಂಗಕ್ಕೇ ವಿದಾಯ ಹೇಳುವುದಾಗಿ ಹೇಳಿದ್ದರು. ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಆದಾದ ನಂತರವೇ, ಅವರಿಗೆ 1 ವರ್ಷದ ನಿಷೇಧ ಹೇರಲಾಗಿದೆ. ತಕ್ಕಳ್ಳಪ್ಪ! ಅವರೇ ನಟಿಸಲ್ಲ ಅಂತ ಹೇಳಿದ್ಮೇಲೆ ಇವರು ನಿಷೇಧ ಹೇರಿ ಏನು ಪ್ರಯೋಜನ? ಆದರೂ, ಈ ನಿಷೇಧಕ್ಕೆ ರಮ್ಯಾ ಅವರ ಒಂದು ಪದದ ಪ್ರತಿಕ್ರಿಯೆ ಏನು ಗೊತ್ತಾ? "ಜೋಕ್!"