‘ಅಭಿ’ಗೆ ಹುಬ್ಬಳ್ಳಿ ಜೈನ ಸಮಾಜದ ವಿರೋಧ
ಹುಬ್ಬಳ್ಳಿ: ಇಲ್ಲಿನ ದಿಗಂಬರ ಜೈನ ಸಮಾಜವು ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ‘ಅಭಿ’ ಚಿತ್ರ ಪ್ರದರ್ಶನವನ್ನು ವಿರೋಧಿಸಿ, ನಗರದ ಚಿತ್ರ ಮಂದಿರಗಳ ಮುಂದೆ ಪ್ರತಿಭಟನೆ ನಡೆಸಲಿದೆ.
ಭಗವಾನ್ ಬಾಹುಬಲಿ ಗೋಮಟೇಶ್ವರನ ಕುರಿತು ಅಭಾಸ ತರುವ ಹೇಳಿಕೆಗಳು ‘ಅಭಿ’ ಚಿತ್ರದಲ್ಲಿ ವೆ. ಅಂತಹ ಸಂಭಾಷಣೆಗಳನ್ನು ತಕ್ಷಣವೇ ಚಿತ್ರದಿಂದ ತೆಗೆದು ಹಾಕುವಂತೆ ಜೈನ ಸಮಾಜವು ಚಿತ್ರ ನಿರ್ದೇಶಕರನ್ನು ಆಗ್ರಹಿಸಿದೆ. ನಗರದ ಶ್ರೀನಗರ ಚಿತ್ರಮಂದಿರದಲ್ಲಿ ‘ಅಭಿ’ ಚಿತ್ರ ಪ್ರದರ್ಶನ ನಡೆಯುತ್ತಿದೆ. ಈ ಚಿತ್ರವನ್ನು ಚಿತ್ರಮಂದಿರದಿಂದ ತಕ್ಷಣವೇ ವಾಪಾಸು ತೆಗೆದುಕೊಳ್ಳುವಂತೆ ಆಗ್ರಹಿಸಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜೈನ ಸಮಾಜದ ಕಾರ್ಯದರ್ಶಿ ಶಾಂತಿನಾಥ್ ಕೆ. ಹೊಟಪೇಟಿ ತಿಳಿಸಿದ್ದಾರೆ.
‘ಅಭಿ’ ಚಿತ್ರದಲ್ಲಿರುವ ಕೆಲವು ಸಂಭಾಷಣೆಗಳಷ್ಟೇ ಅಲ್ಲದೆ ಸುಮ್ ಸುಮ್ನೇ ಎಂಬ ಹಾಡಿನ ಬಗ್ಗೆಯೂ ಜೈನ ಸಮಾಜ ಆಕ್ಷೇಪವೆತ್ತಿದೆ. ಈ ಕುರಿತು ಸಿನೆಮಾ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಜೈನ ಸಮಾಜ ಪತ್ರವೊಂದನ್ನು ಬರೆದಿದ್ದು , ಚಿತ್ರದಲ್ಲಿ ಭಗವಾನ್ ಬಾಹುಬಲಿಗೆ ಅಪಮಾನಕರವಾಗಿರುವ ಹೇಳಿಕೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











