ಪರಭಾಷಾ ಚಿತ್ರೋದ್ಯಮದಿಂದ ದಿಗ್ಭಂಧನ?
ಬೆಂಗಳೂರು : ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಮೇಲೆ ಏಳು ವಾರಗಳ ನಿರ್ಬಂಧ ವಿಧಿಸಿರುವುದಕ್ಕೆ ಪ್ರತಿಯಾಗಿ ಕನ್ನಡ ಚಿತ್ರೋದ್ಯಮದ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕಲು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಜ್ಜಾಗಿದೆ . ಇದರಿಂದ ಪರಭಾಷಾ ಚಿತ್ರಗಳಿಗೆ ಸಾಕಷ್ಟು ನಷ್ಟ ಅನುಭವಿಸಿದೆ.
ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣ ನಿಷೇಧಿಸುವುದು, ಪರಭಾಷಾ ಚಿತ್ರಗಳಿಂದ ಕನ್ನಡ ತಂತ್ರಜ್ಞರನ್ನು ದೂರವಿಡುವುದು, ಕನ್ನಡ ಚಿತ್ರೋದ್ಯಮಕ್ಕೆ ಫಿಲಂ ನೆಗೆಟಿವ್ ಸೇರಿದಂತೆ ಪ್ರಮುಖ ಕಚ್ಚಾ ಸಾಮಾಗ್ರಿಗಳನ್ನು ಪೂರೈಕೆ ನಿಲ್ಲಿಸಬೇಕು ಎಂದು ಇತರೆ ರಾಜ್ಯಗಳ ಚಲನಚಿತ್ರ ವಾಣಿಜ್ಯ ಮಂಡಳಿಗಳ ಪ್ರಮುಖರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ , ದಕ್ಷಿಣ ಭಾರತ ಚಲನಚಿತ್ರ ಮಂಡಳಿ ಅಧ್ಯಕ್ಷ ಕೆ. ದೇವಿ ವರಪ್ರಸಾದ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್. ರಮೇಶ್ ಅವರಿಗೆ ಪತ್ರ ಬರೆದಿದ್ದಾರೆ.
ಸೆಪ್ಟೆಂಬರ್ 24 ರೊಳಗೆ ಭಾರತೀಯ ಚಲನಚಿತ್ರ ಒಕ್ಕೂಟದ ಸಭೆ ಕರೆದು ವಿವಾದದ ಕುರಿತು ಚರ್ಚಿಸಬೇಕು ಇಲ್ಲದಿದ್ದರೆ ಕನ್ನಡ ಚಿತ್ರೋದ್ಯಮದ ಮೇಲೆ ಸಂಪೂರ್ಣ ನಿಷೇಧ ಹೇರುವುದು ಖಚಿತ ಎಂದು ಅವರು ಎಚ್ಚರಿಸಿದ್ದಾರೆ.
ಪತ್ರದಲ್ಲಿ ಪ್ರಸ್ತಾಪಿಸಿರುವ ಮುಖ್ಯ ಅಂಶಗಳು ಹೀಗಿವೆ:
- ಕನ್ನಡ ಕಲಾವಿದರು ಮತ್ತು ತಂತ್ರಜ್ಞರನ್ನು ಇತರೆ ಭಾಷಾ ಚಿತ್ರಗಳಲ್ಲಿ ಕೆಲಸಮಾಡುವಂತಿಲ್ಲ.
- ಕನ್ನಡ ಚಿತ್ರಗಳನ್ನು ಇತರೆ ಭಾಷೆಗಳಿಗೆ ಡಬ್ಅಥವಾ ರೀಮೇಕ್ ಮಾಡುವಂತಿಲ್ಲ.
- ಕನ್ನಡ ನಿರ್ಮಾಪಕರು ಬೇರೆ ಭಾಷೆಗಳನ್ನು ತಯಾರಿಸುವಂತಿಲ್ಲ.
- ಇತರೆ ಭಾಷೆಗಳ ನಿರ್ಮಾಪಕರು ಕನ್ನಡ ಚಿತ್ರಗಳನ್ನು ತಯಾರಿಸುವಂತಿಲ್ಲ.
- ಕರ್ನಾಟಕದಲ್ಲಿ ಬೇರಾವುದೇ ಭಾಷೆಗಳ ಚಿತ್ರಗಳ ಚಿತ್ರೀಕರಣ ನಡೆಸುವುದಿಲ್ಲ.
- ಕರ್ನಾಟಕ ಬಿಟ್ಟು ಬೇರೆ ಯಾವುದೇ ರಾಜ್ಯಗಳಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ.
- ಬೇರೆ ಭಾಷೆಗಳ ಚಿತ್ರಗಳ ಪ್ರದರ್ಶದ ಹಕ್ಕಿಗಾಗಿ ಕನ್ನಡ ವಿತರಕರು ನೀಡಿರುವ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುಲಾಗುವುದು.
- ಲ್ಯಾಬೋರೇಟರಿ, ಹೊರಾಂಗಣ ಚಿತ್ರೀಕರಣ ಸೌಲಭ್ಯ, ಎಡಿಟಿಂಗ್, ಡಬ್ಬಿಂಗ್, ಗ್ರಾಫಿಕ್ಸ್ ಸೇರಿದಂತೆ ಕನ್ನಡ ಚಿತ್ರಗಳಿಗೆ ಇದುವವರೆಗೆ ನೀಡುತ್ತಿದ್ದ ಎಲ್ಲಾ ಸೌಕರ್ಯ ಹಿಂತೆಗೆದು ಕೊಳ್ಳಲಾಗುವುದು.
- ಇನ್ನು ಮುಂದೆ ಕನ್ನಡ ಚಿತ್ರಗಳಿಗೆ ಡಿಟಿಎಸ್ ಹಾಗೂ ಡಾಲ್ಬಿ ಪರವಾನಗಿ ನೀಡದಿರುವುದು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications