'ಆ ದಿನಗಳು' ಕಂಡು ಬೆಚ್ಚಿಬಿದ್ದ ಕಾಂಗ್ರೆಸ್ ಗುರ್ ಎಂದಿದೆ!
ಬೆಂಗಳೂರು, ಅ.23 : ಪತ್ರಕರ್ತ ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ'ಆ ದಿನಗಳು'ಚಿತ್ರದ ಬಗ್ಗೆ ಕೆಲವು ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಸತ್ಯಕತೆ ಎಂಬ ಲೇಬಲ್ ಅಂಟಿಸಿಕೊಂಡು ಈ ಚಿತ್ರ ಹೊರಬಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಚಿತ್ರದ ಮುಖಾಂತರ ಕಾಂಗ್ರೆಸ್ ಮುಖಂಡರಾದ ದಿ.ದೇವರಾಜ ಅರಸು, ಆರ್.ಎಲ್.ಜಾಲಪ್ಪ, ಬಿ.ಕೆ.ಹರಿಪ್ರಸಾದ್ ಅವರ ಘನತೆಗೆ ಚ್ಯುತಿ ತರಲಾಗಿದೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆರೋಪಿಸಿದೆ.
ಕರ್ನಾಟಕದಲ್ಲಿ ರೌಡಿಸಂಗೆ ಬೆಂಬಲ ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಚಿತ್ರದಲ್ಲಿ ಬಿಂಬಿಸಲಾಗಿದೆ. ರಾಜಕೀಯ ಪ್ರೇರಿತರಾಗಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಏಳು ದಿನಗಳೊಳಗಾಗಿ ಅಗತ್ಯ ಮಾರ್ಪಾಡು ಮಾಡಿ, ಚಿತ್ರವನ್ನು ಪ್ರದರ್ಶಿಸಲಿದ್ದರೇ,ಚಿತ್ರಕ್ಕೆ ಬಹಿಷ್ಕಾರ ಹಾಕುತ್ತೇವೆ. ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಎಲ್ಲವೂ ಸತ್ಯ : ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿರುವ ಕತೆಗಾರ ಮತ್ತು ಪತ್ರಕರ್ತ ಶ್ರೀಧರ್, ಬೆಂಗಳೂರಿನಲ್ಲಿ ನಡೆದ ಘಟನೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪಕ್ಷದ ನಾಯಕರನ್ನು ಓಲೈಸಲು ಕಾಂಗ್ರೆಸ್ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಅನಗತ್ಯ ವಿವಾದಕ್ಕೆ ದಾರಿ ಮಾಡುತ್ತಿದೆ. ಈಗಿನ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಬಗ್ಗೆ ನಾನು ಚಿತ್ರದಲ್ಲಿ ಹೇಳಿಲ್ಲ. ನಾನು ಪ್ರಸ್ತಾಪಿಸಿರುವುದು ಅಂದಿನ ಹರಿಪ್ರಸಾದ್ ಬಗ್ಗೆ ಎಂದು ಶ್ರೀಧರ್ ವಿವರಣೆ ನೀಡಿದ್ದಾರೆ.
ಏನಿದು ವಿವಾದ ? : ದಾದಾಗಿರಿಯ ದಿನಗಳು ಕೃತಿಯಲ್ಲಿ ಅಗ್ನಿ ಶ್ರೀಧರ್ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. 1970ಮತ್ತು 75ರ ನಡುವಿನ ಬೆಂಗಳೂರಿನ ರೌಡಿಸಂ ಲೋಕದ ಪರಿಚಯ ನೀಡಿದ್ದಾರೆ. ಈ ಕೃತಿ ಆಧರಿಸಿ ಆ ದಿನಗಳು ಚಿತ್ರ ರೂಪುಗೊಂಡಿದೆ.
ಚಿತ್ರದಲ್ಲಿ ಕೊತ್ವಾಲ್ ರಾಮಚಂದ್ರ ಎಂಬ ರೌಡಿಯನ್ನು ದೇವರಾಜ ಅರಸ್, ಜಾಲಪ್ಪ, ಹರಿಪ್ರಸಾದ್ ಬೆಂಬಲಿಸಿದ್ದರು. ಅವರೇ ಬೆಳೆಸಿದರು. ಚಿತ್ರದಲ್ಲಿ ಹರಿಪ್ರಸಾದ್ ಬದಲಿಗೆ ಹರೀಶ್ ಪ್ರಸಾದ್ ಎಂದು ಹೇಳಲಾಗಿದೆ. ಈ ಮುಖಾಂತರ ಕಾಂಗ್ರೆಸ್ ನಾಯಕರ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ದೂರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications











