ಉದಯ ಟೀವಿಗೂ ಚಿದಾನಂದ ಟಾಟ ; ಇದೆಂಥಾ ಆಟ- ಕಾಟ?
*ದಟ್ಸ್ಕನ್ನಡ ಬ್ಯೂರೊ
ಚಿದಾನಂದ ಒಳಗೊಳಗೇ ನಡುಗುತ್ತಿದ್ದರು! ಉದಯ ಟೀವಿಯ ಪಾಂಡುರಂಗ ಧಾರಾವಾಹಿಯಿಂದ ತಮ್ಮ ನಿರ್ಗಮನದ ಸುದ್ದಿ ಹೇಳಲು ಅವರು ಮಂಗಳವಾರ (ಡಿ. 23) ಸುದ್ದಿಗೋಷ್ಠಿ ಕರೆದಿದ್ದರು.
ಬಹು ದಿನಗಳಿಂದ ನಿರ್ಮಾಪಕರಾದ ಭಾ.ಮ.ಹರೀಶ್ ಮತ್ತು ನರೇಶ್ ಜೈನ್ ನನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು. ಅವರು ಹೇಳಿದ ಅಶ್ಲೀಲ ಸಂಭಾಷಣೆಗಳನ್ನು ಹೇಳೋದಿಲ್ಲ ಅಂತ ಪಟ್ಟು ಹಿಡಿದಾಗ ದೈಹಿಕ ಕಿರುಕುಳಕ್ಕೂ ಮುಂದಾದರು. ಕೊನೆಗೆ ಜೀವ ಬೆದರಿಕೆ ಹಾಕಿದರು. ಪೊಲೀಸರಿಗೆ ದೂರು ಕೊಟ್ಟೆ. ಬಂಧಿಸಿದ ಪೊಲೀಸರು ಈಗ ಜಾಮೀನಿನ ಮೇಲೆ ಅವರನ್ನು ಹೊರಗೆ ಬಿಟ್ಟಿದ್ದು, ಭಯದ ನೆರಳಲ್ಲೇ ಸದಾ ಓಡಾಡುವಂತಾಗಿದೆ. ಈಗಲೂ ಪೊಲೀಸರ ರಕ್ಷಣೆಯಲ್ಲೇ ಇರಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ ಎಂದು ಚಿದಾನಂದ್ ನಡುಗಿದರು.
ಅವರ ಪಕ್ಕದಲ್ಲಿ ಕೂತಿದ್ದ ‘ಅಯ್ಯೋ ಪಾಂಡು’ ಚಿತ್ರದ ನಾಯಕಿ, ಬಿ.ಜಯಶ್ರೀ ಅವರ ಮಗಳು ಸುಷ್ಮಾ ಚಿದಾನಂದ್ ಮಾತಿಗೆ ತಮ್ಮ ಕೊಸರಿನೊಟ್ಟಿಗೆ ಸಮರ್ಥನೆ ಕೊಟ್ಟರು. ಈ ಚಿತ್ರದ ನಿರ್ಮಾಪಕರೂ ಆಗಿರುವ ಹರೀಶ್ ಮತ್ತು ನರೇಶ್, ಚಿದಾನಂದ್ ಮತ್ತು ತಮ್ಮ ನಡುವೆ ಸಂಬಂಧ ಇದೆ ಎಂದು ಬಣ್ಣ ಕಟ್ಟಿ ಪ್ರಚಾರ ಮಾಡುತ್ತಿದ್ದಾರೆ ಎಂದು ಬಾಂಬ್ ಹಾಕಿದರು.
ತಮ್ಮ ಭಯ ತೋಡಿಕೊಂಡ ಚಿದಾನಂದ್ ಪಾ.ಪ. ಪಾಂಡು ಧಾರಾವಾಹಿ ಬಿಟ್ಟಿದ್ದಕ್ಕೆ ನೊಂದುಕೊಂಡರು. ಸಿಹಿ ಕಹಿ ಚಂದ್ರು ಮತ್ತೆ ಕರೆದರೆ ನಟಿಸುವುದಾಗಿ ಹ್ಯಾಪುಮೋರೆ ಹಾಕಿಕೊಂಡೇ ಹೇಳಿದರು.
ಇಷ್ಟಕ್ಕೂ ಪಾಂಡು ಹೀಗ್ಯಾಕೆ ಮಾಡುತ್ತಿದ್ದಾರೆ?
ನಿಜಕ್ಕೂ ಗುಣಮಟ್ಟದ ದೃಷ್ಟಿಯಲ್ಲಿ ‘ಪಾಂಡುರಂಗ’ ಅಧ್ವಾನ. ಸಾಲದ್ದಕ್ಕೆ ‘ಅಯ್ಯೋ ಪಾಂಡು’ ಚಿತ್ರದ ಸ್ಟಿಲ್ಸ್ ನೋಡಿಯೇ ಜನ ಚಿದಾನಂದ್ರನ್ನು ಹಂಗಿಸುತ್ತಿದ್ದಾರಂತೆ. ಆದ ಕಾರಣ ಚಿದಾನಂದ್ ಸ್ಥಿತಿ ಪಾಪ ಪಾಂಡು ಎಂಬಂತೆಯೇ ಆಯಿತೆ? ಮತ್ತೆ ಭವಿತವ್ಯದ ಬಗೆಗೆ ಆತಂಕ ಹುಟ್ಟಿರುವ ಚಿದಾನಂದ್ ಮೊನ್ನೆಯಷ್ಟೇ ಸಿಹಿಕಹಿ ಚಂದ್ರು ಅವರನ್ನು ಹುಡುಕಿಕೊಂಡು ಹೋಗಿ, ಪಾ.ಪ.ಪಾಂಡು 6 ಸೆಂಚುರಿ ಹೊಡೆದದ್ದಕ್ಕೆ ವಿಶ್ ಮಾಡಿ ಬಂದಿದ್ದಾರೆ. ಆಗ ಪಾಂಡು ತಲೆಯಲ್ಲಿ ಚಂದ್ರು ಏನಾದರೂ ಹುಳ ಬಿಟ್ಟಿರಬಹುದೇ ? ಅದು ಚಿದಾನಂದ್ ಹೀಗೆಲ್ಲ ವರ್ತಿಸಲು ಕಾರಣವೇ?
ಈ ಪ್ರಶ್ನೆಗಳು ಕೂಡ ಪಾಂಡು ಭವಿಷ್ಯದಂತೆಯೇ ಕಾಣುತ್ತಿವೆ.
‘ಅಯ್ಯೋ ಪಾಂಡು’ಗೆ ಜೀವಭಯ !
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











