ಇಲ್ಲಿ ಹೋರಾಟ, ಅಲ್ಲಿ ಡಬ್ಬಿಂಗ್: ಅಯ್ಯೋ ಮಂಜುನಾಥಾ!
ದಿನಾಂಕ 23-2-12ರಂದು ನಡೆದ ಕರ್ನಾಟಕ ಚಿತ್ರೋದ್ಯಮ ಬಂದ್ ಯಶಸ್ವಿಯಾಗಿದೆ. ಕೇಂದ್ರ ಸರಕಾರ ಹೇರಿರುವ ವಿಪರೀತ ತೆರಿಗೆ ಬಗ್ಗೆ ಕೆಮ್ಮಿ ಇಡೀ ಇಂಡಿಯನ್ ಚಿತ್ರೋದ್ಯಮ ಈ ತೀರ್ಮಾನ ಕೈಗೊಂಡು ಹೋರಾಟಕ್ಕೆ ಮುಂದಾಗಿತ್ತು. ಕರ್ನಾಟಕದಲ್ಲಿ ಪ್ರತಿಯೊಬ್ಬ ಚಿತ್ರೋದ್ಯಮಿಯೂ ಈ ಬಂದ್ನಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಕೇಳಿಕೊಂಡಿತ್ತು. ಅದಕ್ಕೆ ಸ್ಪಂದಿಸಿದ ಪ್ರತಿಯೊಬ್ಬರೂ ಬೀದಿಗಿಳಿದು ಹೋರಾಟ ಮಾಡಿದರು. ಶೂಟಿಂಗ್-ಡಬ್ಬಿಂಗ್-ಎಡಿಟಿಂಗ್ ಸೇರಿದಂತೇ ಪ್ರತಿ ಹಂತದಲ್ಲೂ ಒಕ್ಕೋರಲಿನಿಂದ ಬಂದ್ ಮಾಡಲಾಯಿತು.
ಆದರೆ ಈ ನಡುವೆಯೇ ತಮಗೂ ಚಿತ್ರೋದ್ಯಮದ ಹೋರಾಟಕ್ಕೂ ಸಂಬಂಧವೇ ಇಲ್ಲ ಎನ್ನುವ ಮಟ್ಟಕ್ಕೆ ತಾತ್ಸಾರ ತೋರಿ, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ನಿನ್ನೆ ಪೂರ್ತಿ ಅವರ ಸ್ಟೂಡಿಯೋದಲ್ಲಿ 'ಮಂಜುನಾಥ ಬಿಎ ಎಲ್ಎಲ್ಬಿ' ಚಿತ್ರದ ಡಬ್ಬಿಂಗ್ ಮಾಡಿದರು ಎಂದರೆ ನಂಬುತ್ತೀರಾ? ಆದರೆ ಇದು ನಿಜ. ನಿನ್ನೆ ಇಡೀ ರಾಜೇಶ್ ತಮ್ಮ ಸ್ವಂತ ಸ್ಟೂಡಿಯೋದಲ್ಲಿ ಮಂಜುನಾಥ ಚಿತ್ರದ ಡಬ್ಬಿಂಗ್ ಮಾಡಿದ್ದಾರೆ.
ಇತ್ತ ಇಡೀ ಉದ್ಯಮ ಉರಿಬಿಸಿಲಲ್ಲಿ ಬೆವರು ಸುರಿಸಿ ರೋಡಿಗಿಳಿದಿದ್ದರೆ ಅತ್ತ ಡಬ್ಬಿಂಗ್ ನಡೆಯುತ್ತಲೇ ಇತ್ತು. ಮೋಹನ್ ನಿರ್ದೇಶನದ ಈ ಚಿತ್ರದಲ್ಲಿ ಜಗ್ಗೇಶ್ ನಾಯಕ. ಫಿಲಂ ಛೇಂಬರ್ನಲ್ಲಿ ಸದಾ ಕಾಲ ಇದ್ದು, ಕಂಡವರಿಗೆ ಬುದ್ದಿ ಹೇಳುವ ಸ್ಥಾನದಲ್ಲಿದ್ದಾರೋ ಅದೇ ಎ.ಗಣೇಶ್ ಈ ಚಿತ್ರದ ನಿರ್ಮಾಪಕ. ದಂಡಂ ದಶಗುಣಂ ಚಿತ್ರದ ಸಂದರ್ಭದಲ್ಲಿ ಇದೇ ರಮ್ಯಾ ಜೊತೆ ಬೀದಿಜಗಳ ಮಾಡಿಕೊಂಡ ಗಣೇಶ್ಗಾದರೂ ಡಬ್ಬಿಂಗ್ ಮಾಡಿಸಬಾರದು ಎಂಬ ಕನಿಷ್ಟ ಜ್ಞಾನವಾದರೂ ಇಲ್ಲದೇ ಹೋಯಿತಲ್ಲಾ ಎನ್ನುವುದು ದುರಂತಗಳಲ್ಲಿ ದುರಂತ! ಜೈ ಚಿತ್ರೋದ್ಯಮ...(ಒನ್ಇಂಡಿಯಾ ಕನ್ನಡ ವಿಶೇಷ ವರದಿ)


Click it and Unblock the Notifications











