ಸಿನಿ ಬಿಕ್ಕಟ್ಟು : ಮುಯ್ಯಿಗೆ ಮುಯ್ಯಿ !
ಬೆಂಗಳೂರು : ಪರಭಾಷಾ ಚಲನಚಿತ್ರಗಳನ್ನು ರಾಜ್ಯದಲ್ಲಿ ಏಳುವಾರಗಳ ನಂತರ ಬಿಡುಗಡೆಗೊಳಿಸುವ ನಿರ್ಧಾರವನ್ನು ವಿರೋಧಿಸಿ, ಕನ್ನಡ ಚಿತ್ರೋದ್ಯಮದ ಮೇಲೆ ಸಂಪೂರ್ಣ ನಿಷೇಧ ಹೇರಲು ಕನ್ನಡೇತರ ಚಿತ್ರ ನಿರ್ಮಾಪಕರು ಮುಂದಾಗಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯಮಂಡಳಿ ಈ ಕ್ರಮವನ್ನು ಬೆಂಬಲಿಸಿದೆ. ಕನ್ನಡ ಚಿತ್ರೋದ್ಯಮದ ಜತೆಗೆ ಎಲ್ಲಾರೀತಿಯ ಸಂಬಂಧ ಕಡಿದುಕೊಂಡು, ಯಾವುದೇ ಸಹಕಾರ ನೀಡದಿರಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಬಾಲಿವುಡ್ನ ಖ್ಯಾತ ನಿರ್ಮಾಪಕ ಯಶ್ ಛೋಪ್ರಾ, ತೆಲುಗು ಚಿತ್ರರಂಗದ ನಿರ್ಮಾಪಕರ ಮಂಡಳಿ ಅಧ್ಯಕ್ಷ ಡಿ.ಸುರೇಶ್ ಬಾಬು ಸೇರಿದಂತೆ ಚಿತ್ರೋದ್ಯಮದ ಅನೇಕ ದಿಗ್ಗಜರು ಪಾಲ್ಗೊಂಡಿದ್ದರು.
ಎಲ್ಲಕ್ಕೂ ರೆಡಿ : ನಾವು ಸಮರಕ್ಕೂ ರೆಡಿ, ಸಂಧಾನಕ್ಕೂ ರೆಡಿ. ಪರಭಾಷಾ ಚಿತ್ರೋದ್ಯಮದ ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್ ಕುಮಾರ್ ಪ್ರತಿ ಕ್ರಿಯಿಸಿದ್ದಾರೆ.
ರಾಷ್ಟ್ರೀಯ ರೂಪ : ಕನ್ನಡ ಮತ್ತು ಅನ್ಯಭಾಷೆಗಳ ನಡುವಿನ ಈ ಕಗ್ಗಂಡು ಮತ್ತೊಂದು ಕಾವೇರಿ ವಿವಾದದಂತೆ ರಾಷ್ಟ್ರೀಯ ಸಮಸ್ಯೆಯಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಮೇಲೆ ಒತ್ತಡ ತರಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಜೈಪಾಲ್ ರೆಡ್ಡಿಯರಿಗೆ ಈಗಾಗಲೇ ಅನ್ಯಭಾಷಾ ಚಿತ್ರರಂಗದ ದಿಗ್ಗಜರು ದೂರು ಸಲ್ಲಿಸಿದ್ದಾರೆ.
ಹಿಂದಿ, ಇಂಗ್ಲೀಷ್, ತಮಿಳು, ತೆಲುಗು, ಮಲೆಯಾಳಿ ಚಲನಚಿತ್ರಗಳಿಗೆ ಕರ್ನಾಟಕ ಪ್ರಮುಖ ಮಾರುಕಟ್ಟೆ. ಕನ್ನಡ ಚಿತ್ರೋದ್ಯಮದ ನಿರ್ಬಂಧದಿಂದ ಅನ್ಯಭಾಷಾ ಚಿತ್ರರಂಗಕ್ಕೆ 15 ಕೋಟಿ ರೂ.ನಷ್ಟವಾಗಿದೆ. ಕಳೆದ ಆಗಸ್ಟ್ ನಿಂದ ಈವರೆಗೆ ಕನ್ನಡ ಚಿತ್ರಗಳ ಗಳಿಕೆಯಲ್ಲಿ ಶೇ30 ರಷ್ಟು ಹೆಚ್ಚಳವಾಗಿದೆ. ತೋಪಾಗಬೇಕಿದ್ದ ಎಷ್ಟೋ ಚಿತ್ರಗಳು ಚೇತರಿಕೆ ಕಂಡಿವೆ ಎನ್ನಲಾಗಿದೆ.
ಬ್ರೆಜಿಲ್ ಚಿತ್ರರಂಗವನ್ನು ಹಾಲಿವುಡ್ ರಾಕ್ಷಸರು ನುಂಗಿದಂತೆ ಕನ್ನಡ ಚಿತ್ರರಂಗವನ್ನು ಪರಭಾಷೆ ಚಿತ್ರಗಳು ನಾಶ ಮಾಡಲಿವೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.
(ಇನ್ಪೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications