ರಾಜ್ಕುಮಾರ್ ನಾಡಿಗೇನು ಕೊಟ್ಟಿಲ್ಲ ?
ಬೆಂಗಳೂರು : ನಟ ರಾಜ್ಕುಮಾರ್ ನಾಡಿಗೇನು ಕೊಟ್ಟಿದ್ದಾರೆ ? ಅಣ್ಣಾವ್ರಂತೆ ಅಣ್ಣಾವ್ರು, ಯಾರ್ರೀ ಅದು ಅಣ್ಣಾವ್ರು? -ಹೀಗೆ ರಾಜ್ ವಿರುದ್ಧ ರಂಗಕರ್ಮಿ ಎಂ.ಎಸ್.ಸತ್ಯು ಮಾಡಿದ್ದ ಟೀಕೆಗಳಿಗೆ ಪ್ರತ್ಯುತ್ತರ ನೀಡುವಂತೆ, ನಾಡಿನ ಖ್ಯಾತ ಸಾಹಿತಿಗಳಿಬ್ಬರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಕನ್ನಡ ಜನಶಕ್ತಿ ಸಂಘಟನೆ ಆಯೋಜಿಸಿದ್ದ ‘ರಾಜ್ಕುಮಾರ್ ನಾಡು-ನುಡಿಗೆ ನೀಡಿದ ಕೊಡುಗೆ’ ಕುರಿತ ವಿಚಾರ ಸಂಕಿರಣದಲ್ಲಿ ಕವಿ ನಿಸಾರ್ ಅಹಮದ್ ಹೇಳಿದ್ದು ಹೀಗೆ :
- ಒಬ್ಬ ಸಿನಿಮಾ ನಟನ ವಿರುದ್ಧ ಟೀಕೆಗಳು ಬಂದಾಗ ಅದಕ್ಕೆ ಪ್ರತ್ಯುತ್ತರ ನೀಡಲು 30-35ವರ್ಷ ಸಾಹಿತ್ಯ ಕೃಷಿ ನಡೆಸಿದ ಸಾಹಿತಿಗಳು ಎದ್ದು ನಿಲ್ಲುವುದು ಬಹುಶಃ ವಿಶ್ವದ ಯಾವುದೇ ಭಾಷೆಯಲ್ಲಿಯೂ ನಡೆದಿಲ್ಲ. ಇದು ರಾಜ್ಕುಮಾರ್ರ ಮೇರು ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
- ವಿಶ್ರಾಂತ ಜೀವನ ನಡೆಸುತ್ತಿರುವ ರಾಜ್ ವಿರುದ್ಧ ಅನಗತ್ಯ ವಿವಾದ ಹುಟ್ಟು ಹಾಕುವಲ್ಲಿ ವ್ಯವಸ್ಥಿತ ಸಂಚಿದೆ. ತಮಿಳು, ತೆಲುಗು, ಹಿಂದಿ ಚಿತ್ರಗಳು ವಿಜೃಂಭಿಸುತ್ತಿದ್ದ ಕಾಲದಲ್ಲಿ ಜನರನ್ನು ಕನ್ನಡ ಸಿನಿಮಾಗಳತ್ತ ಸೆಳೆದದ್ದು ರಾಜ್ರ ನಿಜವಾದ ಕೊಡುಗೆ.
- ಮಾನವೀಯ ಗುಣವೇ ಇಲ್ಲದಿದ್ದರೆ ಬೌದ್ಧಿಕವಾಗಿ ಎಷ್ಟೇ ಕೊಡುಗೆ ನೀಡಿದ್ದರೂ ಅದು ನಿಷ್ಪ್ರಯೋಜಕ. ಮಾನವೀಯತೆ, ಸಹಿಷ್ಣುತೆ, ಕನ್ನಡಿಗರ ಮೂಲ ಸಂಸ್ಕೃತಿ ರಾಜ್ರ ಬದುಕಿನಲ್ಲಿ ಮೇಳೈಸಿದೆ.
- ಕನ್ನಡ ಪರ ಹೋರಾಟಗಳಿಗೆ, ನಾಡು-ನುಡಿಗೆ ಧಕ್ಕೆಯಾದಾಗ ಬೀದಿಗಿಳಿಯಲು ರಾಜ್ ಹಿಂದೆಮುಂದೆ ಯೋಚಿಸಲಿಲ್ಲ.
- ರಾಜ್ ನೈತಿಕ ನಡವಳಿಕೆಯ ರೂಪಕ. ಕನ್ನಡಿಗರ ಪಾಲಿಗೆ ರಸಿಕರ ರಾಜರಾಗಿದ್ದ ಅವರು, ಕರ್ನಾಟಕ ರತ್ನ ಆಗುವ ವೇಳೆಗೆ ವ್ಯಕ್ತಿತ್ವದಲ್ಲೂ ವಿಕಸನಗೊಂಡಿದ್ದಾರೆ.
- ವಿಮರ್ಶೆ ಹೆಸರಲ್ಲಿ ಹಗುರ ಭಾಷೆಯ ಬಳಕೆ ಸಲ್ಲದು. ವಿಮರ್ಶೆ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದ್ದರೆ, ಪ್ರತಿಭಟನೆಯೂ ಕೂಡ ಸಂವಿಧಾನ ಬದ್ಧ ಹಕ್ಕು. ರಾಜ್ ಬಗ್ಗೆ ನಿರೀಕ್ಷೆ ತಪ್ಪಲ್ಲ. ಆ ಬಗ್ಗೆ ಒತ್ತಾಯಿಸುವ ಹಕ್ಕು ಯಾರಿಗೂ ಇಲ್ಲ.
- ಶ್ರಮದಿಂದ ಉನ್ನತ ಸ್ಥಾನ ತಲುಪಿದ ಸಾಧಕರ ಬಗ್ಗೆ ಸಾಮಾಜಿಕ ಅಸಹನೆ ಸಾಮಾನ್ಯ. ರಾಜ್ ವಿರುದ್ಧ ಈಗ ಮೂಡಿಸಲು ಯತ್ನಿಸಲಾಗುತ್ತಿರುವ ಅಸಹನೆಯನ್ನು ಹಿಂದೆ ಸಾಹಿತ್ಯದಲ್ಲಿ ಕುವೆಂಪು, ಕ್ರೀಡೆಯಲ್ಲಿ ಕಪಿಲ್ ದೇವ್, ನಾಟಕಗಾರ ಗುಬ್ಬಿ ವೀರಣ್ಣ ಅವರ ವಿರುದ್ಧವೂ ಮೂಡಿಸುವ ಯತ್ನ ನಡೆದಿತ್ತು.
- ರಾಜ್ ಸಂಸ್ಥೆಯ ಚಿತ್ರಗಳ ಅಭಿರುಚಿ ಬಗ್ಗೆ ಸತ್ಯು ಪ್ರಶ್ನಿಸಿದ್ದಾರೆ. ಎಲ್ಲಾ ರಂಗದಲ್ಲೂ ಅದು ಕುಸಿದಿದೆ. ಹೀಗಾಗಿ ಒಬ್ಬ ವ್ಯಕ್ತಿಯನ್ನು ಅದಕ್ಕೆ ಹೊಣೆಗಾರಿಕೆ ಮಾಡುವುದು ಮೂರ್ಖತನ.
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











