ಎಸ್.ನಾರಾಯಣ್ ಮನೆಗೆ ವಿಜಯ್ ಅಭಿಮಾನಿಗಳ ಕಲ್ಲು
ಬೆಂಗಳೂರು, ಅ.27 : ದುನಿಯಾ ನಾಯಕ ವಿಜಯ್ ಮತ್ತು ನಿರ್ದೇಶಕ ಎಸ್.ನಾರಾಯಣ್ ನಡುವಿನ ಸಂಘರ್ಷ ಕಡಿಮೆಯಾಗಿಲ್ಲ. ಇತ್ತೀಚೆಗೆ ಇವರಿಬ್ಬರಿಗೂ ರಾಜಿ ಮಾಡಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿತ್ತು. ರಾಜಿ ನಂತರ ಎಸ್.ನಾರಾಯಣ್ ಮನೆ ಮತ್ತು ವಾಹನಕ್ಕೆ ವಿಜಯ್ ಅಭಿಮಾನಿಗಳು ಕಲ್ಲು ತೂರಿರುವ ಘಟನೆ ನಡೆದಿದೆ.
ಶುಕ್ರವಾರ(ಅ.26)ರಾತ್ರಿ ಬೈಕ್ ನಲ್ಲಿ ಬಂದ ಮೂವರು ಯುವಕರು ನಾರಾಯಣ್ ಮನೆ ಮತ್ತು ಮನೆಯ ಮುಂದಿದ್ದ ಟೆಂಪೊಗೆ ಕಲ್ಲು ಹೊಡೆದು ಪರಾರಿಯಾದರು. ನಾರಾಯಣ್ ಗೆ ಧಿಕ್ಕಾರ... ವಿಜಯ್ ಗೆ ಜೈ ಎಂದು ಅವರು ಕೂಗುತ್ತಿದ್ದರು.
ಈ ಘಟನೆಗೆ ನಾನು ಕಾರಣನಲ್ಲ. ನನ್ನ ಅಭಿಮಾನಿಗಳು ಇಂಥ ಕೃತ್ಯವೆಸಗುವುದಿಲ್ಲ. ಕಲ್ಲನ್ನು ಯಾರು ಹೊಡೆದರೋ, ಯಾಕೆ ಹೊಡೆದರೋ ನನಗಂತೂ ಗೊತ್ತಿಲ್ಲ. ಎಸ್.ನಾರಾಯಣ್ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನೇನು ಮಾಡಲಿ.. ಎಂದು ವಿಜಯ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ವಿವರಣೆ ನೀಡಿದ್ದೇನೆ. ಅವರು ಮುಂದಿನ ಕ್ರಮ ಕೈಗೊಳ್ಳಲಿ ಎಂದು ಎಸ್.ನಾರಾಯಣ್ ಹೇಳಿದ್ದಾರೆ.
ಚಂಡ ಮತ್ತು ಯುಗ ಚಿತ್ರಗಳ ಬಿಡುಗಡೆ ವಿವಾದವಾಗಿ ಕೂತಿದ್ದು, ನಾರಾಯಣ್ ಮತ್ತು ವಿಜಯ್ ನಡುವೆ ಮುನಿಸಿಗೆ ಕಾರಣವಾಗಿದೆ. ನನಗೆ ನೀಡಿದ ಮಾತಿನಂತೆ ಚಂಡ ಚಿತ್ರವನ್ನು ಯುಗ ಬಿಡುಗಡೆಯಾದ 50ದಿನಗಳ ನಂತರ ನಾರಾಯಣ್ ಬಿಡುಗಡೆ ಮಾಡಬೇಕು ಎಂಬುದು ವಿಜಯ್ ವಾದ. 'ಯುಗ'ಚಿತ್ರಕ್ಕೂ ಮುನ್ನ 'ಚಂಡ' ಬಿಡುಗಡೆಗೆ ಎಸ್.ನಾರಾಯಣ್ ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
(ದಟ್ಸ್ ಕನ್ನಡ ಸಿನಿ ವಾರ್ತೆ)


Click it and Unblock the Notifications











