ಸಿನಿಮಾ ಬಿಕ್ಕಟ್ಟಿನಲ್ಲಿ ‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ ಉದಯ!
ಬೆಂಗಳೂರು : ಕನ್ನಡ ಚಿತ್ರೋದ್ಯಮದಲ್ಲಿ ಉಂಚಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನ.26ರ ಶುಕ್ರವಾರ ನಡೆದ ನಾಟಕೀಯ ಬೆಳವಣಿಗೆಯಾಂದರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಬ್ಭಾಗಗೊಂಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯ ಮೇಲೆ ಶುಕ್ರವಾರ ದಾಳಿ ನಡೆಸಿದ ನಿರ್ಮಾಪಕರು ಹಾಗೂ ನಿರ್ದೇಶಕರ ಒಂದು ಗುಂಪು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಫಲಕವನ್ನು ಕಿತ್ತೆಸೆದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹೆಸರಿನ ಫಲಕವನ್ನು ಅನಾವರಣಗೊಳಿಸಿತು. ಈ ದಾಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರೂ ಭಾಗವಹಿಸಿದ್ದರು.
ವಾಣಿಜ್ಯ ಮಂಡಳಿಯ ಪುನರ್ ನಾಮಕರಣದ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಎಚ್.ಡಿ.ಗಂಗರಾದು ಧರಣಿ ಕೂತರು. ಗಂಗರಾಜು ಅವರೊಂದಿಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತಿನ ಚಕಮಕಿ ನಡೆಸಿದರು. ಮಧ್ಯಪ್ರವೇಶಿಸಿದ ಪಾರ್ವತಮ್ಮ ರಾಜ್ಕುಮಾರ್ ಅವರ ಸಂಧಾನ ಫಲಪ್ರದವಾಗಲಿಲ್ಲ .
ನೂತನ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಫಲಕಕ್ಕೆ ಪೂಜೆ ಪುನಸ್ಕಾರಗಳೂ ಜೋರಾಗಿ ನಡೆದವು. ಈ ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜ್ಕುಮಾರ್, ರಾಘವೇಂದ್ರ, ಎಸ್.ವಿ.ರಾಜೇಂದ್ರಸಿಂಗ್ ಬಾಬು. ರಾಕ್ಲೈನ್ ವೆಂಕಟೇಶ್, ರಾಮು, ಜಗ್ಗೇಶ್, ಮುನಿರತ್ನ ಮುಂತಾದವರು ಭಾಗವಹಿಸಿದ್ದರು.
ಪುನರ್ ನಾಮಕರಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು- ವಾಣಿಜ್ಯ ಮಂಡಳಿಯ ಅರವತ್ತು ವರ್ಷಗಳ ಇತಿಹಾಸವನ್ನು ಮೆಲುಕು ಹಾಕಿದರು. ಆರಂಭದಲ್ಲಿ ಇದು ಮೈಸೂರು ಚಲನಚಿತ್ರ ವಾಣಿಜ್ಯ ಮಂಡಳಿಯಾಗಿತ್ತು. ಅನಂತರ ಕರ್ನಾಟಕ ಎಂದು ಬದಲಾಯಿಸಲಾಯಿತು. ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಪ್ರಸ್ತುತ ‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ ಎಂದು ಬದಲಾಯಿಸಲಾಯಿತು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications