ಜಗ್ಗದ ಮದನ್ ಮಲ್ಲು ಕಿರಿಕ್ ಅತಿಯಾಗಿದೆ
*ದಟ್ಸ್ಕನ್ನಡ ಬ್ಯೂರೋ
ಮದನ್ ಮಲ್ಲು ಇನ್ನಷ್ಟು ಕ್ರುದ್ಧರಾಗಿದ್ದಾರೆ. ಹಾಗಾಗಿ ನವನಟಿ ರಶ್ಮಿ ನೇರವಾಗಿ ಬೆಂಗಳೂರು ಪೊಲೀಸ್ ಸ್ಟೇಷನ್ನಿಗೆ ಹೋಗಿ ಕಂಪ್ಲೇಂಟ್ ಕೊಟ್ಟು , ತಮಗೆ ರಕ್ಷಣೆ ಕೊಡಿ ಅಂತ ಮೊರೆ ಇಟ್ಟಿದ್ದಾರೆ.
ಸಿನಿಮಾ ತಾರೆಯರಾದ ರಶ್ಮಿ, ಮೋನಿಕಾ ಹಾಗೂ ಆದರ್ಶ್ಗೆ ಮದನ್ ಮಲ್ಲು ಆ್ಯಸಿಡ್ ಹಾಕಿ ಕೊಲ್ಲುವುದಾಗಿ ಪದೇಪದೇ ಒಡ್ಡಿದ ಬೆದರಿಕೆಯನ್ನು ಚಿತ್ರಲೋಕ ಡಾಟ್ ಕಾಂ ಸ್ಫೋಟಿಸಿತು. ದಟ್ಸ್ಕನ್ನಡ ಡಾಟ್ ಕಾಂನಲ್ಲಿ ಪ್ರಕಟವಾದ ಈ ವರದಿ ಲಂಕೇಶ್ಪತ್ರಿಕೆಯಲ್ಲೂ ಕಾಣಿಸಿತು. ಸುದ್ದಿ ನೋಡಿ ಮಲ್ಲು ತಪ್ಪು ತಿದ್ದಿಕೊಳ್ಳಲಿಲ್ಲ. ಬದಲಿಗೆ ತನ್ನ ಇಮೇಜಿಗೆ ಮಸಿ ಬಳಿದಿದ್ದೀರಿ ಎಂದು ಕುದಿಯಲಾರಂಭಿಸಿದ್ದಾನೆ. ತಕ್ಷಣವೇ ಸುದ್ದಿಗೋಷ್ಠಿ ಕರೆದು ಬಹಿರಂಗವಾಗಿ ಕ್ಷಮೆ ಕೇಳಿರೆಂದು ಆದರ್ಶ ಹಾಗೂ ರಶ್ಮಿಗೆ ತಾಕೀತು ಮಾಡಿದ್ದಾನೆ. ತಾನು ಹೇಳಿದಂತೆ ಮಾಡದಿದ್ದರೆ ನಿನಗೂ ರಶ್ಮಿಗೂ ಅಫೇರ್ ಇದೆ ಅಂತ ಪುಕಾರೆಬ್ಬಿಸಿ ನಿಮ್ಮ ಇಮೇಜ್ ಹಾಳು ಮಾಡುತ್ತೇನೆ ಅಂತ ಆದರ್ಶ್ಗೆ ಎಚ್ಚರಿಕೆ ಕೊಟ್ಟಿದ್ದಾನೆ.
ಇದರಿಂದ ಕಿಂಚಿತ್ತೂ ಅಲ್ಲಾಡದ ಆದರ್ಶ್, ‘ತಾನು ಏನೂ ಸುಳ್ಳು ಹೇಳಿಲ್ಲ. ನಡೆದ ಸಂಗತಿಯ ಸಂಪೂರ್ಣ ವಿವರವನ್ನು ಚಿತ್ರಲೋಕ ಡಾಟ್ ಕಾಂನ ಕೆ.ಎಂ.ವೀರೇಶ್ಗೆ ಹೇಳಿದ್ದೇನೆ ಅಷ್ಟೆ. ಮಾತನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ’ ಅಂತ ಹೇಳಿದ್ದಾರೆ.
ಇದಕ್ಕೂ ಮುಂಚೆ ಮದನ್ ಮಲ್ಲು ರಶ್ಮಿಗೆ 35.000 ರುಪಾಯಿಗೆ ಒಂದು ಚೆಕ್ ಕೊಟ್ಟಿದ್ದಾರೆ (ಚೆಕ್ ನಂಬರ್ 140053). ಆದರೆ, ಈ ಚೆಕ್ಕಿಗೆ ಹಣ ಕೊಡಬೇಡಿ ಅಂತ ನೋಟೀಸನ್ನೂ ಕಳಿಸಿದ್ದಾರೆ. 15,000 ರುಪಾಯಿಗೆ ಕೊಟ್ಟ ಚೆಕ್ (ಚೆಕ್ ನಂ.140095) ಮಾತ್ರ ಕ್ಯಾಷ್ ಆಗಿದೆ. ಈ ವಿಷಯವಾಗಿ ರಶ್ಮಿ ಪ್ರಶ್ನಿಸಿದಾಗ, ತೆರಿಗೆಯ ತೊಂದರೆಯಿರುವುದರಿಂದ ಹಾಗೆ ಮಾಡಿದ್ದೇನೆ ಅಂತ ಮಲ್ಲು ನೆಪ ಹೇಳಿದರು. ಶೂಟಿಂಗ್ ಪೂರೈಸುವ ಒಂದು ದಿನ ಮುಂಚೆ ಪೂರ್ತಿ ಹಣ ಕೊಡುವುದಾಗಿ ಮಲ್ಲು ಭರವಸೆ ಕೊಟ್ಟಿದ್ದರು. ಮೇ 17ನೇ ತಾರೀಕು ಫನ್ ವರ್ಲ್ಡ್ನಲ್ಲಿ ಮಲ್ಲು ಸೋದರ 40 ಸಾವಿರ ರುಪಾಯಿ ಕ್ಯಾಷ್ ಕೊಟ್ಟು, ರಶ್ಮಿಯಿಂದ ಚೆಕ್ಕನ್ನು ವಾಪಸ್ಸು ಪಡೆದಿದ್ದಾರೆ. ಉಳಿದ ಬಾಕಿ ಹಣ ಮಾತ್ರ ರಶ್ಮಿಗೆ ಇನ್ನೂ ಸಂದಾಯವಾಗಿಲ್ಲ. ಹಾಗೆಯೇ ಆದರ್ಶ್ಗೆ ಕೂಡ 10 ಸಾವಿರ ರುಪಾಯಿ ಬಾಕಿ ಕೊಡಬೇಕಿದೆ.
ಈ ಎಲ್ಲಾ ವಿವರಗಳನ್ನು ಆದರ್ಶ್ ಹಾಗೂ ರಶ್ಮಿ ಪುಂಖಾನುಪುಂಖವಾಗಿ ವೀರೇಶ್ ಮುಂದೆ ಬಿಚ್ಚಿಟ್ಟಿದ್ದಾರೆ. ಜತೆಗೆ ಇಬ್ಬರೂ ಸಾಕಷ್ಟು ಬೆಚ್ಚಿದ್ದಾರೆ. ಮಲ್ಲು ಥರದ ಜನರನ್ನು ಮಟ್ಟ ಹಾಕುವವರ್ಯಾರು?
ಇದನ್ನೂ ಓದಿ
‘ನನ್ನ ಮಾತು ಕೇಳ್ದಿದ್ರೆ ಆಸಿಡ್ ಹಾಕಿ ಕೊಲ್ತೀನಿ’
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











