ಸಿ.ಅಶ್ವತ್ಥ್ ಮಾತಲ್ಲಿ ಅಪಸ್ವರ!
- ದಟ್ಸ್ಕನ್ನಡ ಡೆಸ್ಕ್
ಸಿನಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಶ್ವತ್ಥ್ ಅಸಂಬದ್ಧವಾಗಿ ಹೇಳಿಕೆ ನೀಡಿದ್ದಾರೆ. ನಟ ರಾಜ್ಕುಮಾರ್, ದಿವಂಗತ ಕಾಳಿಂಗರಾವ್, ಚಂಪಾ, ಮಲ್ಲಿಕಾರ್ಜುನ್ ಮನ್ಸೂರ್ ಮತ್ತು ಸುಗಮ ಸಂಗೀತ ಕಲಾವಿದರನ್ನು ಅವಹೇಳನ ಮಾಡಿದ್ದಾರೆ. ಕೂಡಲೇ ಅಶ್ವತ್ಥ್ ತಮ್ಮ ಹೇಳಿಕೆಗಳನ್ನು ವಾಪಸ್ಸು ಪಡೆಯಬೇಕು. ಮತ್ತು ಬೇಷರತ್ತು ಕ್ಷಮೆಯಾಚಿಸಬೇಕೆಂದು ಸುಗಮ ಸಂಗೀತ ಕಲಾವಿದರ ವೇದಿಕೆ ಆಗ್ರಹಿಸಿದೆ.
‘ಹೆಸರು ಬಂದ ತಕ್ಷಣ ಅಶ್ವತ್ಥ್ ಅಹಂಕಾರ ಮೆರೆದಿದ್ದಾರೆ. ರಾಜ್ಯದಲ್ಲಿ ತಾವೋಬ್ಬರೇ ಅತ್ಯುತ್ತಮ ಗಾಯಕರೆಂಬ ಧೋರಣೆಯಲ್ಲಿ ವಚನಗಾರರನ್ನು ಅವಮಾನಿಸಿದ್ದಾರೆ’ ಎಂದು ಹಿರಿಯ ರಂಗ ಕರ್ಮಿ ಸಿ.ಜಿ. ಕೃಷ್ಣಮೂರ್ತಿ ದೂರಿದ್ದಾರೆ.
ಬಸವಣ್ಣ ಭಯದಿಂದ ವಚನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಯಾವುದೇ ವಿಶೇಷತೆಯಿಲ್ಲ. ವಚನ ಗಾಯನ ಸುಲಭದ ಕೆಲಸ. ಆದರೆ ವಚನಗಳನ್ನು ರಾಜ್ಯದಲ್ಲಿ ನಾನು ಮಾತ್ರ ಸಮರ್ಥವಾಗಿ ಹಾಡಬಲ್ಲೆ ಎನ್ನುವ ಮೂಲಕ ಅಶ್ವತ್ಥ್ , ಪಂಚಾಕ್ಷರಿ ಗವಾಯಿ, ಮಲ್ಲಿಕಾರ್ಜುನ್ ಮನ್ಸೂರ್ರಂತಹ ಗಾಯಕರನ್ನು ಅವಮಾನ ಮಾಡಿದ್ದಾರೆ ಎಂದು ಸಿಜಿಕೆ ಆರೋಪಿಸಿದ್ದಾರೆ.
ಅಶ್ವತ್ಥ್ ಬಗ್ಗೆ ತೆಗಳಿಕೆಯ ಮಹಾಪೂರ :
- ಇತರ ಪ್ರತಿಭಾವಂತ ಗಾಯಕರನ್ನು ಅವಮಾನಿಸುವ ಮತ್ತು ಐತಿಹಾಸಿಕ ವ್ಯಕ್ತಿಗಳನ್ನು ತಾತ್ಸಾರದಿಂದ ನೋಡುವ ಅಶ್ವತ್ಥ್ ಅವರ ಧೋರಣೆ ಖಂಡನೀಯ ಎನ್ನುವ ಗಾಯಕಿ ಕಸ್ತೂರಿ ಶಂಕರ್, ಎಲ್ಲ ಸಂಗೀತ ಪ್ರಕಾರಗಳು ತಮ್ಮದೇ ಆದ ಅಸ್ತಿತ್ವ ಹೊಂದಿವೆ. ಶಾಸ್ತ್ತ್ರಿಯ ಗಾಯನ ಕೇವಲ ರಾಗ ಎಳೆಯುವುದಕ್ಕಷ್ಟೇ ಸೀಮಿತ ಎಂಬ ಅರ್ಥದಲ್ಲಿ ಅಶ್ವತ್ಥ್ ಮಾತನಾಡಿರುವುದು ಸಲ್ಲದು ಎಂದಿದ್ದಾರೆ.
- ಚಂಪಾ ದೊಡ್ಡ ಕವಿಯಲ್ಲ ಎನ್ನುವ ಅಶ್ವತ್ಥ್, ಸುಗಮ ಸಂಗೀತ ನನ್ನೊಬ್ಬನಿಂದಲೇ ನಿಂತಿದೆ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ. ಸುಗಮ ಸಂಗೀತವನ್ನು ನನ್ನನ್ನು ಹೊರತುಪಡಿಸಿ, ಬೇರೆ ಯಾರೂ ಹಾಡಿದರೂ ಜನ ಕೇಳುವುದಿಲ್ಲ ಎನ್ನುವ ಅಹಂ ಅಶ್ವತ್ಥ್ರಲ್ಲಿದೆ ಎಂಬುದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಅಭಿಪ್ರಾಯ.
- ಕಲಾವಿದನ ಬೆಳವಣಿಗೆಯನ್ನು ಅಹಂಕಾರ ತಡೆಯುತ್ತದೆ ಎಂಬುದನ್ನು ಅಶ್ವತ್ಥ್ ಮರೆಯಬಾರದು ಎನ್ನುತ್ತಾರೆ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ ಮತ್ತು ಯಶವಂತ್ ಹಳಿಬಂಡಿ.
ಪೂರಕ ಓದಿಗೆ-
ಎದೆಯಿಂದ ಎದೆಗೆ ಹರಿದ ಅಮೃತವಾಹಿನಿಯಲ್ಲಿ ಕನ್ನಡವೇ ಸತ್ಯ!
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











