ಹೊಸ ಪರಭಾಷೆ ಚಿತ್ರ ಪ್ರದರ್ಶಿಸಿದರೆ ಬೆಂಕಿ -ಕಾವಲು ಸಮಿತಿ ಎಚ್ಚರಿಕೆ
ಬೆಂಗಳೂರು: ಅಕ್ಟೋಬರ್ 1ರಿಂದ ರಾಜ್ಯದಲ್ಲಿ ಹೊಸ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಿದ್ದೇ ಆದರೆ, ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಕನ್ನಡ ಚಲನಚಿತ್ರ ಕಾವಲು ಸಮಿತಿ ಅಧ್ಯಕ್ಷ ಹಾಗೂ ನಿರ್ಮಾಪಕ ಬಾ.ಮ.ಹರೀಶ್ ಎಚ್ಚರಿಸಿದ್ದಾರೆ.
ಕನ್ನಡ ಚಿತ್ರರಂಗದ ಉಳಿವಿಗಾಗಿ ಚಿತ್ರೋದ್ಯಮಿಗಳು, ಒಮ್ಮತದಿಂದ ತೆಗೆದುಕೊಂಡ ತೀರ್ಮಾನಕ್ಕೆ ಸರಕಾರ ಮಾನ್ಯತೆ ನೀಡಿದೆ. ಅದರೆ ಇದೆಲ್ಲವನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡುವ ಪ್ರದರ್ಶಕರ ತೀರ್ಮಾನ ಕನ್ನಡ ವಿರೋಧಿ ಧೋರಣೆಯಾಗಿದೆ ಎಂದು ಹರೀಶ್ ಅಭಿಪ್ರಾಯ ಪಟ್ಟಿದ್ದಾರೆ.
ಮಹತ್ವದ ಸಭೆಗಳು : ಉತ್ತರ ಕರ್ನಾಟಕದಲ್ಲಿ ಚಿತ್ರಪ್ರದರ್ಶಕರು ಪರಭಾಷಾ ಚಿತ್ರಗಳನ್ನು ಬಿಡುಗಡೆಮಾಡುವ ತೀರ್ಮಾನ ಖಂಡಿಸಿ, ಹುಬ್ಬಳ್ಳಿಯಲ್ಲಿ ಕನ್ನಡ ಚಿತ್ರೋದ್ಯಮ ಜಾಥಾ ನಡೆಸಲು ಚಿಂತನೆ ನಡೆಸಿದೆ. ಈ ಸಂಬಂಧ ಬುಧವಾರ ಕಲಾವಿದರು, ನಿರ್ಮಾಪಕರು, ನಿರ್ದೇಶಕರ ಸಭೆ ನಗರದಲ್ಲಿ ನಡೆಯಲಿದೆ.
ಅಲ್ಲದೇ ಬಿಕ್ಕಟ್ಟು ನಿವಾರಣೆಗೆ ನಟ ಅಂಬರೀಷ್ ಉತ್ತರ ಕರ್ನಾಟಕ ಭಾಗದ ಚಿತ್ರಪ್ರದರ್ಶಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕರ್ನಾಟಕ ವಾಣಿಜ್ಯ ಮಂಡಳಿ ರಚಿಸಿರುವ ಭಕ್ತವತ್ಸಲಂ ನೇತೃತ್ವದ ಸಭೆ ಬುಧವಾರ ನಡೆಯಲಿವೆ. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು, ಉಪ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಈ ಬಗೆಗೆ ಚರ್ಚಿಸಲಿದ್ದಾರೆ. ಚಿತ್ರೋದ್ಯಮದ ಮಹತ್ವದ ಈ ಮೂರು ಸಭೆಗಳ ಫಲಶೃತಿಯ ಕಾದು ನೋಡ ಬೇಕಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications