'ರೈ'ಟ್ ಹೇಳಲು ಪ್ರಕಾಶ್ಗೆ ತೆಲುಗು ಚಿತ್ರರಂಗ ತಾಕೀತು
ಹೈದರಾಬಾದ್, ಮೇ 31 : ಕನ್ನಡ ಮೂಲದ ಬಹುಭಾಷಾ ನಟ ಪ್ರಕಾಶ್ ರಾಜ್(ಪ್ರಕಾಶ್ ರೈ) ಅವರಿಗೆ ತೆಲುಗು ಚಿತ್ರ ನಿರ್ಮಾಪಕರ ಸಂಘ ಮತ್ತೆ ನಿಷೇಧ ಹೇರಿದೆ. ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟನಾಗಿರುವ ಪ್ರಕಾಶ್ ರಾಜ್ ಇತ್ತೀಚಿನ ದಿನಗಳಲ್ಲಿ ನಟನೆಗಿಂತ ಇತರೆ ವಿಷಯಗಳ ಮೇಲೆ ಪ್ರಚಾರದಲ್ಲಿರುವುದು ವೃತ್ತಿ ಜೀವನ ಮೇಲೆ ವಿವಾದಗಳ ಕಾರ್ಮೋಡ ಕವಿದಿದೆ.
ಶುಕ್ರವಾರ ನಡೆದ ಚಲನಚಿತ್ರ ಕಲಾವಿದರ ಸಂಘ ಹಾಗೂ ನಿರ್ಮಾಪಕರ ಮಂಡಳಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಕಾಶ್ ರಾಜ್ ಮೇಲೆ ನಿಷೇಧ ಹೇರುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಚಿತ್ರೀಕರಣ ಸ್ಥಳಕ್ಕೆ ತಡವಾಗಿ ಬರುವುದು, ಕಾಲ್ಶೀಟ್ ನೀಡಿ ನಂತರ ಸತಾಯಿಸುವುದು ಸೇರಿದಂತೆ ಅನೇಕ ಆರೋಪಗಳು ಇವರ ಮೇಲಿವೆ. ಹೀಗಾಗಿ ಇನ್ನು ಮುಂದೆ ಪ್ರಕಾಶ್ ರಾಜ್ ಅವರ ನಟನೆಗೆ ಯಾವ ನಿರ್ಮಾಪಕರೂ ಕರೆಯುವಂತಿಲ್ಲ. ಈ ಸೂಚನೆ ಉಲ್ಲಂಘಿಸುವ ನಿರ್ಮಾಪಕರಿಗೆ ಚಿತ್ರೋಧ್ಯಮ ಸಹಕಾರ ನೀಡುವುದಿಲ್ಲ ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಈ ಹಿಂದೆಯೂ ಕೂಡಾ ತೆಲುಗು ಚಿತ್ರ ನಿರ್ಮಾಪಕರ ಸಂಘ ಪ್ರಕಾಶ್ ರಾಜ್ ಅವರನ್ನು ನಿಷೇಧಿಸಿತ್ತು. ಆಗ ಅವರು ಉಪವಾಸ ಸತ್ಯಾಗ್ರಹ ನಡೆಸಿ ನಿಷೇಧ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆನಂತರ ತಮಿಳು ಚಿತ್ರರಂಗದಲ್ಲಿಯೂ ತೊಡಗಿಸಿಕೊಂಡಿದ್ದರು. ಇದರಿಂದ ತೆಲುಗು ಚಿತ್ರ ನಿರ್ಮಾಪಕರು ಹೇಳಿದ ಸಮಯಕ್ಕೆ ಬರಲು ಅವರಿಗೆ ಆಗುತ್ತಿರಲಿಲ್ಲ. ಈ ಕಾರಣದಿಂದ ಮತ್ತೆ ತೆಲುಗು ನಿರ್ಮಾಪಕರು ನಿಷೇಧ ಹೇರಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಕಾಶ್ ರಾಜ್ ಮತ್ತೆ ಉಪವಾಸ ಸತ್ಯಾಗ್ರಹ ನಡೆಸುವ ಸಾಧ್ಯತೆಗಳಿವೆ. ತೆಲುಗು ನಿರ್ಮಾಪಕ ಸಂಘ ಹೇರಿರುವ ನಿಷೇಧ ಕುರಿತು ಪ್ರಕಾಶ್ ರಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
(ದಟ್ಸ್ಸಿನಿ ವಾರ್ತೆ)


Click it and Unblock the Notifications











