ಆ.1ರಿಂದ ಹೊಸ ಚಿತ್ರ ಪ್ರದರ್ಶನವಿಲ್ಲ -ಪ್ರದರ್ಶಕರ ಬೆದರಿಕೆ
ಬೆಂಗಳೂರು : ನಿರ್ಮಾಪಕರ ಪ್ರತಿಭಟನೆಯ ನೆನಪು ಇನ್ನೂ ಹಸಿಯಾಗಿರುವಾಗಲೇ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಪ್ರತಿಭಟನೆಗೆ ಕಪ್ಪು ಬಾವುಟ ಸಿದ್ಧವಾಗುತ್ತಿದೆ. ಈ ಬಾರಿ ಪ್ರತಿಭಟನೆಯ ಪಾಳಿ ಥಿಯೇಟರ್ಗಳ ಮಾಲೀಕರದು.
ಸೇವಾಶುಲ್ಕ ರದ್ದುಪಡಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನಗೊಂಡಿರುವ ಕರ್ನಾಟಕ ಚಲನಚಿತ್ರ ಪ್ರದರ್ಶಕರು ಆಗಸ್ಟ್ 1ರ ಶುಕ್ರವಾರದಿಂದ ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರವನ್ನು ಪ್ರದರ್ಶನ ಮಾಡದಿರಲು ನಿರ್ಧರಿಸಿದ್ದಾರೆ.
ಸರ್ಕಾರದ ಮುಂದೆ 12 ಅಂಶಗಳ ಬೇಡಿಕೆಯ ಪಟ್ಟಿಯಿಟ್ಟಿರುವ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲ, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೊಸ ಚಿತ್ರಗಳನ್ನು ಪ್ರದರ್ಶಿಸುವುದಿಲ್ಲವೆಂದು ಬೆದರಿಕೆ ಒಡ್ಡಿದೆ. ಆಗಸ್ಟ್ 1ರಿಂದ ಯಾವುದೇ ಹೊಸ ಚಿತ್ರ ಪ್ರದರ್ಶಿಸುವುದಿಲ್ಲ ಎಂದು ಮಹಾ ಮಂಡಲದ ಸಮಿತಿ ಗುರುವಾರ ಸಭೆ ಸೇರಿ ತೀರ್ಮಾನ ಕೈಗೊಂಡಿದೆ.
ಸೇವಾಶುಲ್ಕ ರದ್ದುಪಡಿಸಿರುವುದರಿಂದ ಥಿಯೇಟರ್ಗಳು ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿವೆ. ಟೀವಿ, ಕೇಬಲ್ಗಳಿಂದಾಗಿ ಈಗಾಗಲೇ ಪ್ರೇಕ್ಷಕರು ಸಿನಿಮಾ ಮಂದಿರಗಳಿಗೆ ಬರುತ್ತಿಲ್ಲ . ಇಂಥ ಸಂದರ್ಭದಲ್ಲಿ ಸೇವಾಶುಲ್ಕವನ್ನು ಏಕಾಏಕಿ ರದ್ದುಪಡಿಸಿರುವ ಸರ್ಕಾರದ ನಿರ್ಧಾರ ಥಿಯೇಟರ್ಗಳಿಗೆ ಮೃತ್ಯುಪ್ರಾಯವಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











