ಕೀರ್ತಿ ಮುಂದೆ ಉಪ್ಪಿ ಹೆಸರೆತ್ತಬೇಡಿ, ಆಕೆಗೆ ಕೋಪ ಬರುತ್ತೆ !
*ದಟ್ಸ್ಕನ್ನಡ ಬ್ಯೂರೋ
ಉಪೇಂದ್ರ ಗ್ರಹಚಾರ ಯಾಕೋ ಪೂರ್ತಿ ಕೆಟ್ಟಿದೆ ಅಂತ ಕಾಣುತ್ತೆ ; ಈಗ ‘ಕೀರ್ತಿ’ ಗ್ರಹ ಈತನಿಗೆ ಪೂರ್ತಿ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ‘ಹಾಲಿವುಡ್’ ಸಿನಿಮಾ ಪರವಾಗಿಲ್ಲ ಎಂಬಂತೆ ಓಡುತ್ತಿದ್ದರೂ, ದೂರದೂರಿನಲ್ಲಿ ಕೀರ್ತಿ ರೆಡ್ಡಿ ಉಪ್ಪಿ ವಿರುದ್ಧ ಕಿಡಿ ಕಾರುತ್ತಿರುವುದು ಈತನ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.
‘ಸೂಪರ್ ಸ್ಟಾರ್’ ಎಂಬ ಸೂಪರ್ ತೋಪು ಚಿತ್ರದಲ್ಲಿ ನಾಗತಿಹಳ್ಳಿ ನಿದೇಶನದಲ್ಲಿ ಉಪ್ಪಿ ಜೊತೆ ಕೀರ್ತಿ ನಟಿಸಿದ್ದಳು. ಕಂಡ ಬಾಲಿವುಡ್ ಕನಸನ್ನು ಬೇಗ ನನಸಾಗಿಸಿಕೊಂಡು, ಅಮಿತಾಬ್ ಮಗನೊಟ್ಟಿಗೇ ನಟಿಸಿ, ಅಷ್ಟೇ ಬೇಗ ಮುಂಬಯಿಯಿಂದ ದೂರವಾದ ಕೀರ್ತಿಗೆ ಕೀರ್ತಿ ಗಿಟ್ಟಿದ್ದು ಟಾಲಿವುಡ್ನಲ್ಲಿ. ಅಲ್ಲಿಂದ ಅನಾಮತ್ತು ಕನ್ನಡಕ್ಕೆ ಕರೆತಂದದ್ದು ಉಪ್ಪಿ.
ಅದೇನು ಕಾಟ ಕೊಟ್ಟರೋ ಏನೋ, ಸಿನಿಮಾ ತೋಪಾಗುವವರೆಗೆ ಸುಮ್ಮನಿದ್ದ ಕೀರ್ತಿ ಈಗ ಮುಂಬಯಿ ಮತ್ತು ಹೈದರಾಬಾದ್ನಲ್ಲಿ ಸಿಕ್ಕಸಿಕ್ಕವರ ಹತ್ತಿರ ಉಪ್ಪಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಆತನ ಜೊತೆ ನಟಿಸಿದ್ದೇ ತಮ್ಮ ಜೀವನದ ಬ್ಲಂಡರ್ ಎಂಬಂತೆ ರೋದಿಸುತ್ತಿದ್ದಾರೆ. ತಮ್ಮ ಜನ್ಮದಲ್ಲೇ ಉಪ್ಪಿ ಜೊತೆ ನಟಿಸುವುದಿಲ್ಲ ಅಂತ ಸಂಕಲ್ಪ ಮಾಡಿರುವ ಕೀರ್ತಿ, ಇನ್ನು ಇತ್ತ ತಲೆಹಾಕಿ ಮಲಗದಿರಲು ನಿರ್ಧರಿಸಿದ್ದಾರೆ !
ಫ್ಲಾ ್ಯಷ್ಬ್ಯಾಕ್
‘ಪ್ರೀತ್ಸೆ’ ಚಿತ್ರದಲ್ಲಿ ನಟಿಸಿದ್ದ ಸಿಂಹಕಟಿ ಸೋನಾಲಿ ಬೇಂದ್ರೆ ಕೂಡ ಉಪ್ಪಿ ಬಗ್ಗೆ ಇದೇ ರೀತಿಯ ಮಾತುಗಳನ್ನಾಡಿದ್ದು ನಿಮಗೆ ನೆನಪಿರಬಹುದು. ಆ ಕಾರಣಕ್ಕೇ, ಕನ್ನಡ ಚಿತ್ರಗಳಲ್ಲಿ ಇನ್ನೊಮ್ಮೆ ನಟಿಸದಿರಲೂ ಅವರು ತೀರ್ಮಾನಿಸಿದ್ದರು.
ಉಪ್ಪಿ , ಏನಿದೆಲ್ಲ ? ಇಷ್ಟಕ್ಕೂ, ನೀವು ಕೀರ್ತಿಗೆ ಕೊಟ್ಟ ಕಾಟವಾದರೂ ಏನು? ಹೇಳುವಂಥವರಾಗಿ !
ಉಪೇಂದ್ರ ಹೆಸರೆತ್ತಿದರೆ, ನಿಮಗೇನನ್ನಿಸುತ್ತೆ ?
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











