ತೆಲಂಗಾಣ ರಾಜ್ಯಪಾಲರಾಗುತ್ತಾರಾ ನಟ ರಜನಿಕಾಂತ್?: ಸಹೋದರ ಕೊಟ್ಟ ಸುಳಿವು ಇದು!
ಗಲ್ಲಾ ಪೆಟ್ಟಿಗೆಯಲ್ಲಿ ಸುಮಾರು 650 ಕೋಟಿ ರೂಪಾಯಿ ಬಾಚಿಕೊಂಡು ಇನ್ನು ಥಿಯೇಟರ್ಗಳಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾ ಜೈಲರ್. ನಟ ರಜನಿಕಾಂತ್ ಅಭಿನಯದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳು ನಟನ ಸಿನಿಮಾವನ್ನು ತಲೆಯ ಮೇಲೆ ಹೊತ್ತು ಮೆರೆಸಿದ್ದಾರೆ.
ಸಿನಿಮಾ ಗೆಲುವ ಸಂಭ್ರಮಿಸುತ್ತಿರುವಾಗಲೇ ಮತ್ತೊಂದು ಖುಷಿಯ ಸುದ್ದಿ ಸಿಕ್ಕಿದ್ದು, ನಟ ರಜನಿಕಾಂತ್ ರಾಜ್ಯಪಾಲರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಅವರ ಸಹೋದರ ಸತ್ಯನಾರಾಯಣ ರಾವ್ ಸುಳಿವು ನೀಡಿದ್ದಾರೆ. ಇದು ಸದ್ಯ ತೆಲಂಗಾಣ ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ.

ರಜನಿಗೆ ಸಿಗಲಿದೆಯೇ ರಾಜ್ಯಪಾಲರ ಹುದ್ದೆ?
ರಜನಿಕಾಂತ್ ಜೈಲರ್ನ ಗಲ್ಲಾಪೆಟ್ಟಿಗೆ ಯಶಸ್ಸಿನೊಂದಿಗೆ ತಮ್ಮ ಸ್ಟಾರ್ಡಮ್ ವಾಪಸ್ ಪಡೆದಿದ್ದಾರೆ. ಇದಲ್ಲದೆ ಅವರು ರಾಜಕೀಯ ಕಾರಣಗಳಿಂದಲು ಸುದ್ದಿಯಲ್ಲಿದ್ದಾರೆ. ಈ ಹಿಂದೆಯೂ ರಾಜಕೀಯ ಪಕ್ಷ ಘೋಷಿಸಿದ್ದರು. ಆದರೆ, ಚುನಾವಣೆ ವೇಳೆ ಅಬ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಈಗ ಮತ್ತೆ ರಾಜಕೀಯ ಮತ್ತು ರಜನಿಕಾಂತ್ ಸುದ್ದಿಯಲ್ಲಿದ್ದಾರೆ.
ನಟನ ಸಹೋದರ ಸತ್ಯನಾರಾಯಣ ರಾವ್ ಅವರು ಬುಧವಾರ ರಜನಿಕಾಂತ್ ಅವರ ರಾಜಕೀಯ ವಿಷಯದ ಬಗ್ಗೆ ಹೊಸ ಸುಳಿವು ನೀಡಿದ್ದಾರೆ. ಮಧುರೈನ ಮೀನಾಕ್ಷಿ ಅಮ್ಮನ ದೇವಸ್ಥಾನಕ್ಕೆ ಬಂದಿದ್ದ ಅವರು, ದೇವರ ದರ್ಶನ ಪಡೆದು ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಆ ಫೋಟೋಗಳು ಅಂತರ್ಜಾಲದಲ್ಲಿ ಬಿಡುಗಡೆಯಾಗುತ್ತಿವೆ.
ಮಾಧ್ಯಮ ಪ್ರತಿನಿಧಿಗಳು ರಜನಿಕಾಂತ್ ಅವರಿಗೆ ರಾಜಕೀಯ ಹುದ್ದೆ ಸಿಗುತ್ತದೆಯೇ ಎಂದು ಸಹೋದರ ಸತ್ಯನಾರಾಯಣ ರಾವ್ ಅವರನ್ನು ಕೇಳಿದ್ದಾರೆ. ಈ ವೇಳೆ ತಕ್ಷಣವೇ ರಜನಿ ಇನ್ನು ಮುಂದೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿ ಆಶ್ಚರ್ಯ ಪಡಿಸಿದ್ದಾರೆ.

ರಾಜಕೀಯಕ್ಕೆ ಬರಲ್ಲ, ರಾಜ್ಯಪಾಲರಾಗಬಹುದು!
ರಜನಿಕಾಂತ್ ಇನ್ನು ಮುಂದೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ ಅವರ ಸಹೋದರ, 'ಅವರಿಗೆ ರಾಜ್ಯಪಾಲರ ಹುದ್ದೆ ಸಿಗುವುದು ಭಗವಂತನ ಕೈಯಲ್ಲಿದೆ' ಎಂದು ಹೇಳಿದ್ದಾರೆ. ಏಕಾಏಕಿ ರಜನಿಕಾಂತ್ ಅವರು ರಾಜ್ಯಪಾಲರ ಹುದ್ದೆಗೆ ಹೋಗಬಹುದು ಎಂಬುದಕ್ಕೂ ಕಾರಣವಿದೆ.
ರಜನಿಕಾಂತ್ ಇತ್ತೀಚೆಗೆ ತಮ್ಮ ಜೈಲರ್ ಬಿಡುಗಡೆಗೂ ಮುನ್ನ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರಯಾಣ ಕೈಗೊಂಡಿದ್ದರು. ಅಲ್ಲಿಂದ ಹಿಂದಿರುಗುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಸೇರಿದಂತೆ ಕೆಲವು ರಾಜಕೀಯ ನಾಯಕರನ್ನು ಭೇಟಿಯಾಗಿದ್ದರು.
ಅದರಲ್ಲೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ರಜನಿಕಾಂತ್ ಆಶೀರ್ವಾದ ಪಡೆದಿದ್ದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಷ್ಟೇ ಅಲ್ಲದೇ ಮಾಜಿ ಮುಖ್ಯಮಂತ್ರಿ ಓ ಪನ್ನಿರಸೆಲ್ವಂ (ಒಪಿಎಸ್) ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ್ದಾರೆ.
ಹೀಗಿರುವಾಗ ರಜನಿಕಾಂತ್ ಅವರಿಗೆ ರಾಜ್ಯಪಾಲರ ಹುದ್ದೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಜನಿ ಸಹೋದರನ ಉತ್ತರ ಭಾರೀ ಕುತೂಹಲ ಮೂಡಿಸಿದೆ. ನಟ ಇನ್ನು ಕೆಲವೇ ಚಿತ್ರಗಳನ್ನು ಮಾಡಿ ವಿರಾಮ ಪಡೆಯಲಿದ್ದಾರೆ ಎಂಬ ಬಗ್ಗೆ ವರದಿಗಳಿವೆ.
ಆ ವೇಳೆಗೆ ಅವರಿಗೆ ರಾಜ್ಯಪಾಲರ ಹುದ್ದೆಯೂ ಸಿಗಲಿದೆ. ರಾಜಕೀಯಕ್ಕೆ ಬರದಿದ್ದರೂ ರಾಜ್ಯಪಾಲರಾಗುವುದು ಸೂಪರ್ ಸ್ಟಾರ್ ಅವರ ಮುಂದಿನ ಹೆಜ್ಜೆ ಎಂದು ಹಲವರು ಹೇಳಿದ್ದಾರೆ. ಇನ್ನು, ಕಳೆದ ಚುನಾವಣೆಯಲ್ಲಿ ಪಕ್ಷ ಘೋಷಿಸಿ, ಚುನಾವಣೆಗೆ ನಿಲ್ಲದಿರುವುದು ಕೂಡ ಬಿಜೆಪಿಯೊಂದಿಗಿನ ಒಪ್ಪಂದವೇ ಎಂದು ಹಲವರು ಊಹಿಸಿದ್ದರು.


Click it and Unblock the Notifications











