ಮದುವೆಯಾದ 2 ವರ್ಷಕ್ಕೆ ಡಿವೋರ್ಸ್ ಪಡೆಯಲು ಮುಂದಾದ್ರಾ ತಾರಾ ಜೋಡಿ?
ಡಿವೋರ್ಸ್ ಪದ ಕಿವಿ ಮೇಲೆ ಬಿದ್ದರೆ ಚಿತ್ರರಂಗದ ಮಂದಿ ಶಾಕ್ ಆಗುತ್ತಾರೆ. ಅಷ್ಟರಮಟ್ಟಿಗೆ ಪದೇ ಪದೆ ತಾರಾ ಜೋಡಿ ಬೇರಾಗುವ ಸುದ್ದಿಗಳು ಕೇಳಿಬರುತ್ತಲೇ ಇದೆ. ಆರಂಭದಲ್ಲಿ ಗಾಸಿಪ್ ಎಂದು ಶುರುವಾಗುವ ಸುದ್ದಿ ಕೊನೆಗೆ ನಿಜವಾಗಿರುವ ಸಾಕಷ್ಟು ಉದಾಹರಣೆಗಳಿವೆ. ಡಿವೋರ್ಸ್ ಪಡೆದು ಎರಡನೇ ಮದುವೆ ಆಗಿರುವವರ ಪಟ್ಟಿ ಕೂಡ ದೊಡ್ಡದಿದೆ.
ಕೆಲ ತಾರಾ ಜೋಡಿಗಳು ಬೇರಾಗುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡುತ್ತಾರೆ. ಮತ್ತೆ ಕೆಲವರ ಡಿವೋರ್ಸ್ ವಿಚಾರ ಬಹಳ ದಿನ ಗುಟ್ಟಾಗಿ ಉಳಿಯುವುದಿಲ್ಲ. ಇನ್ನು ಕೆಲವರು ಫ್ಯಾಮಿಲಿ ಕೋರ್ಟ್ ಹತ್ತಿದ ಮೇಲೆ ಸುದ್ದಿ ಬಹಿರಂಗವಾಗುತ್ತದೆ. ಸದ್ಯ ತೆಲುಗು ನಟ ಶರ್ವಾನಂದ್ ಹಾಗೂ ಪತ್ನಿ ರಕ್ಷಿತಾ ರೆಡ್ಡಿ ದೂರಾಗುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೀತಿದೆ.

ಎರಡು ವರ್ಷಗಳ ಹಿಂದೆ ನಟ ಶರ್ವಾನಂದ್ ಹಾಗೂ ರಕ್ಷಿತಾ ಹಸೆಮಣೆ ಏರಿದ್ದರು. ಜೈಪುರದಲ್ಲಿ ಅದ್ಧೂರಿಯಾಗಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ಚಿತ್ರರಂಗದ ಗಣ್ಯರು ಹಾಗೂ ಎರಡೂ ಕುಟುಂಬದ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಮೊನ್ನೆ ಮೊನ್ನೆ ಮದುವೆ ಆದಂತೆ ಇದ್ದ ಜೋಡಿ ಈಗ ದೂರಾಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇಬ್ಬರೂ ಬೇರೆ ಬೇರೆ ನಿವಾಸದಲ್ಲಿ ವಾಸಿಸುತ್ತಿದ್ದು ಅಂತರ ಕಾಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಸದ್ಯ ನಟ ಶರ್ವಾನಂದ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಗಂಡ, ಹೆಂಡತಿ ನಡುವೆ ಅಂತರ ಏರ್ಪಟ್ಟಿರುವುದು ನಿಜ, ಆದರೆ ಡಿವೋರ್ಸ್ ತೆಗೆದುಕೊಳ್ಳುವ ಹಂತಕ್ಕೆ ಹೋಗಿಲ್ಲ ಎಂದು NTV ತೆಲುಗು ವಾಹಿನಿ ವರದಿ ಮಾಡಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಶರ್ವಾನಂದ್ ಸದ್ಯ ನಟಿಸುತ್ತಿದ್ದಾರೆ. ಮಾಳವಿಕಾ ನಾಯರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು ಅತುಲ್ ಹಾಗೂ ಬ್ರಹ್ಮಾಜಿ ಚಿತ್ರದ ತಾರಾಗಣದಲ್ಲಿದ್ದಾರೆ.

ಕಳೆದ ವರ್ಷ ಶರ್ವಾನಂದ್ ಹಾಗೂ ರಕ್ಷಿತಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿನ ಜೊತೆ ಗಂಡ ಹೆಂಡತಿ ಅನ್ಯೋನ್ಯವಾಗಿ ಇದ್ದಾರೆ, ಡಿವೋರ್ಸ್ ಎನ್ನುವುದೆಲ್ಲಾ ಬರೀ ವದಂತಿ ಅಷ್ಟೇ ಎನ್ನುವ ಮಾತುಗಳು ಕೇಳಿಬರ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗುವ ಸಾಧ್ಯತೆಯಿದೆ. ಅಂದಹಾಗೆ ರಕ್ಷಿತಾಗೆ ಚಿತ್ರರಂಗದ ನಂಟು ಇಲ್ಲ. ಆಕೆ ಐಟಿ ಉದ್ಯೋಗಿ ಆಗಿದ್ದು ವಿದೇಶದಲ್ಲಿ ಕೆಲಸ ಮಾಡಿಕೊಂಡು ಇದ್ದವರು.
ರಕ್ಷಿತಾ ಅವರದ್ದು ರಾಜಕೀಯ ಹಿನ್ನೆಲೆ ಇರುವ ಕುಟುಂಬ. ತಾತ ಬೊಜ್ಜಲ ಗೋಪಾಲ ಕೃಷ್ಣ ರೆಡ್ಡಿ ತೆಲುಗು ದೇಶಂ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದರು. ತಂದೆ ವಕೀಲರು. ಇನ್ನು ರಾಮ್ಚರಣ್ ಆತ್ಮೀಯ ಸ್ನೇಹಿತ ಶರ್ವಾನಂದ್. ಅಂದಹಾಗೆ ಚಿರಂಜೀವಿ ನಟಿಸಿದ್ದ ಥಮ್ಸ್ ಅಪ್ ಜಾಹೀರಾತಿನಲ್ಲಿ ಶರ್ವಾನಂದ್ ಮೊದಲಿಗೆ ಕಾಣಿಸಿಕೊಂಡಿದ್ದರು.
'ಐಧೋ ತರೀಖು' ಶರ್ವಾನಂದ್ ನಟಿಸಿದ ಮೊದಲ ಸಿನಿಮಾ. 'ಅಮ್ಮ ಚೆಪ್ಪಿಂದಿ', 'ಗಮ್ಯಂ', 'ರನ್ ರಾಜಾ ರನ್', 'ಶತಮಾನಂ ಭವತಿ', 'ಜಾನು' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಶರ್ವಾನಂದ್ ನಟಿಸಿ ಗೆದ್ದಿದ್ದಾರೆ.
ಸದ್ಯ 'ನಾರಿ ನಾರಿ ನಡುಮು ಮುರಾರಿ', 'ಭೋಗಿ' ಹಾಗೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ಶರ್ವಾನಂದ್ ನಟಿಸುತ್ತಿದ್ದಾರೆ. ನಿರ್ಮಾಪಕನಾಗಿ 'ಕೋ ಅಂಟೆ ಕೋಡಿ' ಎಂಬ ಚಿತ್ರವನ್ನು ಕೂಡ ಅವರು ನಿರ್ಮಾಣ ಮಾಡಿದ್ದರು. ವಿಜಯವಾಡದಲ್ಲಿ ಹುಟ್ಟಿಬೆಳೆದ ಶರ್ವಾನಂದ್ ಕಾಲೇಜು ದಿನಗಳಲ್ಲೇ ಶರ್ವಾನಂದ್ ಮಾಡೆಲಿಂಗ್ ಕಡೆ ಮುಖ ಮಾಡಿದ್ದರು. ಬಳಿಕ ಆಕ್ಟಿಂಗ್ ಕಲಿತು ಬಣ್ಣದಲೋಕದತ್ತ ಮುಖ ಮಾಡಿದ್ದರು.


Click it and Unblock the Notifications











