ಆಕ್ಷನ್ ಕ್ವೀನ್ ಮಾಲಾಶ್ರೀ ಬೇರೆ ದಾರಿ ಹಿಡಿದರೇ?
ಆದರೆ ಸುದ್ದಿ ಬಂದಿರುವದಂತೂ ನಿಜ, ಮಾಲಾಶ್ರೀಯವರನ್ನು ಕಾಮಿಡಿ ಪಾತ್ರದಲ್ಲಿ ಪ್ರೇಕ್ಷಕರ ಮುಂದಿಡಲು ಯೋಚಿಸಲಾಗುತ್ತಿದೆ. ಅದು ಯಾರ ಚಿತ್ರ ಗೊತ್ತೇ? ಈ ಮೊದಲು ಕುರಿಗಳು ಸರ್ ಕುರಿಗಳು, ಕೋತಿಗಳು ಸರ್ ಕೋತಿಗಳು ಚಿತ್ರಗಳನ್ನು ಮಾಡಿ ಕನ್ನಡಿಗರನ್ನು ನಕ್ಕು ನಗಿಸಿದ್ದ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶಿಸಲಿರುವ ಚಿತ್ರ.
ಅಂತ, ಬಂಧನ, ಮುತ್ತಿನ ಹಾರ ಇಂತಹ ಕನ್ನಡಿಗರು ಮರೆಯಲಾಗದ ಸಿನಿಮಾಗಳನ್ನು ಕೊಟ್ಟಿದ್ದ ರಾಜೇಂದ್ರ ಸಿಂಗ್ ಬಾಬು ಇತ್ತೀಚೆಗೆ ಯಾಕೋ ಸುಮ್ಮನಾಗಿದ್ದರು. ಕೆಲವೇ ವರ್ಷಗಳ ಹಿಂದೆ ನಗೆಬುಗ್ಗೆ ಚಿಮ್ಮಿಸುವ ಕೆಲವೊಂದು ಚಿತ್ರ ಕೊಟ್ಟಿದ್ದು ಬಿಟ್ಟರೆ, ನಂತರ ಅವರು ಮಾಡಿದ ತಿಪ್ಪಾರಹಳ್ಳಿಯ ತರಲೆಗಳು, ರಕ್ತಾಕ್ಷ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ರೆಬೆಲ್ ಮುಂತಾದ ಚಿತ್ರಗಳು ಬಂದು ಸೋತಿವೆ ಅಥವಾ ತೆರೆಗೆ ಬಂದಿಲ್ಲ.
ಹೀಗಿರುವಾಗ ರಾಜೇಂದ್ರ ಸಿಂಗ್ ಬಾಬು ಅವರಿಗೆ ಮಾಲಾಶ್ರೀ ಮುಖ್ಯ ಭೂಮಿಕೆಯಲ್ಲಿಟ್ಟು ಹೊಸ ಚಿತ್ರ ಮಾಡುವ ಐಡಿಯಾ ತಲೆಯಲ್ಲಿ ಬಂದಿದೆ. ಆದರೆ ಸುದ್ದಿಯಿನ್ನೂ ಮಾಲಾಶ್ರೀಯವರ ಬಳಿಗೆ ಹೋಗಿಲ್ಲ. ಬಾಬು ಇನ್ನಷ್ಟೇ ಮಾಲಾಶ್ರೀಯವರನ್ನು ಭೇಟಿಯಾಗಬೇಕು, ಒಪ್ಪಿಸಬೇಕು. ಮಾಲಾಶ್ರೀ ಇಷ್ಟಪಟ್ಟು ಮಾಡುತ್ತೇನೆ ಎಂದರೆ ಬಾಬುಗೆ ಜಾಕ್ ಪಟ್!
ನಿರ್ಮಾಪಕ ಕೋಟಿ ರಾಮು ಅವರನ್ನು ಮದುವೆಯಾದ ಮೇಲೆ ಮೇಲೆ ಮಾಲಾಶ್ರೀ ಆಕ್ಷನ್ ಬಿಟ್ಟು ಬೇರೆ ಚಿತ್ರಗಳಲ್ಲಿ ನಟಿಸಿಲ್ಲ. ನಾಯಕಿಯಾಗುವ ಆಫರ್ ಬಂದಾಗಲೂ ನಯವಾಗಿಯೇ ತಿರಸ್ಕರಿಸಿದ್ದಾರೆ. "ನಾನೀಗ ಮದುವೆಯಾಗಿದ್ದೇನೆ, ಗೃಹಿಣಿ ಎನಿಸಿಕೊಂಡಿದ್ದೇನೆ. ಈ ಮೊದಲಿನಂತೆ ಯಾವುದೇ ಪಾತ್ರದಲ್ಲೂ ನಟಿಸಲು ಸಾಧ್ಯವಿಲ್ಲ" ಎಂಬುದು ಮಾಲಾಶ್ರೀ ಎಲ್ಲರಿಗೂ ಕೊಡುತ್ತಿದ್ದ ಉತ್ತರ.
ಆದರೆ ಈಗ ಆಫರ್ ನೀಡುತ್ತಿರುವ ರಾಜೇಂದ್ರಸಿಂಗ್ ಬಾಬು ಅವರಿಗೆ ಮಾಲಾಶ್ರೀಯವರು ಯಾವ ಉತ್ತರವನ್ನು ಕೊಡಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ಈ ಹಿಂದಿನ ತಮ್ಮ ಚಿತ್ರಕ್ಕೆ ಕುರಿಗಳು, ಕತ್ತೆಗಳು ಹಾಗೂ ಕೋತಿಗಳು ಸಾರ್ ಕೋತಿಗಳು ಎಂಬ ಪ್ರಾಣಿಗಳ ಹೆಸರಿಟ್ಟಿದ್ದ ಬಾಬು, ಮಾಲಾಶ್ರೀ ನಟಿಸಲಿರುವ ಚಿತ್ರಕ್ಕೆ ಅದ್ಯಾವ ಪ್ರಾಣಿಯ ಹೆಸರಿಡುತ್ತಾರೋ ಏನೋ! (ಒನ್ ಇಂಡಿಯಾ ಕನ್ನಡ)


Click it and Unblock the Notifications












