ನಿತ್ಯಾ ಓಕೆ ಅಂದ್ರೆ ಆ ಚಿತ್ರದಲ್ಲಿ ನಟಿಸ್ತಾರಂತೆ ರಂಜಿತಾ
ಇತ್ತೀಚೆಗೆ ತಾರೆ ರಂಜಿತಾ ಅವರನ್ನು ತೆಲುಗಿನ ನಿರ್ದೇಶಕರೊಬ್ಬರು ಸಂಪರ್ಕಿಸಿ ತಮ್ಮ ಚಿತ್ರದಲ್ಲಿ ಅಭಿನಯಿಸಬೇಕು ಎಂದರಂತೆ. ಕತೆ ಕೇಳಿದ ಮೇಲೆ ರಂಜಿತಾ ಬಹಳ ಇಂಪ್ರೆಸ್ ಆದರಂತೆ. ಆ ಚಿತ್ರಕ್ಕೆ 'ಕಾಲಿಚರಣ್' ಎಂಬ ಹೆಸರನ್ನು ಇಡಲಾಗಿದ್ದು ಸ್ವಾಮೀಜಿಯೊಬ್ಬರ ಸುತ್ತ ಕತೆ ಸುತ್ತುತ್ತದಂತೆ.
ರಂಜಿತಾ ಅವರಿಗೇನು ಕತೆ ತುಂಬ ಹಿಡಿಸಿದೆ. ಆದರೆ ಆ ಚಿತ್ರಕ್ಕೆ ಸಹಿಹಾಕಬೇಕಾದರೆ ಸ್ವಾಮಿ ನಿತ್ಯಾನಂದ ಅವರ ಅನುಮತಿ ಬೇಕು ಎಂದಿದ್ದಾರಂತೆ. ಆದರೆ ನಿತ್ಯಾನಂದ ಈ ಚಿತ್ರದಲ್ಲಿ ಅಭಿನಯಿಸಲು ಅನುಮತಿ ಕೊಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ.
ಸ್ವಲ್ಪ ಸಮಯ ಕೊಡಿ ನಾನೇ ತಮ್ಮನ್ನು ಸಂಪರ್ಕಿಸುತ್ತೇನೆ ಎಂದು ರಂಜಿತಾ ನಿರ್ದೇಶಕರಿಗೆ ತಿಳಿಸಿದ್ದಾಗಿ ಸುದ್ದಿ ಇದೆ. ಆದರೆ ಇದು ಯಾವುದೇ ವಿವಾದಿತ ಸ್ವಾಮೀಜಿ ಬಗೆಗಿನ ಕತೆಯಂತೂ ಅಲ್ಲವಂತೆ. ಎಂಬತ್ತರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ನೈಜಕತೆಯೊಂದನ್ನು ಚಿತ್ರ ಮಾಡುತ್ತಿರುವುದಾಗಿ ಪ್ರವೀಣ್ ಎಂಬ ನಿರ್ದೇಶಕರು ತಿಳಿಸಿದ್ದಾರೆ.
ಇವರು ಈಗಾಗಲೆ ತೆಲುಗಿನ 'ಗಮ್ಯಂ 2' ಎಂಬ ಹಿಟ್ ಚಿತ್ರವನ್ನು ಕೊಟ್ಟವರು. ಈಗ ರಂಜಿತಾ ಅವರನ್ನು ಹಾಕಿಕೊಂಡು ಚಿತ್ರ ಮಾಡಲು ಮುಂದಾಗಿದ್ದಾರೆ. ಆದರೆ ರಂಜಿತಾ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿರುವ ಕಾರಣ ಅವರು ಮತ್ತೊಬ್ಬ ನಾಯಕಿಯ ತಲಾಷ್ನಲ್ಲಿ ಇದ್ದಾರಂತೆ.
ಏತನ್ಮಧ್ಯೆ ರಂಜಿತಾ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಗೆ ಒದಗಿರುವ ಪರಿಸ್ಥಿತಿಯನ್ನು ಕಂಡು ಗೋಳೋ ಎಂದು ಕಣ್ಣೀರಿಟ್ಟಿದ್ದರು. ಸ್ವಾಮೀಜಿಗಳ ತೇಜೋವಧೆ ಮಾಡಲು ವ್ಯವಸ್ಥಿತವಾಗಿ ಸಂಚು ನಡೆಯುತ್ತಿದೆ ಎಂದು ರಂಜಿತಾ ಆರೋಪಿಸಿದ್ದರು.
ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದರೂ ರಂಜಿತಾ ಯಾವುದೇ ಚಿತ್ರಕ್ಕೂ ಸಹಿಹಾಕುತ್ತಿಲ್ಲವಂತೆ. ಹಾಗಂತ ಅವರು ಸುಮ್ಮನೆ ಕೂತಿಲ್ಲ. ಸ್ವಾಮಿ ನಿತ್ಯಾನಂದ ಅವರ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಆದರೆ ಆ ಚಿತ್ರ ಸೆಟ್ಟೇರುವ ಕಾಲ ಇನ್ನೂ ದೂರ ಇದೆ ಎನ್ನುತ್ತಾರೆ ರಂಜಿತಾ. (ಏಜೆನ್ಸೀಸ್)


Click it and Unblock the Notifications












