Samantha: ರಶ್ಮಿಕಾ ಮಂದಣ್ಣ ಬಳಿಕ ಸಮಂತಾಗೆ ಖುದ್ದು ಮ್ಯಾನೇಜರ್ನಿಂದಲೇ ಮೋಸ?
ಸಮಂತಾ ನಟನೆಯ 'ಖುಷಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವಿಜಯ್ ದೇವರಕೊಂಡ ಜೊತೆ ಚಿತ್ರದಲ್ಲಿ ಸ್ಯಾಮ್ ರೊಮ್ಯಾನ್ಸ್ ಮಾಡಿದ್ದಾರೆ. ಈ ವಾರ ಸಿನಿಮಾ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸುತ್ತಿದೆ. ವಿಜಯ್ ದೇವರಕೊಂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸಮಂತಾ ವಿದೇಶದಲ್ಲಿ ಬೀಡುಬಿಟ್ಟಿದ್ದಾರೆ. ಇದೆಲ್ಲದರ ನಡುವೆ ಸ್ಯಾಮ್ಗೆ ಖುದ್ದು ಮ್ಯಾನೇಜರ್ ಮೋಸ ಮಾಡಿರುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣಗೆ ಆಕೆಯ ಮ್ಯಾನೇಜರ್ ಮೋಸ ಮಾಡಿದ್ದ ವಿಚಾರ ಬಯಲಾಗಿತ್ತು. ಬಳಿಕ ಆತನನ್ನು ರಶ್ಮಿಕಾ ಕೆಲಸದಿಂದ ತೆಗೆದು ಹಾಕಿದ್ದರು. ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರು. ಇದೀಗ ಸ್ಯಾಮ್ಗೂ ಇದೇ ಸಮಸ್ಯೆ ಎದುರುರಾಗಿದೆ ಎಂದು ಟಾಲಿವುಡ್ನಲ್ಲಿ ಚರ್ಚೆ ನಡೀತಿದೆ. ಸಮಂತಾಗೆ ಮ್ಯಾನೇಜರ್ 1 ಕೋಟಿ ರೂ. ಮೋಸ ಮಾಡಲು ಯತ್ನಿಸಿದ ವಿಚಾರ ಸುದ್ದಿಯಾಗುತ್ತಿದೆ.

ಇಂಡಸ್ಟ್ರಿಯಲ್ಲಿ ಸ್ಟಾರ್ ನಟ-ನಟಿಯರ ಹಣಕಾಸಿನ ವ್ಯವಹಾರ, ಡೇಟ್ಸ್ ವಿಚಾರ ಅವರ ಮ್ಯಾನೇಜರ್ಗಳು ನಿಭಾಯಿಸುತ್ತಾರೆ. ಸಂಭಾವನೆ ಬಗ್ಗೆ ನಿರ್ಮಾಪಕರ ಬಳಿಯೂ ಮಾತನಾಡುತ್ತಾರೆ. ಆದರೆ, ಇದನ್ನೇ ಅವಕಾಶವನ್ನಾಗಿ ಮಾಡಿಕೊಂಡ ಸಮಂತಾ ಮ್ಯಾನೇಜರ್ ವಂಚನೆ ಎಸಗಿದ್ದಾರೆ ಎಂದು ವರದಿಯಾಗಿದೆ. ಕೇಳಿದ ಸಂಭಾವನೆಗಿಂತ ಹೆಚ್ಚು ಹಣ ಪಡೆದು ಹಿಂದೆ ಲಪಟಾಯಿಸಲು ಯತ್ನಿಸಿದ್ದು ತಿಳಿದ ಸಮಂತಾ ಶಾಕ್ ಆಗಿದ್ದಾರೆ. ಸ್ಯಾಮ್ ಅಮೆರಿಕದಲ್ಲಿದ್ದಾಗ ಈ ವಿಷಯ ಗೊತ್ತಾಗಿದೆಯಂತೆ.
ಸದ್ಯ ಚಿಕಿತ್ಸೆಗಾಗಿ ಆಕೆ ತನ್ನ ಖಾತೆಯ ವಿವರಗಳನ್ನು ಪರಿಶೀಲಿಸಿದಾಗ ಮ್ಯಾನೇಜರ್ ಮೋಸ ಮಾಡಲು ಯತ್ನಿಸಿದ ವಿಷಯ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ. ಸ್ಯಾಮ್ ಮ್ಯಾನೇಜರ್ ಆಕೆಯ ಬಳಿ ಸುಮಾರು ಹತ್ತು ವರ್ಷಗಳಿಂದ ಮಾಡುತ್ತಿದ್ದಾರೆ. ಆಕೆಗೆ ಬರುವ ಆಫರ್ಗಳಿಂದ ಹಿಡಿದು ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರು. ಆದಾಗ್ಯೂ, ಅನೇಕ ನಿರ್ಮಾಪಕರು ಸಮಂತಾಗೆ ಮ್ಯಾನೇಜರ್ ಅನ್ನು ತೆಗೆದುಹಾಕಲು ಸೂಚಿಸಿದರು. ಹತ್ತು ವರ್ಷಗಳಿಂದ ನಿಷ್ಠೆಯಿಂದ ದುಡಿಯುತ್ತಿರುವ ವ್ಯಕ್ತಿಯನ್ನು ತೆಗೆಯಲು ಸಾಧ್ಯವೇ ಇಲ್ಲ ಎಂದು ಆಕೆ ಹೇಳುತ್ತಿದ್ದರಂತೆ.

ಅಷ್ಟಕ್ಕೂ ವಿಚಾರ ಏನು ಅಂದರೆ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲೇ ಆಕೆಗೆ ಈ ಸಮಸ್ಯೆ ಎದುರಾಗಿತ್ತು. ಹಾಗಾಗಿ ದಿಢೀರನೇ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು. ಸಿನಿಮಾ ತಡವಾಗುತ್ತಿದ್ದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತದೆ ಎಂದು ಭಾವಿಸಿ ತಮ್ಮ ಸಂಭಾವನೆ ಕಡಿತಗೊಳಿಸಲು ಆಕೆ ತೀರ್ಮಾನಿಸಿದ್ದರಂತೆ. ಈ ವಿಚಾರವನ್ನು ತನ್ನ ಮ್ಯಾನೇಜರ್ಗೆ ಹೇಳಿ 1 ಕೋಟಿ ರೂ. ತಗ್ಗಿಸಲು ಹೇಳಿದ್ದರಂತೆ.
ಆದರೆ ಮ್ಯಾನೇಜರ್ ಆ 1 ಕೋಟಿ ರೂ. ಎಗರಿಸಲು ಉಪಾಯ ಮಾಡಿದ್ದು ನಿರ್ಮಾಪಕರ ಬಳಿ ಹೋಗಿ ಬಾಕಿ ಹಣವನ್ನು ನಗದು ರೂಪದಲ್ಲಿ ನೀಡುವಂತೆ ಕೇಳಿದ್ದರಂತೆ. ಅಷ್ಟು ಹಣ ನಗದು ರೂಪದಲ್ಲಿ ಕೊಡೋಕೆ ಸಾಧ್ಯವಿಲ್ಲ ಎಂದಾಗ ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸಲು ಹೇಳಿದ್ದರಂತೆ. ಆಗ ನಿರ್ಮಾಪಕರಿಗೆ ಅನುಮಾನ ಬಂದು ವಿಚಾರಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಹರಿದಾಡುತ್ತಿರುವ ಈ ವದಂತಿ ಎಷ್ಟು ನಿಜ ಅನ್ನುವುದನ್ನು ಕಾದು ನೋಡಬೇಕಿದೆ. ಸ್ಯಾಮ್ ಮ್ಯಾನೇಜರ್ ನಿಜವಾಗಿಯೂ ಮೋಸ ಮಾಡಿದ್ನಾ? ಅಥವಾ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿದ್ರಾ ಎನ್ನುವುದಕ್ಕೆ ಆಕೆಯೇ ಪ್ರತಿಕ್ರಿಯಿಸಬೇಕಿದೆ. ಸಿನಿಮಾ ವಿಚಾರಕ್ಕೆ ಬಂದರೆ ಸಮಂತಾ 'ಖುಷಿ' ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. 'ಯಶೋದ' ಹಾಗೂ 'ಶಾಕುಂತಲಂ' ಸಿನಿಮಾ ಸೋಲಿನ ಬಳಿಕ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
5 ಭಾಷೆಗಳಲ್ಲಿ 'ಖುಷಿ' ಸಿನಿಮಾ ರಿಲೀಸ್ ಆಗುತ್ತಿದೆ. ವಿಜಯ್ ದೇವರಕೊಂಡ ಕೂಡ 'ಲೈಗರ್' ಸಿನಿಮಾ ಸೋಲಿನಿಂದ ಹೊರಬರಲು ಯತ್ನಿಸುತ್ತಿದ್ದಾರೆ. ಈ ಸಿನಿಮಾ ಜೋಡಿಗೆ ಸಕ್ಸಸ್ ತಂದು ಕೊಡುತ್ತಾ ಕಾದು ನೋಡಬೇಕಿದೆ.


Click it and Unblock the Notifications











