ದರ್ಶನ್ 'ಕುರುಕ್ಷೇತ್ರ' ಬಿಡುಗಡೆಗೆ ಅಡ್ಡಿಯಾಗ್ತಾರಾ ನಿಖಿಲ್ ಕುಮಾರ್.?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಎಂದೇ ಗುರುತಿಸಿಕೊಂಡಿರುವ 'ಕುರುಕ್ಷೇತ್ರ' ಯುಗಾದಿ ಹಬ್ಬಕ್ಕೆ ರಿಲೀಸ್ ಆಗುತ್ತೆ ಎಂದು ಸ್ವತಃ ನಿರ್ಮಾಪಕರೇ ಹೇಳಿದ್ದಾರೆ. ಏಪ್ರಿಲ್ 5ಕ್ಕೆ ಮುನಿರತ್ನ ಕುರುಕ್ಷೇತ್ರ ಬರಬಹುದು ಎಂಬ ನಿರೀಕ್ಷೆಯಲ್ಲಿ ಡಿ ಬಾಸ್ ಬಳಗ ಎದುರು ನೋಡುತ್ತಿದೆ.
ಆದ್ರೆ, ನಿರ್ಮಾಪಕರ ಲೆಕ್ಕಾಚಾರವೂ ತಲೆಕೆಳಗಾಗುವ ಎಲ್ಲ ಲಕ್ಷಣಗಳು ಕಾಡುತ್ತಿದೆ. ಇಷ್ಟು ದಿನ ಗ್ರಾಫಿಕ್ಸ್ ಕೆಲಸದಿಂದ ಬಿಡುಗಡೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿತ್ತು. ಆದ್ರೀಗ, ನಿಖಿಲ್ ಕುಮಾರ್ ಅವರಿಂದ ಕುರುಕ್ಷೇತ್ರ ರಿಲೀಸ್ ಗೆ ಕಂಟಕವಾಗಬಹುದು.
ಹೌದು, ದರ್ಶನ್ ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿರುವ ನಿಖಿಲ್ ಕುಮಾರ್, ಈಗ ಕುರುಕ್ಷೇತ್ರಕ್ಕೆ ವಿಲನ್ ಆಗಿ ಪರಿಣಮಿಸುವ ಸಾಧ್ಯತೆ ಇದೆ. ನಿಖಿಲ್ ಕಾರಣದಿಂದ ಕುರುಕ್ಷೇತ್ರದ ಆಗಮನ ಮತ್ತೆ ಮುಂದೆ ಹೋಗಬಹುದು. ಅಷ್ಟಕ್ಕೂ, ನಿಖಿಲ್ ಕಡೆಯಿಂದ ಆಗ್ತಿರುವ ಅಡ್ಡಿ ಏನು? ಮುಂದೆ ಓದಿ....

ಮಂಡ್ಯ ಲೋಕಸಭೆಗೆ ನಿಖಿಲ್.!
ಸದ್ಯದ ರಾಜಕೀಯ ಬೆಳವಣಿಗೆ ನೋಡಿದ್ರೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡೋದು ಖಚಿತವಾಗುತ್ತಿದೆ. ಮಂಡ್ಯದಿಂದ ನಿಖಿಲ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತು ಜೋರಾಗಿದೆ. ಈ ಬಗ್ಗೆ ಸ್ವತಃ ನಿಖಿಲ್ ಹಾಗೂ ಸಿಎಂ ಪರೋಕ್ಷವಾಗಿ ಸುಳಿವು ಕೂಡ ಕೊಟ್ಟಿದ್ದಾರೆ. ಅಲ್ಲಿಗೆ ನಿಖಿಲ್ ರಾಜಕೀಯ ಪ್ರವೇಶ ಅಧಿಕೃತವಾಗಲಿದೆ.

ಸ್ಪರ್ಧೆ ಮಾಡಿದ್ರೆ ಕುರುಕ್ಷೇತ್ರಕ್ಕೆ ಅಡ್ಡಿ.!
ಒಂದು ವೇಳೆ ನಿಖಿಲ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರೆ ಕುರುಕ್ಷೇತ್ರದ ಬಿಡುಗಡೆಗೆ ಸಮಸ್ಯೆಯಾಗೋದು ಬಹುತೇಕ ಪಕ್ಕಾ. ಯಾಕಂದ್ರೆ, ದರ್ಶನ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರ ನಿಭಾಯಿಸಿದ್ದಾರೆ. ಆ ಕಡೆ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸಿದ್ರೆ, ಈ ಕಡೆ ಕುರುಕ್ಷೇತ್ರ ಬಿಡುಗಡೆಗೆ ಚುನಾವಣೆ ಆಯೋಗ ಬ್ರೇಕ್ ಹಾಕೋದು ಖಚಿತ.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
ಸದ್ಯದಲ್ಲೇ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತೆ. ದಿನಾಂಕ ಪ್ರಕಟಣೆ ಆದ ಬಳಿಕ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗುತ್ತೆ. ನಿಖಿಲ್ ಸ್ಪರ್ಧಿಯಾದ್ರೆ, ಚುನಾವಣೆ ನೀತಿ ಸಂಹಿತೆ ಮುಗಿಯವರೆಗೂ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ಅವಕಾಶವಿರಲ್ಲ. ಒಂದು ವೇಳೆ ಈ ಚಿತ್ರ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ರಿಲೀಸ್ ಆದ್ರು, ಅದು ನಿಖಿಲ್ ಕುಮಾರ್ ಗೆ ಸಮಸ್ಯೆಯಾಗಲಿದೆ. ಹಾಗಾಗಿ, ನಿಖಿಲ್ ಸ್ಪರ್ಧೆ ಮೇಲೆ ಕುರುಕ್ಷೇತ್ರದ ಬಿಡುಗಡೆಯ ಹಣೆಬರೆಹವೂ ನಿಂತಿದೆ.

ಸ್ಫರ್ಧಿಸಿಲ್ಲ ಅಂದ್ರೆ ನೋ ಪ್ರಾಬ್ಲಂ
ಒಂದು ವೇಳೆ ನಿಖಿಲ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ ಅಂದ್ರೆ ಕುರುಕ್ಷೇತ್ರ ಚಿತ್ರಕ್ಕೆ ಯಾವುದೇ ಸಮಸ್ಯೆಯಾಗಲ್ಲ. ನಿರ್ಧರಿಸಿದ ದಿನಕ್ಕೆ ಸಿನಿಮಾ ಬರಬಹುದು. ಇನ್ನೊಂದು ಕಡೆ ನಿರ್ಮಾಪಕ ಮುನಿರತ್ನ ಅವರು ಶಾಸಕರಾಗಿರುವುದರಿಂದ, ಅಲ್ಲೇನಾದರೂ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಾ ಎಂದು ನೋಡುವುದಾರೇ ಆ ಸಾಧ್ಯತೆ ಬಹಳ ಕಡಿಮೆ. ಹಾಗಾಗಿ ನಿಖಿಲ್ ಸ್ಫರ್ಧೆ ಮಾಡಿಲ್ಲ ಅಂದ್ರೆ ಯಾವುದೇ ಸಮಸ್ಯೆ ಇಲ್ಲ.

ಯುಗಾದಿಗೆ ಕುರುಕ್ಷೇತ್ರ ಡೌಟ್.!
ಬಹುಶಃ ಯುಗಾದಿಗೆ ಹಬ್ಬ ಮಾಡೋಕೆ ಸಿದ್ಧವಾಗ್ತಿದ್ದ ಫ್ಯಾನ್ಸ್ ಗೆ ಈ ಸುದ್ದಿ ಶಾಕ್ ಆಗಬಹುದು. ನಿಖಿಲ್ ಸ್ಪರ್ಧೆ ಮಾಡಿದ್ರೆ, ಕುರುಕ್ಷೇತ್ರ ಎಲೆಕ್ಷನ್ ಮುಗಿಯವರೆಗೂ ಬರಲ್ಲ ಎಂಬ ಬೇಸರ ಸಹಜವಾಗಿ ಕಾಡಲಿದೆ. ಅಲ್ಲಿಗೆ ಸಿನಿಮಾ ಬರೋದು ಚುನಾವಣೆ ಮುಗಿದ ಮೇಲೆಯೇ. ಹಾಗಾಗಿ, ಮತ್ತಷ್ಟು ದಿನ ಸ್ಯಾಂಡಲ್ ವುಡ್ ಪ್ರೇಕ್ಷಕರು ಕುರುಕ್ಷೇತ್ರಕ್ಕಾಗಿ ಕಾಯಬೇಕಾಗುತ್ತೆ. ಇದೆಲ್ಲವೂ ನಿಖಿಲ್ ಅಭ್ಯರ್ಥಿಯಾಗ್ತಾರಾ ಎಂಬುದರ ಮೇಲೆ ನಿರ್ಧಾರವಾಗಲಿದೆ.


Click it and Unblock the Notifications











