ದೇಸಿ ಸೂಪರ್ ಹೀರೊ ಆಗಿ ಅಲ್ಲು ಅರ್ಜುನ್; ಮಲಯಾಳಂ ನಿರ್ದೇಶಕ ಆಕ್ಷನ್ ಕಟ್?
'ಪುಷ್ಪ'-2 ಬ್ಲಾಕ್ಬಸ್ಟರ್ ಹಿಟ್ ಬಳಿಕ ಅಲ್ಲು ಅರ್ಜುನ್ ಹೊಸ ಚಿತ್ರ ಆರಂಭಿಸಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಚಿತ್ರ ಈಗಾಗಲೇ ಘೋಷಣೆ ಆಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಲ್ಲದರ ನಡುವೆ ಬನ್ನಿ ನಟನೆಯ ಮತ್ತೊಂದು ಸಿನಿಮಾ ಬಗ್ಗೆ ಗುಸುಗುಸು ಶುರುವಾಗಿದೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎನ್ನುವ ಊಹಾಪೋಹ ಇತ್ತು. ಸದ್ಯಕ್ಕೆ ಅದು ಸುಳ್ಳು ಎನ್ನುವಂತಾಗಿದೆ. ಇದರ ನಡುವೆ ಮೆಹರ್ ರಮೇಶ್ ನಿರ್ದೇಶನದಲ್ಲಿ ಒಂದು ಸಿನಿಮಾ ಬಗ್ಗೆ ಚರ್ಚೆ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೀಗ ಮಲಯಾಳಂ ಯುವ ನಿರ್ದೇಶಕನೂ ಚಿತ್ರಕ್ಕೂ ಬನ್ನಿ ಹೀರೋ ಆಗುತ್ತಾರೆ ಎನ್ನುವ ಚರ್ಚೆ ಹೆಚ್ಚಾಗಿದೆ.

'ಕುಂಜಿರಾಮಾಯಣಂ', 'ಗೋಧಾ' ಹಾಗೂ 'ಮಿನ್ನಲ್ ಮುರಳಿ' ರೀತಿಯ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟು ಬಾಸಿಲ್ ಜೋಸೆಫ್ ಗಮನ ಸೆಳೆದಿದ್ದಾರೆ. ಅದರಲ್ಲೂ 'ಮಿನ್ನಲ್ ಮುರಳಿ' ವಿವಿಧ ಭಾಷೆಗಳಿಗೆ ಡಬ್ ಆಗಿ ಸದ್ದು ಮಾಡಿತ್ತು. ಈ ಸೂಪರ್ ಹೀರೋ ಸಿನಿಮಾ ಬಳಿಕ ನಿರ್ದೇಶಕ ಬಾಸಿಲ್ ಮತ್ತೊಂದು ಸೂಪರ್ ಹೀರೊ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿತ್ತು.
ರಣ್ಬೀರ್ ಕಪೂರ್ಗೆ ಬಾಸಿಲ್ ಕಥೆ ಹೇಳಿದ್ದಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಬಳಿಕ ಇದೇ ಕತೆಯನ್ನು ರಣ್ವೀರ್ ಸಿಂಗ್ಗೆ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಗುಲ್ಲಾಗಿತ್ತು. ಇದೀಗ ಅದೇ ಕಥೆಯಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಈಗಾಗಲೇ ನಿರ್ದೇಶಕರು ಕಥೆ ಹೇಳುವ ಪ್ರಯತ್ನ ಸಹ ಮಾಡಿದ್ದಾರೆ, ಬನ್ನಿ ಒಪ್ಪಿದರೆ ಸಿನಿಮಾ ಶುರುವಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ಮಿನ್ನಲ್ ಮುರಳಿ' ಸೀಕ್ವೆಲ್ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ ಆ ಬಗ್ಗೆ ಯಾವುದೇ ಸುಳಿವು ಇಲ್ಲ.
ಅಂದಹಾಗೆ ಬಾಸಿಲ್ 'ಶಕ್ತಿಮಾನ್' ಕಥೆ ತೆರೆಗೆ ತರಲು ಬಯಸಿದ್ದಾರೆ ಎನ್ನಲಾಗ್ತಿದೆ. ದೇಸಿ ಸೂಪರ್ ಹೀರೊ ಶಕ್ತಿಮಾನ್ ಕಥೆ ಈಗಾಗಲೇ ಧಾರಾವಾಹಿ ರೂಪದಲ್ಲಿ ವೀಕ್ಷಕರ ಮುಂದೆ ಬಂದಿದೆ. ಅದೇ ಕಥೆಯನ್ನು ಬಾಸಿಲ್ ಸಿನಿಮಾ ಮಾಡಲು ಬಯಸಿದ್ದಾರೆ. ಅಲ್ಲು ಅರ್ಜುನ್ ಹೀರೊ ಆಗಬಹುದು ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ. ಸೋನಿ ಪಿಕ್ಚರ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತದೆ ಎನ್ನುವ ಮಾತುಗಳು ಸುಳಿದಾಡುತ್ತಿದೆ.
ಎರಡು ಇಂಟರ್ನ್ಯಾಷನಲ್ ಸ್ಟುಡಿಯೋಗಳು ಕೂಡ ಗೀತಾ ಆರ್ಟ್ಸ್ ಸಂಸ್ಥೆ ಜೊತೆ ಕೈ ಜೋಡಿಸಲಿದೆ. ಬೇರೆ ಬೇರೆ ಇಂಡಸ್ಟ್ರಿಗಳ 4 ಸಂಸ್ಥೆಗಳು ಈ ಚಿತ್ರಕ್ಕೆ ಬಂಡವಾಳ ಹೂಡುತ್ತವೆ ಎಂದು Bollywood bubble.com ವೆಬ್ ಸೈಟ್ ವರದಿ ಮಾಡಿದೆ. ಶಕ್ತಿಮಾನ್ ಕಥೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಚರ್ಚೆ ನಡೀತಿದೆ.
ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ 1500 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಬನ್ನಿ ಕ್ರೇಜ್ ನೋಡಿ 500 ಕೋಟಿ ರೂ.ಗೂ ಅಧಿಕ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುವ ಚರ್ಚೆ ನಡೀತಿದೆ. ಅದಕ್ಕೂ ಮುನ್ನ ಅಟ್ಲಿ ಸಿನಿಮಾವನ್ನು ಸ್ಟೈಲಿಶ್ ಸ್ಟಾರ್ ಮಾಡಿ ಮುಗಿಸಬೇಕಿದೆ. ಇದರ ಜೊತೆಗೆ ಬೇರೆ ಬೇರೆ ಕತೆಗಳನ್ನು ಅಲ್ಲು ಅರ್ಜುನ್ ಕೇಳುತ್ತಿದ್ದಾರೆ.
ತೆಲುಗು ನಟ ಅಲ್ಲು ಅರ್ಜುನ್ಗೆ ಕೇರಳದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಅವರು ತೆಲುಗು ಸಿನಿಮಾಗಳೇ ಮಲಯಾಳಂ ಭಾಷೆಗೆ ಡಬ್ ಆಗಿ ಸದ್ದು ಮಾಡುತ್ತವೆ. ಇದೀಗ ಬಾಸಿಲ್ ಜೊತೆ ಬನ್ನಿ ಸಿನಿಮಾ ಮಾಡ್ತಾರೆ ಎನ್ನುವುದು ಮಾಲಿವುಡ್ ಅಂಗಳದಲ್ಲಿ ಕೂಡ ಕುತೂಹಲ ಮೂಡಿಸಿದೆ.


Click it and Unblock the Notifications











