ಬಾಲಿವುಡ್ನ ಸ್ಟಾರ್ ನಿರ್ದೇಶಕನ ಭೇಟಿಯಾದ ಅಲ್ಲು ಅರ್ಜುನ್: ಒಟ್ಟಿಗೆ ಸಿನಿಮಾ?
'ಪುಷ್ಪ' ಸಿನಿಮಾದ ಬಳಿಕ ಅಲ್ಲು ಅರ್ಜುನ್, ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿದ್ದಾರೆ. ಒಂದೇ ಸಿನಿಮಾದಿಂದ ತೆಲುಗೇತರ ಪ್ರದೇಶಗಳಲ್ಲಿ, ವಿಶೇಷವಾಗಿ ಬಾಲಿವುಡ್ನಲ್ಲಿ ಸ್ಟಾರ್ ಆಗಿಬಿಟ್ಟಿದ್ದಾರೆ ಅಲ್ಲು ಅರ್ಜುನ್.
ಹಿಂದಿಗೆ ಡಬ್ ಆದ 'ಪುಷ್ಪ' ಸಿನಿಮಾ, ಮೂಲ ಹಿಂದಿ ಸಿನಿಮಾಗಳು ಗಳಿಸುವುದಕ್ಕಿಂತಲೂ ಹೆಚ್ಚು ಹಣ ಗಳಿಸಿ ದಾಖಲೆ ಬರೆದಿದೆ. ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳು ಮಾಡುವ ಕಲೆಕ್ಷನ್ ಅನ್ನು 'ಪುಷ್ಪ' ಸಿನಿಮಾ ಹಿಂದಿ ಬೆಲ್ಟ್ನಲ್ಲಿ ಮಾಡಿ ತೋರಿಸಿದೆ. ಆ ಮೂಲಕ ಒಳ್ಳೆಯ ಕಂಟೆಂಟ್ಗೆ ಯಾವುದೇ ಭಾಗದಲ್ಲೂ ಬೇಡಿಕೆ ಇದ್ದೇ ಇದೆ ಎಂಬುದನ್ನು ಖಾತ್ರಿ ಪಡಿಸಿದೆ.
'ಪುಷ್ಪ' ಸಿನಿಮಾ ಮೂಲಕ ಹಿಂದಿ ಸಿನಿಮಾ ಪ್ರೇಕ್ಷಕರಿಗೆ ಆಪ್ತರಾಗಿರುವ ಅಲ್ಲು ಅರ್ಜುನ್ಗೆ ಈಗ ಹಿಂದಿಯಿಂದಲೂ ಅವಕಾಶಗಳು ಬರಲಾರಂಭವಾಗಿವೆ. ಕೆಲವು ದೊಡ್ಡ ನಿರ್ಮಾಣ ಸಂಸ್ಥೆಗಳು ಅಲ್ಲು ಅರ್ಜುನ್ರನ್ನು ಬಾಲಿವುಡ್ಗೆ ಎಳದು ತರಲು ಯತ್ನಿಸಿವೆ. ಅಲ್ಲು ಅರ್ಜುನ್ ಬಾಲಿವುಡ್ ಪ್ರವೇಶಿಸುತ್ತಾರೆಯೇ? ಎಂಬ ಸುದ್ದಿಗೆ ಪುಷ್ಠಿ ನೀಡುವಂತೆ ಬಾಲಿವುಡ್ನ ಸ್ಟಾರ್ ನಿರ್ದೇಶಕರೊಬ್ಬರನ್ನು ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ!

ನಟ ಅಲ್ಲು ಅರ್ಜುನ್ ಮುಂಬೈಗೆ ಹೋಗಿದ್ದು ಅಲ್ಲಿ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಕಚೇರಿಗೆ ಭೇಟಿ ನೀಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಗೆ ನೋಡಿದರೆ ಅಲ್ಲು ಅರ್ಜುನ್ ಹಾಗೂ ಸಂಜಯ್, ಸಿನಿಮಾ ಹೊರತಾಗಿ ಪರಸ್ಪರ ಭೇಟಿ ಮಾಡುವ ಅವಕಾಶ ಬಹುತೇಕ ಇಲ್ಲ. ಹಾಗಾಗಿ ಸಿನಿಮಾಕ್ಕಾಗಿಯೇ ಈ ಇಬ್ಬರು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ಸಂಜಯ್ ಹಾಗೂ ಅಲ್ಲು ಅರ್ಜುನ್ ಒಟ್ಟಿಗೆ ಸಿನಿಮಾ ಮಾಡಿದರೆ ಇಬ್ಬರ ಅಭಿಮಾನಿಗಳು ಅದು ಹಬ್ಬವೇ ಸರಿ.
ಅಲ್ಲು ಅರ್ಜುನ್ ಪ್ರಸ್ತುತ 'ಪುಷ್ಪ' ಭಾಗ ಎರಡರ ಮೇಲೆ ಗಮನವಹಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ತಮ್ಮ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಅದರ ಬಳಿಕ 'ಬೈಜು ಬವರಾ' ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ಅವರು ನಾಲ್ಕನೇ ಬಾರಿ ರಣವೀರ್ ಸಿಂಗ್ ಜೊತೆ ಕೆಲಸ ಮಾಡಲಿದ್ದಾರೆ. ಆ ಬಳಿಕವಷ್ಟೆ ಅಲ್ಲು ಅರ್ಜುನ್ ಜೊತೆ ಸಿನಿಮಾ ನಿರ್ದೇಶಿಸಲು ಸಂಜಯ್ಗೆ ಸಾಧ್ಯ.
ಕೆಲವು ದಿನಗಳ ಹಿಂದೆ ತೆಲುಗಿನ ಜನಪ್ರಿಯ ನಿರ್ದೇಶಕ ರಾಜಮೌಳಿ ಸಹ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಅವರು ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ ಅನ್ನು ಭೇಟಿ ಆಗಿದ್ದರು. 'RRR' ಸಿನಿಮಾದ ಬಿಡುಗಡೆ ಬಳಿಕ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿರುವ ರಾಜಮೌಳಿ ಆ ಬಳಿಕ ಸಲ್ಮಾನ್ ಖಾನ್ಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











