ನಿರ್ಮಾಪಕರ ಸಂಘ ಚಾಪೆ ಕೆಳಗೆ ನುಗ್ಗಿದ್ರೆ, ಅನಿರುದ್ಧ್ ರಂಗೋಲಿ ಕೆಳಗೆ ನುಗ್ಗಿದ್ರಾ ?
ನಟ ಅನಿರುದ್ಧ್ 'ಸೂರ್ಯವಂಶ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ಕಾಲ ಅನಿರುದ್ಧ್ಗೆ ಕಿರುತೆರೆಯ ಯಾವುದೇ ಕಾರ್ಯಕ್ರಮದಲ್ಲಿ ಅವಕಾಶ ಕೊಡದಿರಲು ನಿರ್ಧರಿಸಿತ್ತು. ಆದರೆ ಅನಿರುದ್ಧ್ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಕೆಲವರಿಗೆ ಅಚ್ಚರಿ ತಂದಿದೆ.
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ್ ಕಿರಿಕ್ ಮಾಡಿದ್ದರು ಎಂದು ನಿರ್ಮಾಪಕರ ಆರೂರು ಜಗದೀಶ್ ಆರೋಪಿಸಿದ್ದರು. ಆದರೆ ಇದನ್ನು ಅನಿರುದ್ಧ್ ಒಪ್ಪಿರಲಿಲ್ಲ. ನಾನು ಸುಖಾಸುಮ್ಮನೆ ಕಿರಿಕ್ ಮಾಡಲಿಲ್ಲ ಎಂದಿದ್ದರು. ಜೊತೆಗೆ ನಾನು ಮತ್ತೆ ಧಾರಾವಾಹಿಯಲ್ಲಿ ನಟಿಸಲು ಸಿದ್ಧ ಎಂದು ಹೇಳಿದ್ದರು. ಅದಕ್ಕೆ ಇದಕ್ಕೆ ಧಾರಾವಾಹಿ ತಂಡ ಒಪ್ಪಿರಲಿಲ್ಲ. ಅನಿರುದ್ಧ್ ಬದಲು ಹರೀಶ್ ರಾಜ್ ಅವರನ್ನು ಕರೆತಂದು ಕಥೆ ಮುಂದುವರೆಸಿದ್ದಾರೆ. ಟಿಆರ್ಪಿ ಕೊಂಚ ಕಮ್ಮಿ ಆದರೂ ಅನಿರುದ್ಧ್ ಇಲ್ಲದೆಯೂ ಧಾರಾವಾಹಿ ಮುಂದುವರೆಯುತ್ತದೆ ಎಂದು ಸಾಬೀತು ಮಾಡಿ ತಂಡ ಗೆದ್ದಿದೆ.
ಕನ್ನಡ ಕಿರುತೆರೆಯ ನಿರ್ಮಾಪಕರು ಯಾರು ಕೂಡ ಅನಿರುದ್ಧ್ ಅವರಿಗೆ ಅವಕಾಶ ನೀಡಬಾರದು ಎಂದು ಈ ಹಿಂದೆ ತೀರ್ಮಾನ ಕೈಗೊಂಡಿದ್ದರು. ಆದರೂ ಕೂಡ ಅನಿರುದ್ಧ್ 'ಸೂರ್ಯವಂಶ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಮತ್ತೆ ಕೆಲವರು ಈ ಧಾರಾವಾಹಿಗೆ ಅನಿರುದ್ಧ್ ಅವರೇ ನಿರ್ಮಾಪಕರು ಎಂದು ಹೇಳುತ್ತಿದ್ದಾರೆ.

ಅನಿರುದ್ಧ್ ನಿರ್ಮಾಣದಲ್ಲಿ ಧಾರಾವಾಹಿ?
'ಸೂರ್ಯವಂಶ' ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಿರುವ ಬಗ್ಗೆ ನಿರ್ಮಾಪಕರ ಸಂಘ ಸಂಜೆ ಒಂದು ಸಭೆ ನಡೆಸುತ್ತಿದೆ. ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ಗೆ ಸಂಘದ ಅಧ್ಯಕ್ಷ ಭಾಸ್ಕರ್ ಮಾಹಿತಿ ನೀಡಿದ್ದಾರೆ. ನಿರ್ಮಾಪಕರು ಯಾರು ಕೂಡ ಅನಿರುದ್ದ್ಗೆ ಅವಕಾಶ ನೀಡಬಾರದು ಎಂದು ನಿರ್ಧರಿಸಿದ್ದೆವು. ಅವರೇ ಧಾರಾವಾಹಿ ನಿರ್ಮಾಣ ಮಾಡಿ ನಟಿಸಿದರೆ ನಮಗೆ ಅಭ್ಯಂತರವಿಲ್ಲ ಎಂದಿದ್ದಾರೆ. ಹಾಗಾಗಿ ಅನಿರುದ್ಧ್ ಸ್ವತಃ 'ಸೂರ್ಯವಂಶ' ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ.

ಅನಿರುದ್ಧ್ ಅಭಿಮಾನಿಗಳ ಸಂತಸ
ಎಸ್. ನಾರಾಯಣ್ ನಿರ್ದೇಶನದ 'ಸೂರ್ಯವಂಶ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿ ಗೆದ್ದಿದ್ದರು. ಇದೀಗ ಅವರ ಅಳಿಯ ಅದೇ ಟೈಟಲ್ ಇರುವ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಅನಿರುದ್ಧ್ ಮಾಡಿರುವ ಪೋಸ್ಟ್ಗೆ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸೂಪರ್ ಹಿಟ್ ಸಿನಿಮಾ 'ಸೂರ್ಯವಂಶ'
1999ರಲ್ಲಿ ಬಿಡುಗಡೆಯಾಗಿದ್ದ 'ಸೂರ್ಯವಂಶ' ಸಿನಿಮಾ ಸಿಲ್ವರ್ ಜುಬಿಲಿ ಆಚರಿಸಿ ಸಕ್ಸಸ್ ಕಂಡಿತ್ತು. ತಮಿಳಿನಲ್ಲಿ ಇದೇ ಹೆಸರಿನಲ್ಲಿ ಬಂದಿದ್ದ ಚಿತ್ರವನ್ನು ಎಸ್. ನಾರಾಯಣ್ ಕನ್ನಡಕ್ಕೆ ತಂದಿದ್ದರು. ಜೂಲಿ ಲಕ್ಷ್ಮಿ, ಇಶಾ ಕೊಪ್ಪಿಕರ್, ವಿಜಯಲಕ್ಷ್ಮಿ, ದೊಡ್ಡಣ್ಣ ಚಿತ್ರದ ತಾರಾಗಣದಲ್ಲಿ ಮಿಂಚಿದ್ದರು. ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್ನಲ್ಲಿ ಅನಿತಾ ಕುಮಾರಸ್ವಾಮಿ ಸಿನಿಮಾ ನಿರ್ಮಾಣ ಮಾಡಿದ್ದರು.

ಶೀಘ್ರದಲ್ಲೇ ಧಾರಾವಾಹಿ ಪ್ರಸಾರ
'ಸೂರ್ಯವಂಶ' ಧಾರಾವಾಹಿ ಚಿತ್ರೀಕರಣ ಇದೀಗ ಶುರುವಾಗಿದೆ. ಒಂದಷ್ಟು ಎಪಿಸೋಡ್ಗಳನ್ನು ಬ್ಯಾಂಕಿಂಗ್ ಮಾಡಿಕೊಂಡ ನಂತರ ಉದಯ ವಾಹಿನಿಯಲ್ಲಿ ಪ್ರಸಾರ ಆರಂಭವಾಗುತ್ತದೆ. ಒಟ್ನಲ್ಲಿ 'ಜೊತೆ ಜೊತೆಯಲಿ' ಧಾರವಾಹಿಯಲ್ಲಿ ಅನಿರುದ್ಧ್ ಅವರನ್ನು ಮಿಸ್ ಮಾಡಿಕೊಂಡಿದ್ದವರು ಆದಷ್ಟು ಬೇಗ 'ಸೂರ್ಯವಂಶ' ಕಥೆಯಲ್ಲಿ ನೋಡಬಹುದು.


Click it and Unblock the Notifications











