ಯಶ್ ಮುಂದಿನ ಸಿನಿಮಾಕ್ಕೆ ತೆಲುಗು ಹಿಟ್ ನಿರ್ದೇಶಕ ಸಾರಥ್ಯ!
ನಟ ಯಶ್ 'ಕೆಜಿಎಫ್' ಸಿನಿಮಾ ಮೂಲಕ ಗಡಿಗಳನ್ನು ದಾಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಖ್ಯಾತಿ ಗಳಿಸಿರುವ ಕಾರಣದಿಂದಾಗಿಯೇ ಬಹು ಎಚ್ಚರಿಕೆಯಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
'ಕೆಜಿಎಫ್' ಅಂಥಹಾ ಭಾರತವೇ ತಿರುಗಿ ನೋಡುವಂಥಹಾ ಸಿನಿಮಾ ಮಾಡಿದ ಮೇಲೆ ಯಶ್ಗೆ ಸಿನಿಮಾಗಳ ಆಯ್ಕೆ ನಿಜಕ್ಕೂ ಕಷ್ಟವಾದಂತೆ ಕಾಣುತ್ತಿದೆ. ಬಹು ಅಳೆದು-ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಯಶ್. ಅದು ಅವರಿಗೆ ಅವಶ್ಯಕವೂ ಹೌದು.
ಇದೀಗಷ್ಟೆ ನಿರ್ದೇಶಕ ನರ್ತನ್ ಜೊತೆಗೆ ಹೊಸ ಸಿನಿಮಾ ಘೋಷಿಸಿರುವ ಯಶ್. ಅದರ ಮುಂದಿನ ಸಿನಿಮಾವನ್ನು ತೆಲುಗು ಹಿಟ್ ನಿರ್ದೇಶಕನ ಜೊತೆಗೆ ಮಾಡಲಿದ್ದಾರೆ ಎಂಬ ಸುದ್ದಿ ತುಸು ಜೋರಾಗಿಯೇ ಹರಿದಾಡುತ್ತಿದೆ.

ಮಾಸ್ ಸಿನಿಮಾಗಳಿಗೆ ಖ್ಯಾತರಾಗಿರುವ ಬೊಯಪಾಟಿ ಶ್ರೀನು
ತೆಲುಗಿನಲ್ಲಿ ಮಾಸ್ ಸಿನಿಮಾಗಳನ್ನು ಮಾಡುವುದರ ಮೂಲಕ ಸಾಕಷ್ಟು ಹಿಟ್ ನೀಡಿರುವ ಬೋಯಪಾಟಿ ಶ್ರೀನು ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 'ಭದ್ರ', 'ಸಿಂಹ', 'ದಮ್ಮು', 'ಸರೈನೋಡು', 'ವಿನಯ ವಿಧೇಯ ರಾಮ' ಅಂಥಹಾ ಪಕ್ಕಾ ಮಾಸ್ ಸಿನಿಮಾಗಳನ್ನು ನಿರ್ದೇಶಿಸಿರುವ ಶ್ರೀನು ಯಶ್ಗೆ ಸಹ ಮಾಸ್ ಕತೆಯೊಂದನ್ನು ರೆಡಿ ಮಾಡಿದ್ದಾರಂತೆ.

ಅಲ್ಲು ಅರ್ಜುನ್, ಸೂರ್ಯ ಹೆಸರು ಕೇಳಿ ಬಂದಿತ್ತು
ಬೋಯಪಾಟಿ ಶ್ರೀನು ನಿರ್ದೇಶಿಸಲಿರುವ ಮುಂದಿನ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆ ನಂತರ ತಮಿಳು ನಟ ಸೂರ್ಯಾ ಹೆಸರು ಸಹ ಮುನ್ನೆಲೆಗೆ ಬಂತು ಆದರೆ ಅಂತಿಮವಾಗಿ ಯಶ್ ಹೆಸರು ಅಂತಿಮವಾಗಿದೆ. ಅಂದಹಾಗೆ ಇದು ಸಹ ಪ್ಯಾನ್ ಇಂಡಿಯಾ ಸಿನಿಮಾವೇ ಆಗಿರಲಿದೆ.

ಬಾಲಕೃಷ್ಣ ಜೊತೆಗೆ ಬ್ಯುಸಿಯಾಗಿದ್ದಾರೆ ಶ್ರೀನು
ಬೋಯಪಾಟಿ ಶ್ರೀನು ಪ್ರಸ್ತುತ ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ವೈರಲ್ ಆಗಿದೆ. ಈ ಹಿಂದೆ ಬೊಯಪಾಟಿ ಶ್ರೀನು-ಬಾಲಕೃಷ್ಣ ಕಾಂಬಿನೇಷನ್ನಲ್ಲಿ ಬಂದಿದ್ದ 'ಸಿಂಹ', 'ಲೆಜೆಂಡ್' ಸಿನಿಮಾಗಳು ದೊಡ್ಡ ಹಿಟ್ ಆಗಿದ್ದವು.

'ಕೆಜಿಎಫ್ 2' ಬಿಡುಗಡೆ ಮುಂದೂಡಿಕೆ
ಇನ್ನು ನಟ ಯಶ್ ನಟನೆಯ 'ಕೆಜಿಎಫ್ 2' ಸಿನಿಮಾವು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಎಲ್ಲವೂ ಸರಿ ಇದ್ದಿದ್ದರೆ ಜುಲೈ 16ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದಕ್ಕೆ ಹೋಗಿದೆ. 'ಕೆಜಿಎಫ್ 2' ನಂತರ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದು, ಸಿನಿಮಾದಲ್ಲಿ ಯಶ್ರದ್ದು ನೇವಿ ಅಧಿಕಾರಿ ಪಾತ್ರ.


Click it and Unblock the Notifications











