ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಲೀಕ್?: ದುರಂತ ಅಂತ್ಯ ಕಾಣಲಿದ್ದಾನಾ ರಾಕಿ ಭಾಯ್?
ಭಾರತೀಯ ಚಿತ್ರರಂಗವೇ ಕಾತರದಿಂದ ಕಾದಿರುವ ಚಿತ್ರಗಳಲ್ಲಿ ಕನ್ನಡದ 'ಕೆಜಿಎಫ್ ಚಾಪ್ಟರ್ 2' ಕೂಡ ಒಂದು. ಮೊದಲ ಭಾಗದಲ್ಲಿನ ಗಟ್ಟಿಯಾದ ಕಥೆ, ರಾಕಿ ಭಾಯ್ ಆಗಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಖಡಕ್ ನಟನೆ, ಬೆರಗು ಹುಟ್ಟಿಸುವ ಸನ್ನಿವೇಶಗಳು ಮತ್ತು ಎರಡನೆಯ ಭಾಗ ಮತ್ತಷ್ಟು ತಿರುವುಗಳನ್ನು ಹೊಂದಿರಲಿದೆ ಎಂಬ ಸುಳಿವು ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.
ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ನೋಡಿದಾಗ ಪ್ರತಿಯೊಬ್ಬರ ಆಯ್ಕೆಯಲ್ಲಿಯೂ 'ಕೆಜಿಎಫ್ 2' ಸಾಮಾನ್ಯವಾಗಿ ಇದ್ದೇ ಇರುತ್ತದೆ. ಮೊದಲ ಭಾಗದಲ್ಲಿ ಕೆಜಿಎಫ್ ಎಂಬ ಊರನ್ನು ಕಟುಕರ ಹಿಡಿತದಿಂದ ಮುಕ್ತಗೊಳಿಸುವ ರಾಕಿ ಭಾಯ್ನ ಸಾಹಸವಿದ್ದರೆ, ಎರಡನೆಯ ಭಾಗ ಅದಕ್ಕೆ ರಾಜಕೀಯ ಸ್ಪರ್ಶ ನೀಡಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿತ್ತು. ಆದರೆ ಕೌತುಕ ಮೂಡಿಸಿರುವ ಅದರ ಕ್ಲೈಮ್ಯಾಕ್ಸ್ ಸೋರಿಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂದೆ ಓದಿ...

ಚಿತ್ರೀಕರಣ ಬಾಕಿ ಇದೆ
ಕೆಜಿಎಫ್ 2 ಚಿತ್ರದ ಕ್ಲೈಮ್ಯಾಕ್ಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಚಿತ್ರದ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಲಾಕ್ ಡೌನ್ ನಿಯಮ ತೆರವುಗೊಂಡ ಬಳಿಕ ಸುಮಾರು 30 ದಿನಗಳ ಚಿತ್ರೀಕರಣ ನಡೆಸುವ ಅಗತ್ಯವಿದೆ ಎಂದು ಹೇಳಲಾಗಿದೆ.

ಕ್ಲೈಮ್ಯಾಕ್ಸ್ ಸೋರಿಕೆಯಾಯಿತೇ?
ಚಿತ್ರದ ಕ್ಲೈಮ್ಯಾಕ್ಸ್ನ ಕಥೆ ಏನೆಂಬುದು ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಬಹುಭಾಷೆಗಳಲ್ಲಿ ಸಿನಿಮಾ ಸಿದ್ಧವಾಗುತ್ತಿರುವುದರಿಂದ ಯಾವುದೋ ಮೂಲದಿಂದ ಕಥೆ ಲೀಕ್ ಆಗಿದೆ. ಇದರಿಂದ ಕೆಜಿಎಫ್ ಚಾಪ್ಟರ್ 2 ಅಂತ್ಯ ಹೇಗಿರಲಿದೆ ಎಂಬುದು ಬಹಿರಂಗವಾಗಿದೆ ಎನ್ನಲಾಗಿದೆ.

ರಾಕಿ ಭಾಯ್ ದುರಂತ ಅಂತ್ಯ
ನೂರಾರು ಎದುರಾಳಿಗಳನ್ನು ಪುಡಿಗಟ್ಟುವ ರಾಕಿ ಭಾಯ್, ಹೋರಾಟ ಎರಡನೆಯ ಭಾಗದಲ್ಲಿಯೂ ಮುಂದುವರಿಯಲಿದೆ. ಆದರೆ ಕ್ಲೈಮ್ಯಾಕ್ಸ್ನಲ್ಲಿ ನಮ್ಮ ಹೀರೋ ದುರಂತ ಅಂತ್ಯ ಕಾಣಲಿದ್ದಾನೆ ಎಂದು ಹೇಳಲಾಗುತ್ತಿದೆ.

ಭಾವುಕ ಸನ್ನಿವೇಶ
ಚಿತ್ರದ ಕ್ಲೈಮ್ಯಾಕ್ಸ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಭಾವುಕತೆಯ ಸ್ಪರ್ಶ ನೀಡಲು ಬಯಸಿದ್ದಾರೆ. ಮೊದಲ ಭಾಗದಲ್ಲಿಯೂ ಆಕ್ಷನ್ ಹೇರಳವಾಗಿದ್ದರೂ, ಅಮ್ಮ ಮಗನ ಭಾವುಕ ಸನ್ನಿವೇಶಗಳಿದ್ದವು. ಕೆಜಿಎಫ್ ಸಾಮ್ರಾಜ್ಯ ಕಟ್ಟುವ, ಜನರನ್ನು ಜೀತದಿಂದ ಮುಕ್ತಗೊಳಿಸುವ ರಾಕಿ ಭಾಯ್ ಅಂತ್ಯದಲ್ಲಿ ಸಾಯುತ್ತಾನೆ ಎನ್ನಲಾಗಿದೆ.

ರಾಕಿ ಭಾಯ್ ವಿರುದ್ಧ ಸೇನೆ
ಅಧೀರನನ್ನು ಮಟ್ಟಹಾಕುವ ರಾಕಿ ಭಾಯ್ ಹಾವಳಿ ಜಾಸ್ತಿಯಾಗುತ್ತದೆ. ಹೀಗಾಗಿ ಪ್ರಧಾನಿ ಸೇನೆಯನ್ನು ಕಳಿಸಿ ರಾಕಿ ಭಾಯ್ ಹತ್ಯೆ ಮಾಡಿಸುತ್ತಾರೆ ಎಂದು ಕಥೆಯಲ್ಲಿ ಹೇಳಲಾಗಿದೆಯಂತೆ. ಇಲ್ಲಿ ಪ್ರಧಾನಿಯ ಪಾತ್ರದಲ್ಲಿ ರವೀನಾ ಟಂಡನ್ ನಟಿಸಿದ್ದಾರೆ.

ಶ್ರೀಮಂತನಾಗಿ ಸಾಯುವ ರಾಕಿ ಭಾಯ್
ಬಡತನದಲ್ಲಿ ಹುಟ್ಟಿದ ರಾಕಿ ಭಾಯ್, ಮುಂಬೈ ಸೇರಿ ಭೂಗತ ಲೋಕದಲ್ಲಿ ಬದುಕು ಕಟ್ಟಿಕೊಂಡಿರುತ್ತಾನೆ. ಆತನಿಗೆ ಚಿಕ್ಕಂದಿನಲ್ಲಿ ಅಮ್ಮ ಹೇಳಿದಂತೆಯೇ ಶ್ರೀಮಂತನಾಗಿ ಸಾಯುತ್ತಾನೆ. ಈ ಮೂಲಕ ಅಂತ್ಯದಲ್ಲಿ ಪ್ರೇಕ್ಷಕನ ಕಣ್ಣಲ್ಲಿ ನೀರು ಜಿನುಗಿಸುವ ಉದ್ದೇಶ ನಿರ್ದೇಶಕರದ್ದು ಎನ್ನಲಾಗಿದೆ. ಕಥೆ ಹೀಗೆ ಸೋರಿಕೆಯಾಗಿರುವುದು ಸತ್ಯವೇ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳೇ ಎಂಬುದನ್ನು ಕೆಜಿಎಫ್ ಚಿತ್ರತಂಡವೇ ಹೇಳಬೇಕು.


Click it and Unblock the Notifications











