'ಮಾರ್ಟಿನ್' ನಷ್ಟ ಭರಿಸಲು ಮುಂದಾದ್ರಾ ಧ್ರುವ ಸರ್ಜಾ? ನಿರ್ಮಾಪಕ ಉದಯ್ ಮೆಹ್ತಾಗೆ ಜೊತೆ ಹೊಸ ಸಿನಿಮಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಮೇಲೆ ಸ್ಯಾಂಡಲ್ವುಡ್ ಬೆಟ್ಟದಷ್ಟು ನಿರೀಕ್ಷೆ ಇಟ್ಟಿತ್ತು. ಆದರೆ, ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ. ಉದಯ್ ಕೆ ಮೆಹ್ತಾ ಈ ಸಿನಿಮಾವನ್ನು ಬಾರೀ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ದರು. ಪ್ಯಾನ್ ಇಂಡಿಯಾ ರಿಲೀಸ್ಗೆ ಮುಂದಾಗಿದ್ದರು.
ಧ್ರುವ ಸರ್ಜಾ ಹಾಗೂ ಎ.ಪಿ ಅರ್ಜುನ್ ಕಾಂಬಿನೇಷನ್ನ ಎರಡನೇ ಸಿನಿಮಾ ಆಗಿತ್ತು. ಆದರೆ, ಈ ಕಾಂಬಿನೇಷನ್ ವರ್ಕ್ ಆಗಲಿಲ್ಲ. ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯಲ್ಲೂ ಈ ಸಿನಿಮಾಗೆ ನೆಗೆಟಿವ್ ಒಪಿನಿಯನ್ ಬಂದಿದ್ದೇ ಹೆಚ್ಚು. ಹೀಗಾಗಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಬೇಕಿಲ್ಲ 'ಮಾರ್ಟಿನ್' ಬಾಕ್ಸಾಫೀಸ್ನಲ್ಲಿ ನೆಲಕ್ಕಚ್ಚಿತ್ತು. ಇದು ಕರ್ನಾಟಕದ ಬಾಕ್ಸಾಫೀಸ್ ಮೇಲೂ ಪರಿಣಾಮ ಬಿದ್ದಿತ್ತು.

'ಮಾರ್ಟಿನ್' ಸಿನಿಮಾದಿಂದ ನಿರ್ಮಾಪಕ ಉದಯ್ ಕೆ ಮೆಹ್ತಾಗೆ ಸಿಕ್ಕಾಪಟ್ಟೆ ನಷ್ಟ ಆಗಿದೆ ಅನ್ನೋ ಮಾತುಗಳು ಚಿತ್ರರಂಗದಲ್ಲಿ ಓಡಾಡುತ್ತಿದೆ. ಈ ಬೆನ್ನಲ್ಲೇ ನಿರ್ಮಾಪಕರ ನೆರವಿಗೆ ಧ್ರುವ ಸರ್ಜಾ ಬಂದಿದ್ದು, ಹೊಸ ಸಿನಿಮಾಗೆ ಕಾಲ್ಶೀಟ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಹಾಗಿದ್ದರೆ, ಧ್ರುವ ಸರ್ಜಾ ಹಾಗೂ ಉದಯ್ ಮೆಹ್ತಾ ಮತ್ತೊಂದು ಸಿನಿಮಾ ಮಾಡುತ್ತಾರಾ? ನಿರ್ದೇಶಕರು ಯಾರು? ತಿಳಿಯಲು ಮುಂದೆ ಓದಿ.
'ಕೆಜಿಎಫ್', 'ಕೆಜಿಎಫ್ 2', 'ಕಾಂತಾರ' ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಮಾಡುವಲ್ಲಿ ಕನ್ನಡ ಚಿತ್ರರಂಗ ಎಡವುತ್ತಿದೆಯೇ? ಇಂತಹದ್ದೊಂದು ಪ್ರಶ್ನೆ ಎದುರಾಗಿದ್ದಂತೂ ನಿಜ. ಆದರೆ, ಪ್ಯಾನ್ ಇಂಡಿಯಾ ರೇಸ್ನಲ್ಲಿ 'ಮಾರ್ಟಿನ್' ಮುಗ್ಗರಿಸಿರುವುದಂತೂ ನಿಜ. ಫ್ಯಾನ್ ಇಂಡಿಯಾಗೆ ಬೇಕಿದ್ದ ಎಲ್ಲಾ ವ್ಯವಸ್ಥೆಯನ್ನು ನಿರ್ಮಾಪಕ ಉದಯ್ ಮೆಹ್ತಾ ಮಾಡಿದ್ದರು. ಅದ್ಧೂರಿ ಫೈಟ್ ಸೀಕ್ವೆನ್ಸ್ ಅನ್ನು ಶೂಟ್ ಮಾಡಿದ್ದರು. ಸಿನಿಮಾ ರಿಚ್ ಆಗಿ ಮೂಡಿ ಬಂದಿತ್ತು. ಆದರೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಥೆ, ಚಿತ್ರಕಥೆ ಮಾಡುವಲ್ಲಿ ತಂಡ ಹಿಂದೆ ಬಿದ್ದಿತ್ತು.

ಸುಮಾರು 70 ರಿಂದ 80 ಕೋಟಿ ರೂಪಾಯಿ ವೆಚ್ಚದಲ್ಲಿ 'ಮಾರ್ಟಿನ್' ಸಿನಿಮಾ ನಿರ್ಮಾಣ ಮಾಡಿರುವ ಬಗ್ಗೆ ಮಾತುಗಳು ಓಡಾಡಿದ್ದವು. ಆದರೆ, ಬಾಕ್ಸಾಫೀಸ್ ಹಾಗೂ ಬೇರೆ ಬೇರೆ ಹಕ್ಕುಗಳಿಂದ ಈ ಸಿನಿಮಾ ಹಣವನ್ನು ಗಳಿಸಿದ್ದರೂ, ನಿರ್ಮಾಪಕರಿಗೆ ಕಮ್ಮಿ ಅಂದರೂ 30 ರಿಂದ 40 ಕೋಟಿ ರೂಪಾಯಿ ನಷ್ಟ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ತಮಗಾದ ನಷ್ಟದ ಬಗ್ಗೆ ಉದಯ್ ಮೆಹ್ತಾ ಇದೂವರೆಗೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಚಿತ್ರರಂಗದಿಂದ ಖುಷಿ ವಿಷಯವೊಂದು ಹೊರ ಬಿದ್ದಿದೆ.
ನಿರ್ಮಾಪಕರಿಗೆ ಆದ ಈ ನಷ್ಟವನ್ನು ಭರಿಸುವುದಕ್ಕೆ ಧ್ರುವ ಸರ್ಜಾ ನಿರ್ಮಾಪಕರಿಗೆ ಕಾಲ್ ಶೀಟ್ ಕೊಟ್ಟದ್ದಾರಂತೆ. ಧ್ರುವ ಸರ್ಜಾಗಾಗಿ ಉದಯ್ ಮೆಹ್ತಾ ಹೊಸ ಸಿನಿಮಾವನ್ನು ಮಾಡುವುದಕ್ಕೆ ಮುಂದಾಗಿದ್ದು, ಜನವರಿಯ ನಂತರ ಅನೌನ್ಸ್ ಮಾಡುವ ಸಾಧ್ಯತೆಯಿದೆ ಅನ್ನೋ ಮಾತು ಚಿತ್ರರಂಗದಲ್ಲಿ ಓಡಾಡುತ್ತಿದೆ. ಹಾಗೇ ಧ್ರುವ ಸರ್ಜಾ ನಿರ್ಮಾಪಕ ಬೆಂಬಲಕ್ಕೆ ನಿಂತಿದ್ದಕ್ಕೂ ಸಿನಿಮಾ ಮಂದಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಬಹುದು ಎಂದು ಅಂದಾಜು ಮಾಡಲಾಗುತ್ತಿದೆ. 'ದುಬಾರಿ' ಅನ್ನುವ ಸಿನಿಮಾ 'ಮಾರ್ಟಿನ್'ಗೂ ಮುನ್ನ ಸೆಟ್ಟೇರಬೇಕಿತ್ತು. ಆ ಸಿನಿಮಾವನ್ನು ನಂದಕಿಶೋರ್ ನಿರ್ದೇಶನ ಮಾಡಬೇಕಿತ್ತು. ಅದೇ ಸಿನಿಮಾ ಜನವರಿಯ ನಂತರ ಟೇಕ್ ಆಫ್ ಆಗುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ. 'ಕೆಡಿ' ಸಿನಿಮಾದ ಶೂಟಿಂಗ್ ಇನ್ನೂ 15 ಬಾಕಿ ಇದ್ದು, ಅದು ಮುಗಿದ ಬಳಿಕ ಹೊಸ ಸಿನಿಮಾ ಅನೌನ್ಸ್ ಆಗುತ್ತೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಧ್ರುವ ಸರ್ಜಾ ಹಾಗೂ ಉದಯ್ ಮೆಹ್ತಾ ಇಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಸಿನಿಮಾ ಮಂದಿಯ ಈ ಹೊಸ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.


Click it and Unblock the Notifications











