ಲೂಸಿಫರ್, ವೇದಲಂ ನಂತರ ಮತ್ತೊಂದು ರಿಮೇಕ್ಗೆ ಕೈ ಹಾಕಿದ ಚಿರಂಜೀವಿ?
ರಾಜಕೀಯದಿಂದ ದೂರ ಉಳಿದ ಮೆಗಾಸ್ಟಾರ್ ಚಿರಂಜೀವಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸುಮಾರು ಹತ್ತು ವರ್ಷದ ನಂತರ ನಟನೆಗೆ ಹಿಂತಿರುಗಿದ ಚಿರಂಜೀವಿ ತಮಿಳಿನ 'ಕತ್ತಿ' ಚಿತ್ರವನ್ನು ರಿಮೇಕ್ ಮಾಡಿದರು. ರಿಮೇಕ್ ಆದರೂ ತೆಲುಗಿಗೆ ಬೇಕಾದಂತೆ ಸ್ಕ್ರಿಪ್ಟ್ ಬದಲಿಸಿ ಗೆದ್ದರು. ಕಂಬ್ಯಾಕ್ ಆದ್ಮೇಲೆ ಸತತವಾಗಿ ಸಿನಿಮಾಗಳನ್ನು ಮಾಡುತ್ತಿರುವ ಮೆಗಾಸ್ಟಾರ್ ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ರಿಮೇಕ್ ಚಿತ್ರಗಳಿಗೆ ಸಹಿ ಹಾಕ್ತಿದ್ದಾರೆ. ಇದು ಸಹಜವಾಗಿ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
ಚಿರಂಜೀವಿ ಚಿತ್ರರಂಗಕ್ಕೆ ಕಂಬ್ಯಾಕ್ ಆದ ಥ್ರಿಲ್ ಆದ ಅಭಿಮಾನಿಗಳು, ಬರಿ ರಿಮೇಕ್ ಸಿನಿಮಾಗಳಿಗೆ ಏಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಗೊಂದಲಕ್ಕೆ ಸಿಲುಕಿದ್ದಾರೆ. ಕೇವಲ ಚಿರಂಜೀವಿ ಮಾತ್ರವಲ್ಲ ತೆಲುಗಿನ ಇನ್ನು ಹಲವು ಕಲಾವಿದರು ತಮಿಳು-ಮಲಯಾಳಂ ಭಾಷೆಯಲ್ಲಿ ಹಿಟ್ ಆದ ಚಿತ್ರಗಳನ್ನು ತೆಲುಗಿಗೆ ಕಾಪಿ ಮಾಡ್ತಿದ್ದಾರೆ.
ಅದಾಗಲೇ ಚಿರಂಜೀವಿ ಮಲಯಾಳಂ ಹಿಟ್ ಸಿನಿಮಾ ಲೂಸಿಫರ್ ರಿಮೇಕ್ ಘೋಷಣೆ ಮಾಡಿದ್ದು, ಚಿತ್ರದ ಟೈಟಲ್ ಸಹ ಬಿಡುಗಡೆ ಆಗಿದೆ. ಇದರ ಜೊತೆಗೆ ತಮಿಳಿನ ವೇದಲಂ ಚಿತ್ರವನ್ನು ರಿಮೇಕ್ ಮಾಡ್ತಿದ್ದು, ಫಸ್ಟ್ ಲುಕ್ ಟೀಸರ್ ಗಮನ ಸೆಳೆದಿದೆ. ಇದೀಗ, ಮತ್ತೊಂದು ಚಿತ್ರದ ರಿಮೇಕ್ ವಿಚಾರವಾಗಿ ಚಿರಂಜೀವಿ ಹೆಸರು ಕೇಳಿಬರ್ತಿದೆ. ಯಾವುದು ಆ ಚಿತ್ರ? ಮುಂದೆ ಓದಿ...

ಮತ್ತೆ ಅಜಿತ್ ಚಿತ್ರ ಮೇಲೆ ಕಣ್ಣು
ಈಗಾಗಲೇ ತಮಿಳು ನಟ ಅಜಿತ್ ಕುಮಾರ್ ನಟಿಸಿ ಸೂಪರ್ ಹಿಟ್ ಆಗಿದ್ದ ವೇದಲಂ ಚಿತ್ರವನ್ನು ತೆಲುಗಿನಲ್ಲಿ ಭೋಲಾ ಶಂಕರ್ ಹೆಸರಿನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಅಜಿತ್ ಮತ್ತು ಲಕ್ಷ್ಮಿ ಮೆನನ್ ನಟಿಸಿದ್ದ ಈ ಚಿತ್ರದ ತೆಲುಗು ಅವತರಣಿಕೆಯಲ್ಲಿ ಚಿರಂಜೀವಿ ಮತ್ತು ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ. ಮೆಹರ್ ರಮೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದರ ಬೆನ್ನಲ್ಲೆ ಅಜಿತ್ ನಟಿಸಿರುವ ಇನ್ನೊಂದು ಚಿತ್ರವನ್ನು ರಿಮೇಕ್ ಮಾಡಲು ಚಿರು ಮುಂದಾಗಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ.

ಪೊಲೀಸ್ ಆಫೀಸರ್ ಆಗ್ತಾರಾ ಮೆಗಾಸ್ಟಾರ್?
2015ರಲ್ಲಿ ತೆರೆಕಂಡಿದ್ದ ಎನ್ನೈ ಅರಿಂದಾಲ್ ಚಿತ್ರದ ಮೇಲೆ ಮೆಗಾಸ್ಟಾರ್ ಕಣ್ಣಾಕಿದ್ದಾರೆ ಎಂದು ಸುದ್ದಿಗಳು ವರದಿಯಾಗಿದೆ. ಈ ಸುದ್ದಿ ಕಳೆದ ಒಂದೂವರೆ ವರ್ಷದಿಂದಲೂ ಚರ್ಚೆಯಲ್ಲಿದೆ. ಆದರೆ ಅಧಿಕೃತವಾಗಿ ಎಲ್ಲಿಯೂ ಅನೌನ್ಸ್ ಆಗಿಲ್ಲ. ಇದೊಂದು ಪೊಲೀಸ್ ಥ್ರಿಲ್ಲಿಂಗ್ ಕಥೆಯಾಗಿದ್ದು, ಅಜಿತ್ ನಾಯಕನಾಗಿ ನಟಿಸಿದ್ದರು. ಅನುಷ್ಕಾ ಶರ್ಮಾ ಮತ್ತು ತ್ರಿಷಾ ಕೃಷ್ಣನ್ ಇಬ್ಬರು ನಾಯಕಿಯರು. ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದ್ದರು. ಯುವತಿಯೊಬ್ಬಳನ್ನು ಕ್ರಿಮಿನಲ್ಗಳಿಂದ ಕಾಪಾಡುವ ಪೊಲೀಸ್ ಅಧಿಕಾರಿಯಾಗಿ ಅಜಿತ್ ಅಭಿನಯಿಸಿದ್ದಾರೆ.

ರಾಮ್ ಚರಣ್ ನಿರ್ಮಾಣ
ಸದ್ಯ ತೆಲುಗು ಮಾಯಾನಗರಿಯಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಮೆಗಾಸ್ಟಾರ್ ಪುತ್ರ ರಾಮ್ ಚರಣ್ ತೇಜ ಅವರೇ ಈ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಇನ್ನು ನಿರ್ದೇಶಕನನ್ನು ಆಯ್ಕೆ ಮಾಡಿಕೊಂಡಿಲ್ಲ. ಖೈದಿ 150, ಸೈರಾ ನರಸಿಂಹ ರೆಡ್ಡಿ ಹಾಗೂ ಆಚಾರ್ಯ ಚಿತ್ರಗಳನ್ನು ರಾಮ್ ಚರಣ್ ತೇಜ ನಿರ್ಮಾಣ ಮಾಡಿದ್ದಾರೆ. ಇದೀಗ, ಮತ್ತೊಮ್ಮೆ ತಂದೆಯ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.

ಲೂಸಿಫರ್ ರಿಮೇಕ್
ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಲೂಸಿಫರ್ ಚಿತ್ರವನ್ನು ತೆಲುಗಿನಲ್ಲಿ 'ಗಾಡ್ಫಾದರ್' ಎನ್ನುವ ಹೆಸರಿನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಮೋಹನ್ ರಾಜ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಜೊತೆ ಪ್ರಮುಖ ಕಲಾವಿದರು ನಟಿಸುವ ಸಾಧ್ಯತೆ ಹೆಚ್ಚಿದೆ.


Click it and Unblock the Notifications











