ಕಿರುತೆರೆಗೆ ಎಂಟ್ರಿ ಕೊಡ್ತಾರಾ ಕನಸಿನ ರಾಣಿ ಮಾಲಾಶ್ರೀ? 'ಪುಷ್ಪ ಇಂಪಾಸಿಬಲ್' ಅಂದ್ರೆ ಮುಂದೇನು?
ಜೀ ಕನ್ನಡ ಕಿರುತೆರೆ ಲೋಕದಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡು ಬಿಟ್ಟಿದೆ. ಆ ಸಾಮ್ರಾಜ್ಯವನ್ನು ಭೇದಿಸುವುದಕ್ಕೂ ಅವಕಾಶ ನೀಡುತ್ತಿಲ್ಲ. ಈಗಿರುವ ಧಾರಾವಾಹಿಗಳನ್ನೇ ಜನ ಬಿಟ್ಟುಕೊಡುತ್ತಿಲ್ಲ. ಮೂರು-ನಾಲ್ಕು ವರ್ಷಗಳಾದರೂ ಹಳೆಯ ಧಾರಾವಾಹಿಗಳನ್ನು ಆಸಕ್ತಿಯಿಂದ ನೋಡುತ್ತಿದ್ದಾರೆ. ಟಿಆರ್ಪಿಯಲ್ಲಿಯೂ ಟಾಪ್ನಲ್ಲಿಯೇ ಇದೆ. ಹಾಗಂತ ಜೀ ಕನ್ನಡ ಹಳೆ ಧಾರಾವಾಹಿಗಳನ್ನು ನಿಲ್ಲಿಸುತ್ತಿಲ್ಲ. ಬದಲಾಗಿ, ಮತ್ತೊಂದು ಧಾರಾವಾಹಿಯನ್ನು ತರಲು ಹೊರಟಿದೆ.
ಈಗಾಗಲೇ ಜೀ ಕನ್ನಡದಲ್ಲಿ ಕೌಟುಂಬಿಕ ಧಾರಾವಾಹಿಗಳೇ ಗಮನ ಸೆಳೆಯುತ್ತಿವೆ. ಜೀವನದ ಪಾಠವನ್ನು ಸಾರುವ ಧಾರಾವಾಹಿಗಳು ಎಲ್ಲರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಹೀಗಿರುವಾಗ ಹೊಸ ಧಾರಾವಾಹಿ ಈ ಎಲ್ಲಾ ಗಮನವನ್ನು ತನ್ನತ್ತ ಸೆಳೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗಾದರೆ ಆ ಧಾರಾವಾಹಿ ಯಾವುದು..? ಆ ಧಾರಾವಾಹಿ ಮೂಲಕ ಕಿರುತೆರೆಗೆ ಬರುತ್ತಿರುವುದು ಯಾರು? ಎಂಬ ಮಾಹಿತಿ ಇಲ್ಲಿದೆ.

ಹೊಸ ಧಾರಾವಾಹಿಗಳಿಗೆ ಮಾಸ್ಟರ್ ಪ್ಲ್ಯಾನ್
ಜೀ ಕನ್ನಡದಲ್ಲಿ ಬರುತ್ತಿರುವ ಧಾರಾವಾಹಿಗಳು ಬರೀ ಮಹಿಳೆಯರನ್ನಷ್ಟೇ ಸೆಳೆಯುತ್ತಿಲ್ಲ, ಧಾರಾವಾಹಿ ನೋಡುವುದೇ ಇಲ್ಲ ಎಂಬ ಗಂಡು ಹೈಕ್ಳನ್ನು ಸೆಳೆಯುತ್ತಿದೆ. ಗಂಡು ಮಕ್ಕಳು ಕೂಡ ಧಾರಾವಾಹಿಯನ್ನು ನೋಡುವಂತೆ ಮಾಡಿದೆ. 'ಪಾರು', 'ಗಟ್ಟಿಮೇಳ', 'ಸತ್ಯ' ಧಾರಾವಾಹಿಗಳು ವರ್ಷಾನುಗಟ್ಟಲೆಯಿಂದ ಪ್ರಸಾರವಾಗುತ್ತಿದೆ. ಅದಕ್ಕೆ ಸವಾಲು ಕೊಡಲು ಬಂದಂತ 'ಸೀತಾರಾಮ', 'ಶ್ರೀರಸ್ತು ಶುಭಮಸ್ತು' ಕೂಡ ಟಾಪ್ನಲ್ಲಿಯೇ ಇದೆ.
ಮತ್ತೊಂದು ಧಾರಾವಾಹಿ ತರುತ್ತಿದೆ ಜೀ ಕನ್ನಡ?
ಹೀಗೆ ಒಂದಕ್ಕಿಂತ ಒಂದು ಉತ್ತಮ ರೆಸ್ಪಾನ್ಸ್ ಪಡೆದಿರುವಂತ ಧಾರಾವಾಹಿಗಳನ್ನೇ ನೀಡುತ್ತಿರುವ ಜೀ ಕನ್ನಡ, ಈಗ ಮತ್ತೊಂದು ಧಾರಾವಾಹಿಯನ್ನು ತರುವ ಪ್ಲ್ಯಾನ್ ನಡೆಯುತ್ತಿದೆಯಂತೆ. 'ಪುಷ್ಪ ಇಂಪಾಸಿಬಲ್' ಎಂಬ ಹೆಸರಿನ ಧಾರಾವಾಹಿಯ ಪ್ಲ್ಯಾನ್ ನಡೆಯುತ್ತಿದೆಯಂತೆ. ಹೆಸರಲ್ಲೇ ಖಡಕ್ ಫೀಲ್ ಇದೆ. ಇನ್ನು ಧಾರಾವಾಹಿ ಅಷ್ಟೇ ಕಿಕ್ ಕೊಡುವುದರಲ್ಲಿ ಅನುಮಾನವಿಲ್ಲ.

ದಿಲೀಪ್ ರಾಜ್ ಪ್ರೊಡಕ್ಷನ್ ?
'ಹಿಟ್ಲರ್ ಕಲ್ಯಾಣ' ಧಾರಾವಾಹಿ ನೋಡಿದಾಗಿನಿಂದ ಅದೆಷ್ಟು ಹೆಣ್ಣು ಮಕ್ಕಳಿಗೆ ಎಜೆ ಮೇಲೆ ಮನಸ್ಸಾಗಿದೆಯೋ ಗೊತ್ತಿಲ್ಲ. ಸಿಕ್ಕಿದರೆ ಇಂತಹ ಒಬ್ಬ ಹುಡುಗ ಸಿಗಬೇಕು ಎಂದುಕೊಳ್ಳುತ್ತಿದ್ದಾರೆ. ಅಂತಹ ಯಶಸ್ವಿ ಧಾರಾವಾಹಿಯನ್ನು ನೀಡಿರುವುದು ದಿಲೀಪ್ ರಾಜ್. ಜೀ ಕನ್ನಡದ ಮೂಲಕ ಮತ್ತೊಮ್ಮೆ ಎಲ್ಲರ ಸ್ಪೂರ್ತಿಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅದೇ ಸಕ್ಸಸ್ ಹಾದಿಯಲ್ಲಿ ಮತ್ತೊಂದು ಧಾರಾವಾಹಿಯನ್ನು ನಿರ್ಮಾಣ ಮಾಡುವುದಕ್ಕೆ ಹೊರಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಿರುತೆರೆಗೆ ಕನಸಿನ ರಾಣಿ ಎಂಟ್ರಿ?
ಜೀ ಕನ್ನಡದಲ್ಲಿ ಘಟಾನುಘಟಿ ಹಿರಿಯ ಕಲಾವಿದರನ್ನು ಕರೆತಂದಿದ್ದಾರೆ. ಉಮಾಶ್ರೀ, ಸುಧಾರಾಣಿಯಂತಹ ತಾರೆಯರನ್ನು ಕರೆತಂದು ಯಾರ ಕಣ್ಣು ಆ ಕಡೆ ಈ ಕಡೆ ಹೋಗದಂತೆ, ಯಾರ ಕೈ ರಿಮೋಟ್ ನಂಬರ್ ಬದಲಾಯಿಸದಂತೆ ಮಾಡಿದ್ದಾರೆ. ಈಗ ಮತ್ತೊಂದು ದೊಡ್ಡ ಧಾರಾವಾಹಿ ಮಾಡುವುದಕ್ಕೆ ಯೋಜನೆ ರೂಪಿತವಾಗಿದೆ. ಹೆಸರೇ ಹೇಳುವಂತೆ 'ಪುಷ್ಪ ಇಂಪಾಸಿಬಲ್'ಗೆ ಕನಸಿನ ರಾಣಿ ಮಾಲಾಶ್ರೀ ಅವರನ್ನು ಕರೆತರುವ ಪ್ಲ್ಯಾನ್ ನಡೆಯುತ್ತಿದೆಯಂತೆ. ಈಗಾಗಲೇ ದಿಲೀಪ್ ರಾಜ್ ಅಂಡ್ ಟೀಂ ಕನಸಿನ ರಾಣಿಯ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ಆಗಿ ಬಿಟ್ಟರೆ, ಕನಸಿನ ರಾಣಿಯನ್ನು ಕಿರುತೆರೆಯಲ್ಲಿಯೇ ಕಣ್ಣು ತುಂಬಿಕೊಳ್ಳಬಹುದು. ಕಿರುತೆರೆ ಲೋಕದಲ್ಲಂತೂ ಈ ವಿಚಾರ ಸಿಕ್ಕಾಪಟ್ಟೆ ಚರ್ಚಿತ ವಿಷಯವಾಗಿದೆ. ಆದಷ್ಟು ಬೇಗ ಸತ್ಯವಾಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಜೀ ಕನ್ನಡವಾಗಲಿ, ದಿಲೀಪ್ ರಾಜ್ ಆಗಲಿ ಈ ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಇದು ಕಿರುತೆರೆ ಪ್ರಪಂಚದಲ್ಲಿ ಹರಿದಾಡುತ್ತಿರುವ ಸುದ್ದಿ.


Click it and Unblock the Notifications











