ಧ್ರುವ ಸರ್ಜಾ ಸಿನಿಮಾದಿಂದ ಹೊರಬಿದ್ದರೇ ರಚಿತಾ ರಾಮ್? ಗಾಂಧಿನಗರದಲ್ಲಿ ಹರಿದಾಡ್ತಿರೋದು ಏನು?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಕಳೆದ ಮೂರು ವರ್ಷಗಳಿಂದ ಈ ಸಿನಿಮಾದ ಮೇಕಿಂಗ್ ಆಗುತ್ತಿತ್ತು. ಆದರೂ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜೋಗಿ ಪ್ರೇಮ್, ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾ ರಿಲೀಸ್ ಬಗ್ಗೆ ಇನ್ನೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ತನ್ನ ಧ್ರುವ ಸರ್ಜಾ ಮತ್ತೊಂದು ಸಿನಿಮಾ 'ಕ್ರಿಮಿನಲ್'ಗೆ ಕೈ ಹಾಕಿದ್ದರು. ಇತ್ತೀಚೆಗೆ ಈ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು.
ಈ ಸಿನಿಮಾವನ್ನು ಬಾಲಿವುಡ್ನ ಗೋಲ್ಡ್ಮೈನ್ಸ್ ಟೆಲಿಫಿಲ್ಮ್ಸ್ನ ಮನೀಶ್ ಶಾ ನಿರ್ಮಾಪಕರಾಗಿ ಬಂದಿದ್ದಾರೆ. ಹೀಗಾಗಿ ಸ್ಯಾಂಡಲ್ವುಡ್ ಮಂದಿಯ ಕಣ್ಣು ಇವರ ಮೇಲಿದೆ. ಧ್ರುವ ಸರ್ಜಾ ಜೊತೆಗೆ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದು ಕುತೂಹಲವನ್ನು ದುಪ್ಪಟ್ಟು ಮಾಡಿತ್ತು. ಬರೋಬ್ಬರಿ ಎಂಟು ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರೋದಕ್ಕೆ ಧ್ರುವ ಫ್ಯಾನ್ಸ್ ಕೂಡ ಖುಷಿ ಪಟ್ಟಿದ್ದರು.

ಆದ್ರೀಗ ಗಾಂಧಿನಗರದಲ್ಲಿ ಹೊಸ ಸುದ್ದಿ ಓಡಾಡುತ್ತಿದೆ. ಧ್ರುವ ಸರ್ಜಾ ಸಿನಿಮಾಗೆ ಆರಂಭದಲ್ಲಿ ವಿಘ್ನ ಎದುರಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಆಕ್ಷನ್ ಪ್ರಿನ್ಸ್ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದಿದ್ದಾರೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಕಾರಣವೇನು ಅನ್ನೋದು ಕೂಡ ಅಲ್ಲಿನ ಗಲ್ಲಿ ಗಲ್ಲಿಯಲ್ಲಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ರಚಿತಾ ರಾಮ್ ಹೊರ ಬಿದ್ದಿದ್ದು ನಿಜವೇ? ಸಿನಿಮಾ ಮಂದಿ ಏನು ಕಾರಣ ಕೊಡ್ತಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
2017ರಲ್ಲಿ ಧ್ರುವ ಸರ್ಜಾ ಹಾಗೂ ರಚಿತಾ ರಾಮ್ ಇಬ್ಬರೂ ಒಟ್ಟಿಗೆ 'ಭರ್ಜರಿ' ಸಿನಿಮಾದಲ್ಲಿ ನಟಿಸಿದ್ದರು. ಚೇತನ್ ಕುಮಾರ್ ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಸೂಪರ್ಹಿಟ್ ಅಂತ ಸಾಬೀತಾಗಿತ್ತು. ಅಲ್ಲದೆ ಸಿನಿಮಾ ಪ್ರೇಮಿಗಳು ಕೂಡ 'ಭರ್ಜರಿ'ಯನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಈ ಸೂಪರ್ ಹಿಟ್ ಜೋಡಿ ಮತ್ತೆ ಸಿನಿಮಾದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲೇ ಇಲ್ಲ. ಕೊನೆಗೂ ಎರಡನೇ ಬಾರಿ ಜೋಡಿಯಾಗಿದ್ದಕ್ಕೆ ಇಬ್ಬರ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ನಿಜ.
ಆದ್ರೀಗ ಗಾಂಧಿನಗರದಲ್ಲಿ ಇದ್ದಕ್ಕಿದ್ದ ಹಾಗೇ ಧ್ರುವ ಸರ್ಜಾ ಸಿನಿಮಾದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊರ ನಡೆದಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಅಷ್ಟಕ್ಕೂ ಕಾರಣವೇನು ಅಂತ ಹುಡುಕುತ್ತಾ ಹೊರಟರೇ, ರಚಿತಾ ರಾಮ್ ಸಂಭಾವನೆ ವಿಷಯ ಅನ್ನೋ ಮಾತು ಕೇಳಿ ಬರುತ್ತಿದೆ. ಡಿಂಪಲ್ ಕ್ವೀನ್ಗೆ ಮೊದಲೇ ಮಾತಾಡಿದಂತೆ ಸಂಭಾವನೆಯನ್ನು ಮುಂಗಡವಾಗಿ ನಿರ್ಮಾಪಕರು ಕೊಟ್ಟಿಲ್ಲ. 15 ದಿನ ತಡವಾಗಿ ನೀಡುವುದಾಗಿ, ಶೂಟಿಂಗ್ನಲ್ಲಿ ಭಾಗವಹಿಸಿ ಎಂದು ಹೇಳಿದ್ದರಂತೆ. ಇದಕ್ಕೆ ರಚಿತಾ ರಾಮ್ ಒಪ್ಪಲಿಲ್ಲ. ಕ್ರಿಮಿನಲ್ ಸಿನಿಮಾದಿಂದ ಹೊರ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೊಂದು ಕಡೆ 'ಕ್ರಿಮಿನಲ್' ಸಿನಿಮಾದ ಮೇಲ್ವಿಚಾರಣೆಯನ್ನು ಧ್ರುವ ಸರ್ಜಾ ಅವರೇ ನೋಡಿ ಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೂಡ ಇದೆ. ಧ್ರುವ ಸರ್ಜಾ ತನ್ನದೇ ಜವಾಬ್ದಾರಿ ಎಂದು ಹೇಳಿದ್ದರೂ ರಚಿತಾ ರಾಮ್ ಒಪ್ಪಲಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಧ್ರುವ ಸರ್ಜಾ ಆಗಲಿ, ರಚಿತಾ ರಾಮ್ ಆಗಲಿ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಓಪನ್ ಆಗಿ ಎಲ್ಲೂ ಮಾತಾಡಿಲ್ಲ. ಆದರೆ, ಗಾಂಧಿನಗರದಲ್ಲಿ ಮಾತ್ರ ಸಿನಿಮಾ ಮಂದಿ 'ಕ್ರಿಮಿನಲ್' ಸಿನಿಮಾದಲ್ಲಿ ರಚಿತಾ ರಾಮ್ ನಟಿಸುತ್ತಿಲ್ಲ ಎಂದು ಖಡಾ ಖಂಡಿತವಾಗಿ ಹೇಳುತ್ತಿದ್ದಾರೆ.
ಇನ್ನೂ 'ಕೂಲಿ' ಸಿನಿಮಾ ಬಳಿಕ ರಚಿತಾ ರಾಮ್ಗೆ ಪರಭಾಷೆಯಿಂದಲೂ ಬೇಡಿಕೆ ಹೆಚ್ಚಾಗಿದೆ. ಹಾಗೇ ಕನ್ನಡದಲ್ಲಿ ದುನಿಯಾ ವಿಜಯ್ ನಟಿಸುತ್ತಿರುವ 'ಲ್ಯಾಂಡ್ ಲಾರ್ಡ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಚಿತಾ ರಾಮ್ಗೆ ಈ ಪಾತ್ರ ದೊಡ್ಡ ಯಶಸ್ಸು ತಂದು ಕೊಡುತ್ತೆ ಅಂತ ಇದೇ ಗಾಂಧಿನಗರ ಮಾತಾಡಿಕೊಳ್ಳುತ್ತಿದೆ. ಹಾಗೇ ನೀನಾಸಂ ಸತೀಶ್ ನಟನೆಯ 'ಅಯೋಗ್ಯ 2' ಸಿನಿಮಾ ಶೂಟಿಂಗ್ ಕೂಡ ನಡೆಯುತ್ತಿದ್ದು, ಈ ಎರಡು ಸಿನಿಮಾ ಬಿಡುಗಡೆಯಾಗಬೇಕಿದೆ.


Click it and Unblock the Notifications











