'ಕೆಡಿ' ಎಫೆಕ್ಟ್; ಕೆವಿಎನ್ ಸಂಸ್ಥೆಯಿಂದ ಹೊರಬಿದ್ದರೇ ಸುಪ್ರೀತ್ ಅಂಡ್ ಟೀಮ್?
ಕನ್ನಡದ ಶ್ರೀಮಂತ ನಿರ್ಮಾಣ ಸಂಸ್ಥೆಗಳಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಕೂಡ ಒಂದು. ಇತ್ತೀಚೆಗೆ ಈ ಸಂಸ್ಥೆ ನಿರ್ಮಿಸಿದ 'ಕೆಡಿ' ಸಿನಿಮಾ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗಿತ್ತು. ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ನಲ್ಲಿ ಬಂದ ಈ ಸಿನಿಮಾ ಬಾಕ್ಸಾಪೀಸ್ನಲ್ಲಿ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಂಡಿಲ್ಲ. ಕನ್ನಡದಲ್ಲಿ ಅತೀ ದೊಡ್ಡ ಬಜೆಟ್ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು.
ಸ್ಯಾಂಡಲ್ವುಡ್ ಮೂಲಗಳ ಪ್ರಕಾರ, 'ಕೆಡಿ ದಿ ಡೆವಿಲ್' ಸಿನಿಮಾವನ್ನು ಕೆವಿಎನ್ ಸಂಸ್ಥೆ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು. ಈ ಸಿನಿಮಾದ ಮೇಲ್ವಿಚಾರಣೆಯನ್ನು ಸುಪ್ರಿತ್ ಹಾಗೂ ಅವರ ತಂಡ ವಹಿಸಿಕೊಂಡಿತ್ತು. ಪ್ಯಾನ್ ಇಂಡಿಯಾ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು.

ಬಾಲಿವುಡ್ನಿಂದ ಸಂಜಯ್ ದತ್, ಶಿಲ್ಪಾ ಶೆಟ್ಟಿಯನ್ನು ಕರೆದುಕೊಂಡು ಬರಲಾಗಿತ್ತು. ದೊಡ್ಡ ಸ್ಟಾರ್ಕಾಸ್ಟ್ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ 'ಕೆಡಿ' ಸಿನಿಮಾವನ್ನು ಕೇವಲ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡಲಾಯ್ತು. ಬಳಿಕ ತೆಲುಗಿನಲ್ಲಿ ರಿಲೀಸ್ ಮಾಡಿದ್ದರು. ಆದರೆ, ಸಿನಿಮಾ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿಲ್ಲ. ಹೀಗಾಗಿ ಕೆವಿಎನ್ ಸಂಸ್ಥೆಯಿಂದ ಸುಪ್ರಿತ್ ಹಾಗೂ ತಂಡ ಹೊರ ಬಿದ್ದಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಕೆವಿಎನ್ ನಿರ್ಮಾಣ ಮಾಡುತ್ತಿರುವ ಕನ್ನಡ ಸಿನಿಮಾಗಳ ಮೇಲ್ವಿಚಾರಣೆಯನ್ನು ಇವರೇ ನೋಡಿಕೊಳ್ಳುತ್ತಿದ್ದರು. ಕನ್ನಡ ಸಿನಿಮಾಗಳ ನಿರ್ಮಾಣ ಅಷ್ಟೇ ಅಲ್ಲ, ವಿತರಣೆಯನ್ನು ಕೂಡ ಇವರೇ ನೋಡಿಕೊಳ್ಳುತ್ತಿದ್ದರು. ಸುಪ್ರಿತ್ ಹಾಗೂ ನಿರ್ಮಾಪಕ ಗಂಗಾಧರ್ ಇಬ್ಬರೂ ಸೇರಿ ಕೆವಿಎನ್ ಸಂಸ್ಥೆ ಮೂಲಕ ಸಿನಿಮಾವನ್ನು ವಿತರಣೆ ಮಾಡುತ್ತಿದ್ದರು.
ಸುಪ್ರಿತ್ ಅವರ ಮೇಲ್ವಿಚಾರಣೆಯಲ್ಲಿ ಕೆವಿಎನ್ ಸಂಸ್ಥೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಕನ್ನಡ ಸೇರಿದಂತೆ ಪರ ಭಾಷೆಯ ಸಿನಿಮಾಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದೆ. ಇದೆಲ್ಲವನ್ನು ಸುಪ್ರಿತ್ ಹಾಗೂ ಅವರ ತಂಡವೇ ನೋಡಿಕೊಳ್ಳುತ್ತಿತ್ತು. ಆದ್ರೀಗ 'ಕೆಡಿ' ಸಿನಿಮಾದ ಹೀನಾಯ ಸೋಲು ಕೆವಿಎನ್ ಸಂಸ್ಥೆಯಲ್ಲಿ ಬದಲಾವಣೆಗೆ ನಾಂದಿ ಹಾಡಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಆದ ಬೆಳವಣಿಯ ಬಗ್ಗೆ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.
'ಕೆಡಿ' ಸಿನಿಮಾ ಸೋಲಿನ ಬಳಿಕ ಸುಪ್ರಿತ್ ಹಾಗೂ ಅವರ ತಂಡ ಕೆವಿಎನ್ ಸಂಸ್ಥೆಯಿಂದ ಹೊರ ಬಿದ್ದಿದ್ದು, ಅವರ ಜಾಗಕ್ಕೆ ವಿಶ್ವಾಸ್ ಎಂಬುವವರು ಬಂದಿದ್ದಾರೆ. ಈ ಹಿಂದೆ ಇವರು ಹೊಂಬಾಳೆ ಫಿಲ್ಮ್ಸ್ನಲ್ಲಿ ಕೆಲಸ ಮಾಡಿದ್ದರು. ಈಗ ಅವರೇ ಕೆವಿಎನ್ ಸಂಸ್ಥೆಯ ಡೀಲ್ಗಳನ್ನು ಅಂತಿಮ ಮಾಡುತ್ತಿದ್ದಾರೆಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಬಗ್ಗೆ ಕೆವಿಎನ್ ಸಂಸ್ಥೆಯಿಂದ ಆಗಲಿ, ಸುಪ್ರಿತ್ ಕಡೆಯಿಂದ ಆಗಲಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇಷ್ಟೇ ಅಲ್ಲದೆ, ಕೆವಿಎನ್ ಸಂಸ್ಥೆ ಹೊಸ ಆಫೀಸ್ ಅನ್ನು ಹುಡುಕಿದ್ದು, ಕೆಲವು ದಿನಗಳಲ್ಲಿ ಅಲ್ಲಿಗೆ ಶಿಫ್ಟ್ ಆಗುತ್ತಿದೆ. ಆ ಆಫೀಸ್ ಮೂಲಕ ಕೆವಿಎನ್ ಹೊಸದಾಗಿ ಬ್ಯುಸಿನೆಸ್ ಅನ್ನು ಆರಂಭ ಮಾಡುತ್ತಿದೆ ಎನ್ನಲಾಗಿದೆ. ತಾನೇ ನಿರ್ಮಿಸಿದ 'ಬಾಲನ್' ಸಿನಿಮಾದ ಸಂಪೂರ್ಣ ವ್ಯವಹಾರ ಇದೇ ಕಚೇರಿಯಿಂದ ನಡೆಯಲಿದ್ದು, ವಿಶ್ವಾಸ್ ಅವರಿಗೆ ವಹಿಸಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. 'ಕೆಡಿ' ಸಿನಿಮಾದಿಂದ ಕಮ್ಮಿ ಅಂದರೂ 50 ರಿಂದ 60 ಕೋಟಿ ರೂಪಾಯಿ ನಷ್ಟ ಆಗಿದ್ದು, ಅದರ ಪರಿಣಾಮ ಸುಪ್ರಿತ್ ಹಾಗೂ ತಂಡ ಮೇಲೆ ಬಿದ್ದಿದ್ದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಏನೇ ಇದ್ದರೂ, ಗಾಂದಿನಗರದಲ್ಲಿ ಹಬ್ಬಿರೊ ಈ ಸುದ್ದಿಯ ಬಗ್ಗೆ ಕೆವಿಎನ್ ಹಾಗೂ ಸುಪ್ರಿತ್ ಅವರೇ ಅಧಿಕೃತವಾಗಿ ಕ್ಲಾರಿಟಿ ಕೊಡಬೇಕಿದೆ.


Click it and Unblock the Notifications
