'ಕಾಂತಾರ' ಪ್ರೀಕ್ವೆಲ್ನಲ್ಲಿ ಜ್ಯೂ. ಎನ್ಟಿಆರ್ ವರಾಹ ಅವತಾರ? ಅಭಿಮಾನಿಗಳು ಥ್ರಿಲ್
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಸದ್ಯ ಚಿತ್ರದ ಪ್ರೀಕ್ವೆಲ್ ಕೆಲಸಗಳಲ್ಲಿ ತಂಡ ಬ್ಯುಸಿಯಾಗಿದೆ. ಈಗಾಗಲೇ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಇನ್ನು ಕಥೆ ಚಿತ್ರಕಥೆಗೆ ರಿಷಬ್ ಶೆಟ್ಟಿ ಬಹಳ ಸಮಯ ವ್ಯಯಿಸಿದ್ದಾರೆ. ಚಿತ್ರದ ಚಿತ್ರದ ಬಗ್ಗೆ ಒಂದು ಕ್ರೇಜಿ ನ್ಯೂಸ್ ವೈರಲ್ ಆಗುತ್ತಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಅಂದಾಜು 15 ರಿಂದ 20 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಅಂದರೆ ಬಂಡವಾಳಕ್ಕಿಂತ ಹಲವು ಪಟ್ಟು ವಾಪಸ್ ಬಂದಿತ್ತು. ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ ಬಳಿಕ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಂಡು ಗೆದ್ದಿತ್ತು. ಇದೇ ಕಾರಣಕ್ಕೆ ಪ್ರೀಕ್ವೆಲ್ ಬಗ್ಗೆ ನಿರೀಕ್ಷೆ ಎವರೆಸ್ಟ್ ಎತ್ತರಕ್ಕಿದೆ.

ಈ ಬಾರಿ ಹೊಂಬಾಳೆ ಸಂಸ್ಥೆ ದೊಡ್ಡದಾಗಿ ಸಿನಿಮಾ ಪ್ಲ್ಯಾನ್ ಮಾಡುತ್ತಿರುವುದು ಗೊತ್ತಾಗುತ್ತಿದೆ. ಅದೇ ಕಾರಣಕ್ಕೆ ತಡವಾದರೂ ದೊಡ್ಡಮಟ್ಟದಲ್ಲೇ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಇನ್ನು ಪ್ರೀಕ್ವೆಲ್ ಅಂದ್ರೆ ಕಾಡುಬೆಟ್ಟು ಶಿವನ ಪೂರ್ವಜರ ಕಥೆ ಈ ಚಿತ್ರದಲ್ಲಿ ಇರಲಿದೆ. ಪಂಜುರ್ಲಿ ದೈವದ ಹಿನ್ನೆಲೆ ಬಗ್ಗೆ ಈ ಬಾರಿ ಹೆಚ್ಚಿನ ವಿಚಾರಗಳನ್ನು ತೆರೆಗೆ ತರುವ ಸಾಧ್ಯತೆಯಿದೆ. ತೆಲುಗು ನಟ ಜ್ಯೂ. ಎನ್ಟಿಆರ್ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ಇತ್ತೀಚೆಗೆ ಪ್ರಶಾಂತ್ ನೀಲ್ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಟ ಜ್ಯೂ. ಎನ್ಟಿಆರ್ ಪತ್ನಿ ಸಮೇತರಾಗಿ ಹಾಜರಾಗಿದ್ದರು. ಪ್ರಶಾಂತ್ ನೀಲ್ ಮುಂದಿನ ಚಿತ್ರದಲ್ಲಿ ತಾರಕ್ ನಟಿಸಲಿದ್ದಾರೆ. ಅದೇ ಒಡನಾಟದಿಂದ ಅವರಿಗೆ ಆಹ್ವಾನ ಕೊಡಲಾಗಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್, ರಿಷಬ್ ಶೆಟ್ಟಿ ದಂಪತಿ ಸೇರಿದಂತೆ ಹಲವರು ಭಾಗಿ ಆಗಿದ್ದರು. ಈ ವೇಳೆ ರಿಷಬ್ ಶೆಟ್ಟಿ- ತಾರಕ್ ಒಟ್ಟಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು.

ಪ್ರಶಾಂತ್ ನೀಲ್ ಮನೆಯಲ್ಲಿ 'ಕಾಂತಾರ' ಚಾಪ್ಟರ್-1ನಲ್ಲಿ ಜ್ಯೂ. ಎನ್ಟಿಆರ್ ನಟಿಸುವ ಬಗ್ಗೆ ರಿಷಬ್ ಶೆಟ್ಟಿ ಮಾತುಕತೆ ನಡೆಸಿದ್ದಾರೆ ಎನ್ನುವ ಚರ್ಚೆ ಟಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಹೇಳಿಕೇಳಿ ರಿಷಬ್ ಶೆಟ್ಟಿ ಕುಂದಾಪುರದವರು. ತಾರಕ್ ತಾಯಿ ಶಾಲಿನಿ ಭಾಸ್ಕರ್ ರಾವ್ ಕೂಡ ಕುಂದಾಪುರದ ಮೂಲದವರು. ಈ ಬಗ್ಗೆ ಜ್ಯೂ. ಎನ್ಟಿಆರ್ ಸಾಕಷ್ಟು ಸಂದರ್ಭಗಳಲ್ಲಿ ಹೇಳಿದ್ಧಾರೆ. ಇನ್ನು ತಾರಕ್ ಕನ್ನಡ ತಾಯಿಯಿಂದ ಕನ್ನಡ ಮಾತನಾಡಲು ಕಲಿತಿದ್ದಾರೆ.
'ಕಾಂತಾರ' ತೆರೆಕಂಡ ಬೆನ್ನಲ್ಲೇ ಜ್ಯೂ. ಎನ್ಟಿಆರ್ ಸಿನಿಮಾ ವೀಕ್ಷಿಸಿ ರಿಷಬ್ ಶೆಟ್ಟಿಗೆ ಕರೆ ಮಾಡಿ ಅಭಿನಂದಿಸಿದ್ದರು. ಈ ವಿಚಾರವನ್ನು ಖುದ್ದು ರಿಷಬ್ ಹೇಳಿಕೊಂಡಿದ್ದರು. ಆಗಲೇ ಇಬ್ಬರು ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಊಹಾಪೋಹ ಶುರುವಾಗಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ರಿಷಬ್ ಶೆಟ್ಟಿ ಸದ್ಯಕ್ಕೆ ಅಂತಹ ಯಾವುದೇ ಆಲೋಚನೆ ಇಲ್ಲ ಎಂದಿದ್ದರು.
"ನಾನು ಜ್ಯೂ. ಎನ್ಟಿಆರ್ ಅವರ ದೊಡ್ಡ ಅಭಿಮಾನಿ. 'ಕಾಂತಾರ' ಸಿನಿಮಾ ನೋಡಿ ಫೋನ್ ಮಾಡಿ ಅಭಿನಂದಿಸಿದರು. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸದ್ಯಕ್ಕೆ ಅವರೊಟ್ಟಿಗೆ ಸಿನಿಮಾ ಮಾಡುವ ಆಲೋಚನೆ ಇಲ್ಲ. ಮೊದಲು ಕಥೆ, ಕಾನ್ಸೆಪ್ಟ್ ಸೆಲೆಕ್ಟ್ ಮಾಡಿದ ನಂತರ ನಟ-ನಟಿಯರ ಆಯ್ಕೆಯ ಬಗ್ಗೆ ಯೋಚಿಸುತ್ತೇನೆ. "ಮೊದಲು ನಟನನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸ್ಕ್ರಿಪ್ಟ್ ಡೆವಲಪ್ ಮಾಡುವುದು ಗೊತ್ತಿಲ್ಲ. ಕಥೆ ಸಿದ್ಧವಾದ ಮೇಲೆಯೇ ಕಲಾವಿದರ ಆಯ್ಕೆಯ ಬಗ್ಗೆ ಯೋಚಿಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದರು.
ಈಗ 'ಕಾಂತಾರ' ಚಾಪ್ಟರ್-1 ಕಥೆ ಚಿತ್ರಕಥೆ ಎಲ್ಲಾ ಸಿದ್ಧವಾಗಿದೆ. ಹಾಗಾಗಿ ತಾರಕ್ ನಟಿಸುವ ಬಗ್ಗೆ ಚರ್ಚೆ ನಡೆಸಿದ್ದಾರಾ? ಅವರು ನಟಿಸೋಕೆ ಒಪ್ಪಿದ್ರಾ? ಎನ್ನುವ ಚರ್ಚೆ ಶುರುವಾಗಿದೆ. ಜ್ಯೂ. ಎನ್ಟಿಆರ್ ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸುತ್ತಾ ಬರುತ್ತಿದ್ದಾರೆ. ಇನ್ನು ತಾಯಿ ಕುಂದಾಪುರದವರು. ಇದು ಕರಾವಳಿ ಭಾಗದ ಕಥೆ. ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕಾಂತಾರ' ಗೆದ್ದಿದೆ. ಹಾಗಾಗಿ ಸಹಜವಾಗಿಯೇ ಪ್ರೀಕ್ವೆಲ್ ಬಗ್ಗೆ ನಿರೀಕ್ಷೆಯಿದೆ. ಇದೆಲ್ಲವನ್ನು ಗಮನಿಸಿದರೆ ಇಂತಾದೊಂದು ಆಫರ್ನ ಯಂಗ್ ಟೈಗರ್ ಒಪ್ಪಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.
ಜ್ಯೂ. ಎನ್ಟಿಆರ್ ವರ್ಸಟೈಲ್ ಆಕ್ಟರ್. ಅಷ್ಟೇ ಅಲ್ಲ ಬಹಳ ಇಂಟೆನ್ಸ್ ಆಕ್ಟರ್ ಕೂಡ ಹೌದು. ರಿಷಬ್ ಶೆಟ್ಟಿ ಜೊತೆಗೆ ತಾರಕ್ ಜೈ ಜೋಡಿಸಿದರೆ ಚಿತ್ರ ಮುಖ್ಯ ಪಾತ್ರದಲ್ಲಿ ನಟಿಸಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರೆಂಟಿ ಎಂದು ಸಿನಿರಸಿಕರು ಹೇಳುತ್ತಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.


Click it and Unblock the Notifications











