ಯಶ್19 ಕಥೆ ಬಿಟ್ಹಾಕಿ: ರಾವಣನ ವೇಷದಲ್ಲಿ ಕ್ಯಾಮರಾ ಮುಂದೆ ನಿಂತೇಬಿಟ್ರಾ ಯಶ್? ಇದಪ್ಪಾ ಕ್ರೇಜಿ ನ್ಯೂಸ್
ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಸದ್ಯಕ್ಕೆ ಯಾವುದೇ ಸುಳಿವು ಸಿಗುತ್ತಿಲ್ಲ. ಕೆವಿಎನ್ ಪ್ರೊಡಕ್ಷನ್ ಬಿಗ್ ಅನೌನ್ಸ್ಮೆಂಟ್ ಯಶ್19 ಬಗ್ಗೆ ಅಲ್ಲ ಅನ್ನೋದು ಪಕ್ಕಾ ಆಗಿದೆ. ಹಾಗಾದರೆ ಯಶ್ ಹೊಸ ಸಿನಿಮಾ ಅಪ್ಡೇಟ್ ಯಾವಾಗ ಅನ್ನೋದು ಮಾತ್ರ ಗೊತ್ತಿಲ್ಲ. ಇದೆಲ್ಲದರ ನಡುವೆ ರಾಮಾಯಣ ಚಿತ್ರದಲ್ಲಿ ಯಶ್ ನಟಿಸೋ ಬಗ್ಗೆ ಇಂಟ್ರೆಸ್ಟಿಂಗ್ ನ್ಯೂಸ್ ಸಿಕ್ತಿದೆ.
KGF ಸರಣಿ ಬಳಿಕ ಯಶ್ ಜೊತೆ ಸಿನಿಮಾ ಮಾಡೋಕೆ ಟಾಲಿವುಡ್, ಕಾಲಿವುಡ್, ಬಾಲಿವುಡ್ ಫಿಲ್ಮ್ ಮೇಕರ್ಸ್ ಕ್ಯೂ ನಿಂತಿದ್ದಾರೆ. ಆದರೆ ಯಶ್ ಮಾತ್ರ ಕನ್ನಡದಲ್ಲೇ ಸಿನಿಮಾ ಮಾಡುತ್ತೀನಿ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಯಶ್ ಬಾಲಿವುಡ್ನ ರಾಮಾಯಣ ಚಿತ್ರದಲ್ಲಿ ನಟಿಸೋ ಬಗ್ಗೆ ಕೆಲ ದಿನಗಳ ಹಿಂದೆ ಗುಸು ಗುಸು ಕೇಳಿಬಂದಿತ್ತು. ನಿತೇಶ್ ತಿವಾರಿ ನಿರ್ದೇಶನದಲ್ಲಿ ಈ ಪೌರಾಣಿಕ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ನಟಿಸ್ತಾರೆ ಎನ್ನಲಾಗ್ತಿದೆ.

ಇದೀಗ ಸದ್ದಿಲ್ಲದೇ ರಾವಣನ ವೇಷದಲ್ಲಿ ಯಶ್ ಲುಕ್ ಟೆಸ್ಟ್ ನಡೀತಿದೆ ಎನ್ನುವ ಸುದ್ದಿಯೊಂದು ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ನಿತೇಶ್ ತಿವಾರಿ ರಾಮಾಯಣ ಕಾವ್ಯವನ್ನು ಆಧರಿಸಿ ಭಾರೀ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಣ್ಬೀರ್ ಕಪೂರ್ ಶ್ರೀರಾಮನ ಪಾತ್ರ ಮಾಡುತ್ತಾರೆ ಎನ್ನಲಾಗ್ತಿದೆ. ರಾವಣನ ಪಾತ್ರಕ್ಕೆ ಯಶ್ ಸೂಕ್ತ ಎನ್ನುವ ಚರ್ಚೆ ಬಿಟೌನ್ನಲ್ಲಿ ನಡೀತಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಅನ್ನೋದು ಇನ್ನು ಪಕ್ಕಾ ಆಗಿಲ್ಲ. ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ರಾಮನಾಗಿ ರಣ್ಬೀರ್ ಕಪೂರ್ ನಟಿಸೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಸೀತೆಯಾಗಿ ಯಾರು ನಟಿಸ್ತಾರೆ ಅನ್ನೋದು ಫೈನಲ್ ಆಗಿಲ್ಲ. ಆ ಪಾತ್ರಕ್ಕೆ ಆಲಿಯಾ ಭಟ್ ಹೆಸರು ಚಾಲ್ತಿಯಲ್ಲಿದೆ. ಸದ್ಯ ರಾವಣನ ಪಾತ್ರಕ್ಕೆ ಬೇರೆ ಬೇರೆ ಲುಕ್ ಟೆಸ್ಟ್ ಮಾಡಲಾಗಿದೆಯಂತೆ. ಆದರೆ ಯಶ್ ಸಿನಿಮಾದಲ್ಲಿ ನಟಿಸೋದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಸೀತೆ ಹಾಗೂ ಹನುಮಂತ ಪಾತ್ರಗಳ ಲುಕ್ ಟೆಸ್ಟ್ ಮುಂದಿನ ದಿನಗಳಲ್ಲಿ ನಡೆಯಲಿದೆ. ಇನ್ನು ಮೂಲಗಳ ಪ್ರಕಾರ ಚಿತ್ರತಂಡ ಸಿನಿಮಾ ಆರಂಭಿಸಲು ಆತುರಪಡುತ್ತಿಲ್ಲವಂತೆ. ಎಲ್ಲವನ್ನು ಫೈನಲ್ ಮಾಡಿಕೊಂಡ ಬಳಿಕವೇ ಸಿನಿಮಾ ಶೂಟಿಂಗ್ ಎನ್ನಲಾಗ್ತಿದೆ.
ರಾಮಾಯಣ ಕಾವ್ಯವನ್ನೇ ಆಧರಿಸಿ ಇತ್ತೀಚೆಗೆ 'ಆದಿಪುರುಷ್' ಸಿನಿಮಾ ಮೂಡಿ ಬಂದಿತ್ತು. ಆದರೆ ವಿಚಿತ್ರ ಕಾರಣಗಳಿಂದ ಸಿನಿಮಾ ವಿವಾದಗಳನ್ನು ಸೃಷ್ಟಿಸಿತ್ತು. ಚಿತ್ರದಲ್ಲಿ ರಾಮಾಯಣದ ಪಾತ್ರಗಳನ್ನು ತಿರುಚಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೋರ್ಟ್ಗಳಲ್ಲಿ ದೂರುಗಳು ದಾಖಲಾಗಿದ್ದವು. ಅದೆಲ್ಲವನ್ನು ಮೀರಿ ಸಿನಿಮಾ ರಿಲೀಸ್ ಆಗಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ.
'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದರೆ ಕೃತಿ ಸನೂನ್ ಸೀತಾಮಾತೆಯಾಗಿ ಕಾಣಿಸಿಕೊಂಡಿದ್ದರು. ಇನ್ನು ರಾವಣನಾಗಿ ಸೈಫ್ ಅಲಿಖಾನ್ ಅಬ್ಬರಿಸಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ್ದ ಈ 3ಡಿ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಮೇಕಿಂಗ್ ವಿಚಾರದಲ್ಲಿ ಸಿನಿಮಾ ಅದ್ಭುತ ಎನಿಸಿದರೂ ಪಾತ್ರಗಳನ್ನು ತೋರಿಸಿ ಬಗೆ ತಪ್ಪಾಗಿತ್ತು.

ಈ ಹಿಂದೆಯೇ ನಿರ್ಮಾಪಕ ಮಧು ಮಂತೇನಾ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸುವಂತೆ ಯಶ್ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ನಾನು ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎನ್ನುವ ಅರ್ಥದಲ್ಲಿ ಯಶ್ ಮಾತನಾಡಿದ್ದರು. ಇದ್ದೆಲ್ಲದರ ನಡುವೆ ಯಶ್19 ಕಥೆ ಏನಾಯಿತು ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಆದಷ್ಟು ಬೇಗ ಅಭಿಮಾನಿಗಳು ಸ್ವೀಟ್ ನ್ಯೂಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications











