ಮುಂದಿನ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಮಹೇಶ್ ಬಾಬು?
ಇತ್ತೀಚಿನ ವರ್ಷಗಳಲ್ಲಿ ಐತಿಹಾಸಿಕ ಪೌರಾಣಿಕ ಸಿನಿಮಾಗಳ ಸಂಖ್ಯೆ ಕಮ್ಮಿ ಆಗಿದೆ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತದೆ. 'ಬಾಹುಬಲಿ' ಸರಣಿ ಬಳಿಕ ಕಾಸ್ಟ್ಯೂಮ್ ಡ್ರಾಮಾಗಳ ಕ್ರೇಜ್ ಹೆಚ್ಚಾಯಿತು. ಇತ್ತೀಚೆಗೆ ಬಂದ 'ಕಲ್ಕಿ 2898 AD' ಚಿತ್ರದಲ್ಲಿ ಪ್ರಭಾಸ್ ಕರ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಶ್ರೀಕೃಷ್ಣನ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಾರೆ ಎನ್ನುವ ಚರ್ಚೆ ತೆಲುಗು ಚಿತ್ರರಂಗದಲ್ಲಿ ಶುರುವಾಗಿದೆ. ರಾಜಮೌಳಿ ಬಹಳ ವರ್ಷಗಳಿಂದ ತಮ್ಮ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾಭಾರತ ಕಾವ್ಯವನ್ನು ತೆರೆಗೆ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆ ಚಿತ್ರದಲ್ಲಿ ಅರ್ಜುನ, ಭೀಮ, ಕೃಷ್ಣನಾಗಿ ಯಾರೆಲ್ಲಾ ನಟಿಸಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ. ಶ್ರೀಕೃಷ್ಣನ ಪಾತ್ರಕ್ಕೆ ಮಹೇಶ್ ಬಾಬು ಸೂಕ್ತ ಎಂದು ಹೇಳುತ್ತಿರುತ್ತಾರೆ.

ಸದ್ಯ ರಾಜಮೌಳಿ ನಿರ್ದೇಶನದ ಚಿತ್ರಕ್ಕಾಗಿ ಮಹೇಶ್ ಬಾಬು ತಯಾರಿ ನಡೆಸುತ್ತಿದ್ದಾರೆ. ಉದ್ದನೆಯ ಗಡ್ಡ, ಕೂದಲು ಬಿಟ್ಟು ತರಬೇತಿ ಪಡೆಯುತ್ತಿದ್ದಾರೆ. ಜನವರಿಯಲ್ಲಿ ಸಿನಿಮಾ ಸೆಟ್ಟೇರಲಿದೆ. 1000 ಕೋಟಿ ರೂ. ಬಜೆಟ್ನಲ್ಲಿ ಚಿತ್ರ ನಿರ್ಮಾಣ ಆಗುವ ನಿರೀಕ್ಷೆಯಿದೆ. ಆದರೆ ಅದಕ್ಕೂ ಮುನ್ನ ಒಂದು ಚಿತ್ರದಲ್ಲಿ ಕೃಷ್ಣನ ಅವತಾರದಲ್ಲಿ ಟಾಲಿವುಡ್ ಪ್ರಿನ್ಸ್ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
'ದೇವಕಿ ನಂದನ ವಾಸುದೇವ' ಎಂಬ ತೆಲುಗು ಚಿತ್ರದ ನವೆಂಬರ್ 14 ರಂದು ಬಿಡುಗಡೆಯಾಗುತ್ತಿದೆ. ಅಶೋಕ್ ಗಲ್ಲಾ ನಟಿಸಿರುವ ಚಿತ್ರಕ್ಕೆ 'ಹನುಮಾನ್' ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್ ವರ್ಮಾ ಕಥೆ ಬರೆದಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಗುಸುಗುಸು ಕೇಳಿಬರುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಶ್ರೀಕೃಷ್ಣನ ಬಗ್ಗೆ ಪ್ರಸ್ತಾಪವಿದೆ. ಹಾಗಾಗಿ ಮಹೇಶ್ ಬಾಬು ಅವರನ್ನು ಒಪ್ಪಿಸಿ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದಾರೆ ಎನ್ನಲಾಗ್ತಿದೆ.
ಮಹೇಶ್ ಬಾಬು 'ದೇವಕಿ ನಂದನ ವಾಸುದೇವ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದು ಕೇವರ ವದಂತಿ ಅಷ್ಟೇ ಎಂದು ಕೆಲವರು ಹೇಳುತ್ತಿದ್ದಾರೆ. ಚಿತ್ರದಲ್ಲಿ ಕೃಷ್ಣನಿಗೆ ಸಂಬಂಧಿಸಿದ ಸನ್ನಿವೇಶ ಇರುವುದು ನಿಜ. ಅದಕ್ಕಾಗಿ ಸಿಜಿಯಲ್ಲಿ ಕೃಷ್ಣನ ರೂಪವನ್ನು ಚಿತ್ರಿಸಲಾಗಿದೆ. ಮಹೇಶ್ ಬಾಬು ನಟಿಸಿಲ್ಲ ಎಂದು ಹೇಳಲಾಗುತ್ತಿದೆ.

'ಗುಂಟೂರು ಖಾರಂ' ಸಿನಿಮಾ ಬಳಿಕ ಮಹೇಶ್ ಬಾಬು SSMB 29 ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಅದಕ್ಕಾಗಿ ಗಡ್ಡ ಬಿಟ್ಟಿದ್ದಾರೆ. ಅವರು 'ದೇವಕಿ ನಂದನ ವಾಸುದೇವ' ಚಿತ್ರದಲ್ಲಿ ಕೃಷ್ಣನಾಗಿ ನಟಿಸೋಕೆ ಸಾಧ್ಯವೇ ಇಲ್ಲ ಎನ್ನುವ ಸ್ಪಷ್ಟನೆ ಸಿಗುತ್ತಿದೆ.
'ದೇವಕಿ ನಂದನ ವಾಸುದೇವ' ಚಿತ್ರದ ಹೀರೊ ಅಶೋಕ್ ಗಲ್ಲಾ ಸಂಬಂಧದಲ್ಲಿ ಮಹೇಶ್ ಬಾಬುಗೆ ಸೋದರಳಿಯ ಆಗಬೇಕು. ಹಾಗಾಗಿ ಆತನಿಗಾಗಿ ಸೂಪರ್ ಸ್ಟಾರ್ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಸತ್ಯಕ್ಕೆ ದೂರವಾದ ಮಾತು ಎಂದು ತಿಳಿದುಬಂದಿದೆ. ಆದರೆ ಇದೊಂದು ವದಂತಿಯಿಂ 'ದೇವಕಿ ನಂದನ ವಾಸುದೇವ' ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವುದು ಸುಳ್ಳಲ್ಲ.
ಮಹೇಶ್ ಬಾಬು ಹೀರೊ ಆಗಿ ರಾಜಮೌಳಿ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ದೇಶವಿದೇಶಗಳಲ್ಲಿ ಈ ಚಿತ್ರದ ಕಥೆ ಸಾಗಲಿದೆ. ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದು ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಈ ಸಿನಿಮಾ ಬಳಿಕ ಮಹೇಶ್ ಬಾಬು ಬರೀ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಮಾತ್ರ ನಟಿಸುವುದಾಗಿ ಹೇಳಿದ್ದಾರೆ. ಆದರೆ ಸಿನಿಮಾ ಯಾವಾಗ ತೆರೆಗೆ ಬರುತ್ತದೆ? ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಎರಡು ಭಾಗಗಳಾಗಿ SSMB 29 ಸಿನಿಮಾ ಬರುತ್ತದೆ ಎನ್ನಲಾಗ್ತಿದೆ.


Click it and Unblock the Notifications











