ಅಲ್ಲು ಅರ್ಜುನ್ 'ಪುಷ್ಪ'- 2 ಚಿತ್ರದಲ್ಲಿ ನಿಹಾರಿಕಾ? ಟ್ವಿಸ್ಟ್ ಏನು ಅಂದ್ರೆ?
ಸುಕುಮಾರ್ ನಿರ್ದೇಶನದ 'ಪುಷ್ಪ'- 2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸರಣಿಯ ಮೊದಲ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು 2ನೇ ಸಿನಿಮಾ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಇತ್ತೀಚೆಗೆ ನಿರ್ಮಾಪಕರು, ನಿರ್ದೇಶಕರ ಮನೆ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಹಾಗಾಗಿ ಶೂಟಿಂಗ್ಗೆ ಬ್ರೇಕ್ ಬಿದ್ದಿತ್ತು. ಇನ್ನು ಸಿನಿಮಾ ಬಗ್ಗೆ ಹೊಸದೊಂದು ಸುದ್ದಿ ಸದ್ದು ಮಾಡ್ತಿದೆ.
ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಚಿತ್ರಕ್ಕೆ ಹೊಸ ಕಲಾವಿದರು ಸೇರಿಕೊಳ್ಳುತ್ತಿದ್ದಾರೆ. ಜಗಪತಿ ಬಾಬು ಕೂಡ ತಾರಾಗಣದಲ್ಲಿ ಇರಲಿದ್ದಾರೆ. ಇದೀಗ ಮತ್ತೊಂದು ಪಾತ್ರಕ್ಕೆ ನಿಹಾರಿಕಾ ಕೋನಿದೇಲ ಹೆಸರು ಕೇಳಿಬರ್ತಿದೆ. ಒಂದ್ಕಡೆ ಮೆಗಾ ಡಾಟರ್ ಡಿವೋರ್ಸ್ ಬಗ್ಗೆ ಗುಸುಗುಸು ಶುರುವಾಗಿದೆ. ಇಂತಹ ಸಮಯದಲ್ಲೇ ಹೊಸ ನ್ಯೂಸ್ ಭಾರೀ ಸದ್ದು ಮಾಡ್ತಿದೆ. ಈ ಹಿಂದೆ ಸಾಯಿ ಪಲ್ಲವಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸ್ತಾರೆ ಎನ್ನಲಾಗಿತ್ತು. ಅದೇ ಪಾತ್ರ ಈಗ ನಿಹಾರಿಕಾ ಮಾಡುತ್ತಾರೆ ಎನ್ನುವ ಮಾತುಗಳು ಟಾಲಿವುಡ್ನಲ್ಲಿ ಕೇಳಿಬರ್ತಿದೆ. ಚಿತ್ರದಲ್ಲಿ ಗಿರಿಜನ ಹುಡುಗಿಯ ಪಾತ್ರದಲ್ಲಿ ಆಕೆ ನಟಿಸ್ತಾರೆ ಎನ್ನಲಾಗ್ತಿದೆ.

ಸರಣಿಯ ಮೊದಲ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಿರುವುದರಿಂದ ಸುಕುಮಾರ್ ಅದನ್ನು ಮೀರಿಸಿ 2ನೇ ಚಿತ್ರವನ್ನು ಗೆಲ್ಲಿಸುವ ಹಠಕ್ಕೆ ಬಿದ್ದಿದ್ದಾರೆ. ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿ ತಿದ್ದಿ ತೀಡಿ ಅದ್ಭುತ ಸಿನಿಮಾ ಕಟ್ಟಿಕೊಟ್ಟುವ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಹೊಸ ಪಾತ್ರಗಳನ್ನು ಸೇರಿಸುವ ಪ್ರಯತ್ನ ನಡೀತಿದೆ. ಒಂದೇ ಚಿತ್ರದಲ್ಲಿ ಮುಗಿದು ಹೋಗುವ ಕಥೆಯನ್ನು 2ನೇ ಭಾಗಕ್ಕೆ ಎಳೆದು ತರುತ್ತಿದ್ದಾರೆ. ಹಾಗಾಗಿ ಹೊಸ ಪಾತ್ರಗಳ ಅವಶ್ಯಕತೆ ಕಂಡಿತ ಇದೆ. ಸೀಕ್ವೆಲ್ನಲ್ಲಿ ಗಿರಿಜನ ಹುಡುಗಿಯ ಪಾತ್ರಕ್ಕೆ ಬಹಳ ಮಹತ್ವ ಇದೆಯಂತೆ.
ಈಗಾಗಲೇ 'ಪುಷ್ಪ'- 2 ಚಿತ್ರದ ಫಸ್ಟ್ ಗ್ಲಿಂಪ್ಸ್ ಹಾಗೂ ಪೋಸ್ಟರ್ ರಿಲೀಸ್ ಆಗಿ ಹಿಟ್ ಆಗಿದೆ. ಪ್ರೀಕ್ವೆಲ್ 350 ಕೋಟಿ ರೂ. ಗಳಿಕೆ ಕಂಡಿತ್ತು. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡು ಸೀಕ್ವೆಲ್ ಕೊಟ್ಟಿಕೊಡಲಾಗುತ್ತಿದೆ. ಇನ್ನು ನಿಹಾರಿಕಾ ಮಾಡಲಿರುವ ಗಿರಿಜನ ಹುಡುಗಿ ಪಾತ್ರ ಕಥೆಗೆ ಟ್ವಿಸ್ಟ್ ಕೊಡುತ್ತೆ ಎನ್ನಲಾಗ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಚಿತ್ರದ ಎಲ್ಲಾ ಭಾಷೆಗಳ ಆಡಿಯೋ ರೈಟ್ಸ್ 65 ಕೋಟಿ ರೂ.ಗೆ ಮಾರಾಟ ಆಗಿದೆ ಅನ್ನುವ ಗುಸುಗುಸು ಶುರುವಾಗಿದೆ.
ಪ್ರೀಕ್ವೆಲ್ನಲ್ಲಿ ಬಹುತೇಕ ಪಾತ್ರಗಳನ್ನು ಉಳಿಸಿಕೊಳ್ಳಲಾಗಿತ್ತು. ಡಾಲಿ ಧನಂಜಯ ಕೂಡ ಜಾಲಿ ರೆಡಿಯಾಗಿ ಮತ್ತೆ ವಾಪಸ್ ಬರಲಿದ್ಧಾರೆ. ಎಸ್ಐ ಭನ್ವರ್ ಸಿಂಗ್ ಶೇಖಾವತ್ ಹಾಗೂ ಪುಷ್ಪರಾಜ್ ನಡುವಿ ಏಟು ಎದಿರೇಟು 'ಪುಷ್ಪ'- 2 ಚಿತ್ರದ ಮೇನ್ ಥೀಮ್ ಎನ್ನಲಾಗುತ್ತಿದೆ. ಇನ್ನು ಸಿನಿಮಾ ಕಥೆ ಈ ಬಾರಿ ಮಲೇಷಿಯಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಮುಂದುವರೆಯಲಿದೆ. ರಕ್ತ ಚಂದನ ಸ್ಮಗ್ಲರ್ ಪುಷ್ಪರಾಜ್ ದೊಡ್ಡ ಮಾಫಿಯಾ ಡಾನ್ ಆಗಿ ಬೆಳೆಯುವುದನ್ನು ಈ ಭಾಗದಲ್ಲಿ ಸುಕುಮಾರ್ ತೋರಿಸಲಿದ್ದಾರೆ.
ಮೊದಲ ಭಾಗ ಸೂಪರ್ ಸಕ್ಸಸ್ ನಂತರ ನಿರ್ದೇಶಕರು ಕಥೆಯಲ್ಲಿ ಬದಲಾವಣೆ ಮಾಡಲು ಸಾಕಷ್ಟು ಸಮಯ ವ್ಯಯಿಸಿದರು. ಹಾಗಾಗಿ ಶೂಟಿಂಗ್ ತಡವಾಗಿತ್ತು. ಇದೀಗ ಮತ್ತೆ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದ್ದು ಸಿನಿಮಾ ರಿಲೀಸ್ ಮತ್ತಷ್ಟು ತಡವಾಗಲಿದೆ. ಮುಂದಿನ ವರ್ಷ ಸಮ್ಮರ್ ವೇಳೆಗೆ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಅಂದಾಜಿತ್ತು. ಆದರೆ ಶೂಟಿಂಗ್ ತಡವಾಗುತ್ತಿರುವುದರಿಂದ ಪ್ರೇಕ್ಷಕರು ಸಿನಿಮಾ ನೋಡಲು ಮುಂದಿನ ವರ್ಷಾಂತ್ಯದವರೆಗೂ ಕಾಯಬೇಕಾದ ಅನಿವಾರ್ಯತೆ ಎದುರಾಗಬಹುದು.


Click it and Unblock the Notifications











