ಪರಭಾಷೆಯತ್ತ ಕನ್ನಡದ ಮತ್ತೊಬ್ಬ ನಟಿ, ಮೆಗಾ ಸ್ಟಾರ್ ಚಿರಂಜೀವಿ ಜೊತೆ ಸಿಕ್ಸ್ ಪ್ಯಾಕ್ ಸುಂದರಿ..?
ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ. ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ.
ಮತ್ತೂ ಕೆಲವರು ಪರಭಾಷೆಯಲ್ಲಿ ಮಿಂಚಿದರೆ ಹೆಚ್ಚಿನ ಜನ ಮನ್ನಣೆ ಸಿಗುತ್ತೆ ಎಂದುಕೊಳ್ಳುತ್ತಾರೆ. ಇನ್ನು ಕನ್ನಡದಲ್ಲಿ ಸದ್ಯ ನಾಯಕಿಯರ ಕೊರತೆ ಮಾತ್ರ ಇಲ್ಲ. ನಾಯಕರ ಕೊರತೆ ಕೂಡ ಇದೆ. ಇರುವ ಸ್ಟಾರ್ಗಳು ವರ್ಷಕ್ಕೊಂದು ಚಿತ್ರ ಮಾಡಿದರೆ ಹೆಚ್ಚು. ಆ ಚಿತ್ರದಲ್ಲಿ ಕೂಡ ಅವಕಾಶ ಸಿಗುತ್ತಾ ಇಲ್ವಾ ಎನ್ನುವುದು ಖಾತ್ರಿ ಇಲ್ಲ. ಪರಭಾಷೆಯತ್ತ ನಮ್ಮ ನಾಯಕಿಯರು ಮುಖ ಮಾಡಲು ಇದು ಕೂಡ ಒಂದು ಕಾರಣ.

ಒಟ್ನಲ್ಲಿ ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಸದ್ಯ ಹೀಗೆ ಕನ್ನಡದಿಂದ ಪರಭಾಷೆಗೆ ತೆರಳಿ ಅಲ್ಲಿ ಅದೃಷ್ಟವನ್ನು ಪರೀಕ್ಷೆಗೆ ಮುಂದಾಗಿರುವ ಸಾಲಿಗೆ ಈಗ ನಿಶ್ವಿಕಾ ನಾಯ್ಡು ಕೂಡ ಸೇರಿಕೊಳ್ಳಲಿದ್ದಾರೆ ಎನ್ನುವುದು ಸದ್ಯದ ಲೇಟೆಸ್ಟ್ ನ್ಯೂಸು.
ಹೌದು, ನಿಶ್ವಿಕಾ ನಾಯ್ಡು.. 'ಅಮ್ಮ ಐ ಲವ್ ಯೂ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಬೆಂಗಳೂರಿನ ಚೆಲುವೆ. ಆ ನಂತರ 'ವಾಸು ನಾನ್ ಪಕ್ಕಾ ಕಮರ್ಷಿಯಲ್' .. 'ಪಡ್ಡೆಹುಲಿ' .. 'ಜೆಂಟಲ್ಮ್ಯಾನ್'.. 'ರಾಮಾರ್ಜುನ'.. 'ಸಖತ್'.. 'ಗುರು ಶಿಷ್ಯರು'.. 'ದಿಲ್ ಪಸಂದ್' ಚಿತ್ರಗಳಲ್ಲಿ ಅಭಿನಯಿಸಿರುವ ನಿಶ್ವಿಕಾ ನಾಯ್ಡು, ಯೋಗರಾಜ್ ಭಟ್ರ 'ಗರಡಿ'ಯಲ್ಲಿ ಹೆಜ್ಜೆ ಹಾಕಿದರು. 'ಕರಟಕ ದಮನಕ' ಚಿತ್ರದಲ್ಲಿ 'ಹಿತ್ತಲಕ ಕರಿಬ್ಯಾಡ ಮಾವ' ಎಂದು ಪ್ರಭುದೇವಾ ಜೊತೆ ಕುಣಿದಾಡಿದರು.
ಇಂಥಾ ನಿಶ್ವಿಕಾ ಸದ್ಯ ಕನ್ನಡದ ಚಿತ್ರವನ್ನು ಅಪ್ಪಿ-ಒಪ್ಪಿ ಹೆಚ್ಚು ಕಡಿಮೆ ಒಂದು ವರ್ಷವಾಗಿದೆ. 'ಮಹಾನಟಿ' ಎಂಬ ರಿಯಾಲಿಟಿ ಶೋಗೆ ಮಾತ್ರ ನಿಶ್ವಿಕಾ ಸೀಮಿತವಾದಂತೆ ಇದೆ. ಹೀಗಿರುವಾಗ ಇದೀಗ ನಿಶ್ವಿಕಾ ನಾಯ್ಡು ತೆಲುಗು ಚಿತ್ರರಂಗಕ್ಕೆ ವಲಸೆ ಹೋಗುತ್ತಿದ್ದಾರೆ, ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 156ನೇ ಚಿತ್ರ 'ವಿಶ್ವಂಭರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.
ಅಂದ್ಹಾಗೇ 'ವಿಶ್ವಂಭರ'ದಲ್ಲಿ ಒಬ್ಬರಲ್ಲ ಬದಲಿಗೆ ಮೂವರು ನಾಯಕಿಯರಿದ್ದಾರೆ. ಆ ಪೈಕಿ ಕನ್ನಡದ್ದೇ ಮತ್ತೊಂದು ಪ್ರತಿಭೆ 'ಆಶಿಕಾ ರಂಗನಾಥ್' ಕೂಡ ಒಬ್ಬರು. ಇವರನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ತ್ರಿಶಾ ಮತ್ತು ರಮ್ಯಾ ಪಶುಪುಲೇಟಿ ಇದ್ದಾರೆ. ಇನ್ನು ವಸಿಷ್ಠ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಹೀಗಿದ್ದಾಗ ಚಿತ್ರದಲ್ಲಿ ನಿಶ್ವಿಕಾ ಅವರದ್ದೇನು ಕೆಲಸ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ 'ಐಟಂ ಹಾಡು' ಎಂಬ ಉತ್ತರವನ್ನು ತೆಲುಗು ಮಾಧ್ಯಮಗಳು ನೀಡಿವೆ.

ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಈ ಚಿತ್ರದ ಎಲ್ಲ ಹಾಡುಗಳಿಗೆ ಸಂಗೀತವನ್ನು ನೀಡಿದ್ದು, ಒಂದು ಹಾಡಿಗೆ ಐಟಂ ಹಾಡುಗಳ ವಿಶೇಷಜ್ಞ ಎಂದೇ ಕರೆಯಲ್ಪಡುವ ಸಂಗೀತ ನಿರ್ದೇಶಕ ಭೀಮ್ಸ್ ರಾಗ ಸಂಯೋಜನೆ ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಿಶ್ವಿಕಾ ಸೊಂಟ ಬಳುಕಿಸಲಿದ್ದಾರೆ ಎಂಬ ಮಾತು ಸದ್ಯ ಹೈದರಾಬಾದ್ನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. 'ಹಿತಲಕ ಕರಿಬ್ಯಾಡ ಮಾವ' ಹಾಡು ನಿಶ್ವಿಕಾ ಅವರನ್ನು ತೆಲುಗಿಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವ ಸುದ್ದಿ ಕೂಡ ಚಾಲ್ತಿಯಲ್ಲಿದೆ.
ಸದ್ಯ ಈ ಸುದ್ದಿಯ ಕುರಿತು ನಿಶ್ವಿಕಾ ನಾಯ್ಡು ಚಿತ್ರತಂಡವಾಗಲಿ ಅಧಿಕೃತವಾಗಿ ಏನೂ ಹೇಳಿಲ್ಲ. ಇನ್ನುಳಿದಂತೆ 2018-19ರ ಆಸು ಪಾಸಿನಲ್ಲಿ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲು ನನಗೆ ಸಾಕಷ್ಟು ಆಫರ್ಗಳು ಬರುತ್ತಿವೆ, ಆದರೆ.. ನನ್ನ ಮೊದಲ ಆದ್ಯತೆ ಕನ್ನಡಕ್ಕೆ ಎಂದು ನಿಶ್ವಿಕಾ ನಾಯ್ಡು ಹೇಳಿದ್ದರು.

ನನ್ನ ವೃತ್ತಿ ಜೀವನ ಆರಂಭಿಸಿದ್ದು ಇಲ್ಲಿಯೇ ಈ ಕಾರಣಕ್ಕೆ ಮೊದಲು ಕನ್ನಡ, ಆಮೇಲೆ ಬೇರೆ ಭಾಷೆಯ ಚಿತ್ರಗಳ ಕುರಿತು ಆಲೋಚನೆ ಮಾಡುವುದಾಗಿ ಹೇಳಿದ್ದ ನಿಶ್ವಿಕಾ ನನ್ನ ನೆಲದಲ್ಲಿಯೇ ನಾನು ಉತ್ತಮ ಕಲಾವಿದೆ ಆಗಬೇಕು ಎಂದು ಕನಸು ಕಂಡಿದ್ದೇನೆ ಎಂದು ಹೇಳಿದ್ದರು. ನನ್ನ ಜನರ ಬಗ್ಗೆ ನನಗೆ ನಂಬಿಕೆಯಿದೆ. ಅವರದಿಂದ ನನಗೆ ಪ್ರೋತ್ಸಾಹ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದರು.
ನಿಶ್ವಿಕಾ ಅವರ ಈ ಮಾತು ಕೇಳಿ ಕನ್ನಡದಲ್ಲಿಯೇ ನಿಶ್ವಿಕಾ ಮುಂದುವರೆಯುವಂತಾಗಲಿ ಎಂದು ಅನೇಕರು ಆಶಿಸಿದ್ದರು. ಆದರೆ ಈಗ ನಿಶ್ವಿಕಾ ನಾಯ್ಡು ಕೂಡ ಪರಭಾಷೆಯತ್ತ ಮುಖ ಮಾಡಿದಂತೆ ಇದೆ.


Click it and Unblock the Notifications










