'ಟಾಕ್ಸಿಕ್'ಗೂ ಮುನ್ನ 'ರಾಮಾಯಣ' ಟ್ರೈಲರ್ ಲಾಂಚ್; ವೇದಿಕೆ, ಮುಹೂರ್ತ ಕೂಡ ಫಿಕ್ಸ್!
ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಚಿತ್ರದಲ್ಲಿ ರಣ್ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಸೇರಿ ದೊಡ್ಡ ತಾರಾಗಣವಿದೆ. 4000 ಕೋಟಿ ರೂ. ಬಜೆಟ್ನಲ್ಲಿ ಎರಡು ಭಾಗಗಳಾಗಿ ಸಿನಿಮಾ ಬಿಡುಗಡೆ ಆಗಲಿದೆ. ಲಾಸ್ ಏಂಜಲೀಸ್ನಲ್ಲಿ ಟ್ರೈಲರ್ ರಿಲೀಸ್ ಮಾಡುವ ಬಗ್ಗೆ ಚರ್ಚೆ ನಡೀತಿದೆ.
ವಾಲ್ಮೀಕಿ ರಾಮಾಯಣ ಕಾವ್ಯ ಆಧರಿಸಿ ಚಿತ್ರವನ್ನು ತೆರೆಗೆ ತರಲಾಗ್ತಿದೆ. ನಮಿಲ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್ ಮಂದಿಗೂ ನಮ್ಮ ರಾಮಾಯಣ ಕಥೆಯನ್ನು ತೋರಿಸಬೇಕು ಎನ್ನುವ ಕಾರಣಕ್ಕೆ ನಿರ್ಮಿಸುತ್ತಿರುವ ಅದ್ಧೂರಿ ಸಿನಿಮಾ ಇದು. ಹಾಗಾಗಿ ದೊಡ್ಡಮಟ್ಟದಲ್ಲಿ ಮಾರ್ಕೆಟಿಂಗ್ ಹಾಗೂ ರಿಲೀಸ್ ಪ್ಲ್ಯಾನ್ ಮಾಡಲಾಗ್ತಿದೆ. ಇತ್ತೀಚೆಗೆ ಕೆಲ ಕಂಟೆಂಟ್ ಕ್ರಿಯೇಟರ್ಸ್ ಕರೆಸಿ ಚಿತ್ರದ ಕೆಲ ದೃಶ್ಯಗಳನ್ನು ಪ್ರದರ್ಶನ ಮಾಡಿದ್ದರು.

ಲಾಸ್ ವೇಗಾಸ್ನಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಭಾಗಿ ಆಗಿ 'ರಾಮಾಯಣ' ಸಿನಿಮಾ ಪ್ರಚಾರ ಮಾಡಿ ಬಂದಿದ್ದರು. ಈಗಾಗಲೇ ಶ್ರೀರಾಮನಾಗಿ ರಣ್ಬೀರ್ ಕಪೂರ್ ಪಾತ್ರ ಪರಿಚಯದ ಟೀಸರ್ ಬಿಡುಗಡೆ ಆಗಿದೆ. ಅದೇ ರೀತಿ ರಾವಣನಾಗಿ ಯಶ್ ಟೀಸರ್ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 4 ತಿಂಗಳು ಮುನ್ನ ಹಾಲಿವುಡ್ ಚಿತ್ರಗಳ ರೀತಿ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಲಾಸ್ ಏಂಜಲೀಸ್ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಜುಲೈ 14ರಂದು ಟ್ರೈಲರ್ ಅನಾವರಣ ಮಾಡುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಇದಾಗಿದೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ ತೆರೆಗೆ ಬಂದ್ರೆ, 2ನೇ ಭಾಗ ಮುಂದಿನ ವರ್ಷ ಬೆಳಕಿನ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಮಂಡೋದರಿಯಾಗಿ ಕಾಜಲ್ ಅಗರ್ವಾಲ್, ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಇನ್ನುಳಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವಿಶ್ವದಾದ್ಯಂತ ದೊಡ್ಡದಾಗಿ ಸಿನಿಮಾ ರಿಲೀಸ್ ಆಗಲಿದ್ದು ಅದಕ್ಕೆ ತಕ್ಕಂತೆ ಪ್ರಮೋಷನ್ ಪ್ಲ್ಯಾನ್ ಶುರುವಾಗಿದೆ.

ಲಾಸ್ ಏಂಜಲೀಸ್ನಲ್ಲಿ ನಡೆಯುವ 'ರಾಮಾಯಣ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಯಶ್, ರಣ್ಬೀರ್, ಸಾಯಿ ಪಲ್ಲವಿ ಭಾಗವಹಿಸುವ ನಿರೀಕ್ಷೆಯಿದೆ. ಇದನ್ನು ಬಾಲಿವುಡ್ ಸಿನಿಮಾ ಅಥವಾ ಭಾರತದ ಸಿನಿಮಾ ಎನ್ನುವುದಕ್ಕಿಂತ ಪ್ಯಾನ್ ವರ್ಲ್ಡ್ ಸಿನಿಮಾ ಎನ್ನುವಂತೆ ಭಾವಿಸಲಾಗ್ತಿದೆ. ಅದೇ ಕಾರಣಕ್ಕೆ ಲಾಸ್ ಏಂಜಲೀಸ್ನಲ್ಲಿ ಮಾಧ್ಯಮಗಳಿಗೆ ಮೊದಲ ಟೀಸರ್ ಪ್ರದರ್ಶನ ಮಾಡಿದ್ದರು. ಅಲ್ಲಿನ ಮಾಧ್ಯಮಗಳ ಜೊತೆ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಟ ರಣ್ಬೀರ್ ಮಾತನಾಡಿ ಬಂದಿದ್ದರು. ಬಳಿಕ ಸಿನಿಮಾಕಾನ್ ಸಮಾವೇಶಕ್ಕೆ ಯಶ್ ಹಾಗೂ ನಮಿತ್ ಹೋಗಿದ್ದರು.
'ಅನಿಮಲ್' ಬಳಿಕ ರಣ್ಬೀರ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಆ ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ರಣ್ಬೀರ್ ಅಬ್ಬರಿಸಿದ್ದರು. ಇದೀಗ ಶ್ರೀರಾಮನಾಗಿ ಹೇಗೆ ಗಮನ ಸೆಳೆಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈಗಾಗಲೇ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ಶ್ರೀರಾಮ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಅದನ್ನೆಲ್ಲಾ ಮೀರಿ ಈ ಚಿತ್ರದಲ್ಲಿ ಹೇಗೆ ಕಥೆ ಹೇಳಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಿನಿಮಾ ತೆರೆಗೆ ತರುತ್ತಾರೆ ಎನ್ನುವ ನಿರೀಕ್ಷೆಯಿದೆ.
ಯಶ್ ಅಭಿಮಾನಿಗಳಿಗಂತೂ ಡಬಲ್ ಧಮಾಕ. ಸರಿಯಾಗಿ 2 ತಿಂಗಳ ಅಂತರದಲ್ಲಿ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ತೆರೆಗೆ ಬರಲಿವೆ. ಒಟ್ಟೊಟ್ಟಿಗೆ ಯಶ್ ಎರಡು ಸಿನಿಮಾಗಳ ಪ್ರಚಾರ ಮಾಡಲಿದ್ದಾರೆ. ಟೀಸರ್, ಟ್ರೈಲರ್, ಸಾಂಗ್ಸ್ ಅಂತ ಮುಂದಿನ 4 ತಿಂಗಳು ಅಭಿಮಾನಿಗಳಿಗೆ ಹಬ್ಬವೇ ಸರಿ.


Click it and Unblock the Notifications