ಭಾರೀ ಚಿತ್ರಕ್ಕಾಗಿ ಮತ್ತೆ ಒಂದಾಗ್ತಾರಾ ಸೂಪರ್ ಸ್ಟಾರ್ಸ್? ಇವರಿಬ್ಬರು ಹಿಂದೆ ನಟಿಸಿದ್ದ ಚಿತ್ರ ಕನ್ನಡಕ್ಕೂ ಬಂದಿತ್ತು!
ಮಲ್ಟಿಸ್ಟಾರರ್ ಸಿನಿಮಾಗಳನ್ನು ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಸ್ಟಾರ್ ನಟರಿಬ್ಬರು ಯಾವುದೇ ಹಮ್ಮು ಬಿಮ್ಮು ಇಲ್ಲದೇ ಒಟ್ಟಿಗೆ ನಟಿಸಿದರೂ ಅಭಿಮಾನಿಗಳು ಅಷ್ಟು ಸುಲಭವಾಗಿ ಒಪ್ಪಲ್ಲ. ಇಬ್ಬರೂ ನಟರಿಗೆ ಸಮಾನವಾಗಿ ಪಾತ್ರ ಪೋಷಣೆ ಮಾಡಿ ಪ್ರೇಕ್ಷಕರನ್ನು ಮೆಚ್ಚಿಸುವುದು ಫಿಲ್ಮ್ ಮೇಕರ್ಸ್ಗೆ ಕೂಡ ಕಷ್ಟ.
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಚಿತ್ರದಲ್ಲಿ ಜ್ಯೂ. ಎನ್ಟಿಆರ್- ರಾಮ್ಚರಣ್ ಒಟ್ಟಿಗೆ ಬಣ್ಣ ಹಚ್ಚಿದ್ದರು. ನಂದಮೂರಿ ಹಾಗೂ ಮೆಗಾ ಫ್ಯಾಮಿಲಿ ಸ್ಟಾರ್ಸ್ನ ಒಂದೆಡೆ ಸೇರಿಸುವ ಪ್ರಯತ್ನ ಮಾಡಿ ಜಕ್ಕಣ್ಣ ಭಾಗಶಃ ಗೆದ್ದಿದ್ದರು. ಆದರೆ ಚಿತ್ರದಲ್ಲಿ ತಾರಕ್ಗೆ ಅವಕಾಶ ಕಮ್ಮಿ ಆಯ್ತು ಅಂತ ಇವತ್ತಿಗೂ ಅಭಿಮಾನಿಗಳ ಹಲ್ಲು ಕಡಿಯುತ್ತಾರೆ. ಎಲ್ಲೋ ಒಂದು ಕಡೆ ಚಿತ್ರದಲ್ಲಿ ಚರಣ್ ಹೀರೊ ರೀತಿ ತಾರಕ್ನ ಪೋಷಕ ನಟನ ರೀತಿ ತೋರಿಸಿದ್ದಾರೆ ಎಂದು ಬೇಸರಗೊಂಡಿದ್ದಾರೆ.

'RRR' ಚಿತ್ರದಲ್ಲಿ ರಾಮ್ಚರಣ್ ಹಾಗೂ ತಾರಕ್ ಇಬ್ಬರಿಗೂ ಸಮನಾದ ಅವಕಾಶವಿದೆ. ನಟನೆಯಲ್ಲಿ ಕೆಲವೆಡೆ ಎನ್ಟಿಆರ್ ಮೋಡಿ ಮಾಡಿದ್ದಾರೆ. ಆದರೂ ಅಭಿಮಾನಿಗಳು ಇದನ್ನು ಒಪ್ಪಲು ಸಿದ್ಧರಿಲ್ಲ. ಇದೆಲ್ಲದರ ನಡುವೆ ತಮಿಳಿನಲ್ಲಿ ಇದೀಗ ಒಂದು ಮಲ್ಟಿಸ್ಟಾರರ್ ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. ತಮಿಳು ಚಿತ್ರರಂಗದಲ್ಲಿ ರಾಜಮೌಳಿಯಷ್ಟೇ ಪ್ರತಿಭಾನ್ವಿತ ನಿರ್ದೇಶಕ ಶಂಕರ್. ಆದರೆ ಇತ್ತೀಚೆಗೆ ಅವರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿದೆ.
ಭಾರೀ ನಿರೀಕ್ಷೆ ಮೂಡಿಸಿದ್ದ 'ಇಂಡಿಯ್-2' ಸಿನಿಮಾ ಹೀನಾಯವಾಗಿ ಸೋತಿತ್ತು. ಶಂಕರ್ ನಿರ್ದೇಶನದಲ್ಲಿ ರಾಮ್ಚರಣ್ ನಟಿಸುತ್ತಿರುವ 'ಗೇಮ್ ಚೇಂಜರ್' ಸಿನಿಮಾ ತೆರೆಗೆ ಬರಬೇಕಿದೆ. ಮುಂದಿನ ವರ್ಷ 'ಇಂಡಿಯನ್-3' ಬಿಡುಗಡೆ ಆಗಲಿದೆ. ಇದೆಲ್ಲದರ ನಡುವೆ ಐತಿಹಾಸಿಕ ಕಾದಂಬರಿ ಆಧರಿಸಿ ಶಂಕರ್ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ಎನ್ನುವ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಅದೇ ಕಾದಂಬರಿಯ ಸನ್ನಿವೇಶಗಳನ್ನು ಕದಿಯುತ್ತಿದ್ದಾರೆ ಎಂದು ಅವರು ಗರಂ ಆಗಿದ್ದರು.
ಸು. ವೆಂಕಟೇಶನ್ ಬರೆದ 'ವೀರ ಯುಗ ನಾಯಗನ್ ವೇಲ್ ಪಾರಿ' ಕಾದಂಬರಿಯನ್ನು ಸಿನಿಮಾ ಮಾಡುವ ಪ್ರಯತ್ನ ಬಹಳ ವರ್ಷಗಳಿಂದ ನಡೆಯುತ್ತಿದೆ. ಸದ್ಯ ಈ ಕಾದಂಬರಿಯ ರೈಟ್ಸ್ ನಿರ್ದೇಶಕ ಶಂಕರ್ ಬಳಿಯಿದೆ. 'ಗೇಮ್ ಚೇಂಜರ್' ಬಳಿಕ ಇದೇ ಕಥೆಯನ್ನು ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಚಿಯಾನ್ ವಿಕ್ರಂ ಹಾಗೂ ಸೂರ್ಯ ಒಟ್ಟಿಗೆ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
'ವೇಲ್ ಪಾರಿ' ಕಾದಂಬರಿಯಲ್ಲಿ ಸಾಕಷ್ಟು ಪವರ್ಫುಲ್ ಪಾತ್ರಗಳಿವೆ. ಈ ಹಿಂದೆ ರಜನಿಕಾಂತ್, ವಿಕ್ರಂ ಹಾಗೂ ಸೂರ್ಯ ಹೆಸರುಗಳು ಈ ಚಿತ್ರಕ್ಕೆ ಕೇಳಿಬಂದಿತ್ತು. ಆದರೆ ಈ ಬಗ್ಗೆ ನಿರ್ದೇಶಕ ಶಂಕರ್ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೈಯಲ್ಲಿದ್ದ 3 ಚಿತ್ರಗಳನ್ನು ಮುಗಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಮುಂದಿನ ಸಿನಿಮಾ ಯಾವುದು? ಎನ್ನುವ ಚರ್ಚೆ ಶುರುವಾಗಿದೆ.
ಈಗಾಗಲೇ ಕಾದಂಬರಿಯನ್ನು ಸಿನಿಮಾ ಸ್ಕ್ರಿಪ್ಟ್ ಮಾಡುವ ಕೆಲಸ ಮುಗಿದಿದೆ ಎಂದು ಕೆಲ ದಿನಗಳ ಹಿಂದೆ ಶಂಕರ್ ಹೇಳಿದ್ದರು. ಹಾಗಾಗಿ ಇದೇ ಕಥೆಯನ್ನು ಮುಂದೆ ಕಟ್ಟಿಕೊಡುತ್ತಾರೆ ಎನ್ನಲಾಗ್ತಿದೆ. ತೆಲುಗಿನ 'ಬಾಹುಬಲಿ' ರೀತಿ ಒಂದಷ್ಟು ಕಾಸ್ಟ್ಯೂಮ್ ಡ್ರಾಮಾಗಳನ್ನು ತಮಿಳಿನಲ್ಲಿ ಮಾಡಲಾಡುತ್ತಿದೆ. 'ಪೊನ್ನಿಯಿನ್ ಸೆಲ್ವನ್' ಸರಣಿ ಚಿತ್ರದಲ್ಲಿ ಮಣಿರತ್ನಂ ಇದೇ ಪ್ರಯತ್ನ ಮಾಡಿದ್ದರು. ಆದರೆ ಅವರ ಪ್ರಯತ್ನ ಅಷ್ಟಾಗಿ ಸಫಲವಾಗಲಿಲ್ಲ.
'ಕಂಗುವ' ಚಿತ್ರದಲ್ಲಿ ಸೂರ್ಯ ಮತ್ತೊಮ್ಮೆ ಅದೇ ಲೆಕ್ಕಾಚಾರದಲ್ಲಿದ್ದಾರೆ. ಫಲಿತಾಂಶ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು 21 ವರ್ಷಗಳ ಹಿಂದೆಯೇ 'ಪಿತಾಮಗನ್' ಚಿತ್ರದಲ್ಲಿ ಸೂರ್ಯ ಹಾಗೂ ವಿಕ್ರಂ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಬಾಲಾ ನಿರ್ದೇಶನದ ಚಿತ್ರ ಸೂಪರ್ ಹಿಟ್ ಆಗಿತ್ತು. ಕನ್ನಡಕ್ಕೆ ರೀಮೆಕ್ ಆಗಿದ್ದ ಚಿತ್ರದಲ್ಲಿ ಉಪೇಂದ್ರ, ದರ್ಶನ್ ನಟಿಸಿದ್ದರು. ಕನ್ನಡದಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ.


Click it and Unblock the Notifications











