ಮತ್ತೊಂದು ಚಿತ್ರಕ್ಕೆ ಸೈ ಎಂದ ದಳಪತಿ; ಕನ್ನಡ ನಿರ್ಮಾಣ ಸಂಸ್ಥೆ ಕೈ ಹಿಡಿದ ವಿಜಯ್?
ತಮಿಳುನಾಡಿನಲ್ಲಿ ಚುನಾವಣೆ ಕಣ ರಂಗೇರಿದೆ. ಈ ಬಾರಿ ತಮಿಳು ನಟ ವಿಜಯ್ ಕೂಡ ಅಖಾಡಕ್ಕೆ ಇಳಿದಿರುವುದು ಕುತೂಹಲ ಮೂಡಿಸಿದೆ. 'ಜನನಾಯಗನ್' ಚಿತ್ರವನ್ನು ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಳ್ಳಲು ದಳಪತಿ ಮನಸ್ಸು ಮಾಡಿದ್ದರು. ಆದರೆ 4 ತಿಂಗಳು ಕಳೆದರೂ ಸಿನಿಮಾ ಬಿಡುಗಡೆ ಆಗಲಿಲ್ಲ. ಈಗ ಆನ್ಲೈನ್ನಲ್ಲಿ ಲೀಕ್ ಆಗಿ ವಿವಾದ ಹುಟ್ಟಾಕ್ಕಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಭಾರೀ ಬಜೆಟ್ನಲ್ಲಿ 'ಜನನಾಯಗನ್' ಚಿತ್ರ ನಿರ್ಮಾಣ ಮಾಡಿದೆ. ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಲೀಕ್ ಆಗಿ ಎಡವಟ್ಟಾಗಿದೆ. ಈ ವಿಚಾರ ತಮಿಳುನಾಡಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 3 ದಿನಗಳಿಂದ ಹಿಂದೆ ಸಂಪೂರ್ಣ ಸಿನಿಮಾ ಟೆಲಿಗ್ರಾಮ್ನಲ್ಲಿ ಹರಿದಾಡ್ತಿದೆ. ಸಾಕಷ್ಟು ಜನ ಡೌನ್ಲೋಡ್ ಮಾಡಿ ಸಿನಿಮಾ ವೀಕ್ಷಿಸಿದ್ದಾರೆ. ವಿಜಯ್ ತಮ್ಮ ರಾಜಕೀಯರಂಗ ಪ್ರವೇಶಕ್ಕೆ ಈ ಚಿತ್ರವನ್ನು ವೇದಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಟಿವಿಕೆ ಎಂಬ ಪಕ್ಷವನ್ನು ವಿಜಯ್ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚಿತ್ರದಲ್ಲಿ ನಾಯಕ(ವಿಜಯ್)ನ ಹೆಸರು ಟಿವಿಕೆ ಎನ್ನುವುದು ವಿಶೇಷ. ವೈರಲ್ ಆಗುತ್ತಿರುವ ಸಿನಿಮಾ ತುಣುಕುಗಳಲ್ಲಿ ಅದು ಸ್ಪಷ್ಟವಾಗ್ತಿದೆ.

'ಜನನಾಯಗನ್' ವಿಜಯ್ ನಟನೆಯ ಕೊನೆಯ ಸಿನಿಮಾ ಎಂದು ಪ್ರಚಾರ ಆಗಿತ್ತು. ಆದರೆ ಅಧಿಕೃತವಾಗಿ ವಿಜಯ್ ಇದನ್ನು ಒಪ್ಪಿಕೊಳ್ಳಲಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಸೋತುಬಿಟ್ಟರೆ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಅಂದುಕೊಂಡ ರೀತಿ 'ಜನನಾಯಗನ್' ವಿಜಯ್ ಆಗಲಿಲ್ಲ. ಚಿತ್ರಮಂದಿರಕ್ಕೆ ಬರದೇ ಆನ್ಲೈನ್ನಲ್ಲಿ ಲೀಕ್ ಆಗಿ ಹಿನ್ನಡೆಯಾಗಿದೆ. ಹಾಗಾಗಿ ವಿಜಯ್ ಮತ್ತೊಂದು ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಚುನಾವಣೆಗೆ ಮುನ್ನ 'ಜನನಾಯಗನ್' ಸಿನಿಮಾ ಬಿಡುಗಡೆ ಆಗಿದ್ದರೆ ಟಿವಿಕೆ ಪಕ್ಷಕ್ಕೆ ಪ್ರಯೋಜನವಾಗುತ್ತಿತ್ತು. ಚುನಾವಣೆ ಬಳಿಕ ತೆರೆಗೆ ಬಂದ್ರೆ ಉಪಯೋಗವಿಲ್ಲ, ಹಾಗಾಗಿ ಟಿವಿಕೆ ಪಕ್ಷದವರೇ ಸಿನಿಮಾ ಲೀಕ್ ಮಾಡಿರಬಹುದು ಎನ್ನುವುದು ಕೆಲವರ ಆರೋಪ. ವಿಜಯ್ ಬಯಸಿದಂತೆ ಚುನಾವಣೆಗೂ ಮುನ್ನ ಜನ ಸಿನಿಮಾ ನೋಡಿದಂತಾಯ್ತು. ಸಿನಿಮಾ ಮೂಲಕ ದಳಪತಿ ಮತದಾರರಿಗೆ ಹೇಳಲು ಬಯಸಿದ್ದ ವಿಷಯ ಈಗ ದಾಟಿಸಿದಂತಾಗಿದೆ. ಹಾಗಾಗಿ ಈ ಲೀಕ್ ನಾಟಕ ಮಾಡಿದ್ದಾರೆ ಎಂದು ಕಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ.

'ಜನನಾಯಗನ್' ಸಿನಿಮಾ ನಿರ್ಮಿಸಿ ಕೆವಿಎನ್ ಸಂಸ್ಥೆ ಭಾರೀ ನಷ್ಟ ಅನುಭವಿಸುವಂತಾಗಿದೆ. ಸಂಪೂರ್ಣ ಸಿನಿಮಾ ಲೀಕ್ ಆಗಿ ಸಮಸ್ಯೆ ಎದುರಾಗಿದೆ. ಈಗ ಸಿನಿಮಾ ತೆರೆಗೆ ಬಂದರೂ ಜನ ನೋಡ್ತಾರಾ? ಆ ಕುತೂಹಲ ಇದ್ಯಾ? ಎನ್ನುವ ಅನುಮಾನ ಮೂಡಿದೆ. ಆದರೆ ಬೆಳ್ಳಿಪರದೆಯಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವುದು ಉತ್ತಮ ಎನ್ನುವ ಸಲಹೆ ಕೂಡ ಸಿಗುತ್ತಿದೆ. ಇದೆಲ್ಲದರ ನಡುವೆ ಕೆವಿಎನ್ ಸಂಸ್ಥೆಗೆ ಮತ್ತೊಂದು ಸಿನಿಮಾ ಮಾಡಿಕೊಡಲು ವಿಜಯ್ ಮನಸ್ಸು ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಅಂದಾಜು 400 ಕೋಟಿ ಬಜೆಟ್ನಲ್ಲಿ 'ಜನನಾಯಗನ್' ಸಿನಿಮಾ ನಿರ್ಮಾಣವಾಗಿದೆ. ವಿಜಯ್ 250 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಅಷ್ಟು ಬಜೆಟ್ ಹಾಕಿ ಸಿನಿಮಾ ನಿರ್ಮಿಸಿದ್ದ ಸಂಸ್ಥೆಗೆ ನಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಇದೇ ಬ್ಯಾನರ್ನಲ್ಲಿ ಇನ್ನೊಂದು ಚಿತ್ರದಲ್ಲಿ ನಟಿಸೋಕೆ ವಿಜಯ್ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕೆವಿಎನ್ ಸಂಸ್ಥೆ ನಷ್ಟ ಬರಿಸಲು ಮತ್ತೊಂದು ಚಿತ್ರಕ್ಕಾಗಿ ಕಾಲ್ಶೀಟ್ ಕೊಡ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಲೋಕೇಶ್ ಕನಕರಾಜ್ ಅಥವಾ ನೆಲ್ಸನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬಹುದು ಎನ್ನುವ ಗುಸುಗುಸು ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಅದ್ಯಾಕೋ ಕೆವಿಎನ್ ಸಂಸ್ಥೆಗೆ ಪದೇ ಪದೆ ಹಿನ್ನಡೆ ಆಗುತ್ತಿದೆ. ಸಂಕ್ರಾಂತಿಗೆ ಬರಬೇಕಿದ್ದ 'ಜನನಾಯಗನ್' ಇನ್ನು ತೆರೆಗೆ ಬಂದಿಲ್ಲ. 'ಟಾಕ್ಸಿಕ್' ಸಿನಿಮಾ ರಿಲೀಸ್ ಪೋಸ್ಟ್ಪೋನ್ ಆಗಿದೆ. 'ಕೆಡಿ' ಸಿನಿಮಾ ಹಾಡೊಂದು ಇತ್ತೀಚೆಗೆ ವಿವಾದ ಸೃಷ್ಟಿಸಿತ್ತು. ಇದೀಗ ಸೆನ್ಸಾರ್ ಸಮಸ್ಯೆ ಎದುರಾಗಿದೆ ಎನ್ನಲಾಗ್ತಿದೆ. ಒಟ್ಟಾರೆ ಎಲ್ಲಾ ಸಮಸ್ಯೆ ಬಗೆಹರಿದು ಈ ಸಿನಿಮಾಗಳೆಲ್ಲಾ ಯಾವಾಗ ತೆರೆಗೆ ಬರುತ್ತದೆ ಕಾದು ನೋಡಬೇಕಿದೆ.


Click it and Unblock the Notifications











