ಬಾಬು ಸುಳ್ಳು ಬುರುಕ
ಬಾಬು ಸಣ್ಣತನ ಬಿಡಲಿ. ಅವರಿವರ ಮೇಲೆ ಗೂಬೆ ಹೊರಿಸಿ ಸುಖಿಸುವ ಚಾಳಿಯನ್ನು ಇನ್ನೂ ಮೇಲಾದರೂ ತೊರೆಯಲಿ. ಕೆಟ್ಟ ಚಾಳಿಗಳಿಂದ ದೂರಾಗಿ ಒಳ್ಳೆಯ ಚಿತ್ರ ಮಾಡುವತ್ತ ಗಮನ ಹರಿಸಿದರೆ ನಾಡಿಗೆ ಉಪಕಾರವಾಗುತ್ತೆ .
ಕುರಿಗಳು ಸಿನಿಮಾಕ್ಕೆ ಸೆನ್ಸಾರ್ ಸದಸ್ಯರು ತೊಡರುಗಾಲು ಹಾಕಿದರು ಅನ್ನುವ ಬಾಬು ಆಪಾದನೆಗೆ, ಆಪಾದಿತ ಸದಸ್ಯರು ಮಾಡಿಕೊಂಡಿರುವ ಕಳಕಳಿಯ ಮನವಿಯಿದು. ಬಾಬುವಿನ ಆಪಾದನೆಯಿಂದ ನೊಂದ ಸದಸ್ಯರು ತಮ್ಮ ಪ್ರತಿಕ್ರಿಯೆಯುಳ್ಳ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಸೆನ್ಸಾರ್ ಸಲಹಾ ಮಂಡಳಿಯ ಸದಸ್ಯರಾದ ಎಚ್.ಎಸ್. ಪಾರ್ವತಿ, ಶ್ರೀಲತಾ ಪೂರ್ಣಚಂದ್ರ, ಎನ್. ಸುಜಾತಾ ಪರಮಶಿವಯ್ಯ, ವಿ. ಹರೇಕಿಷನ್ ಅವರು ಹೇಳಿಕೆಗೆ ಸಹಿ ಹಾಕಿದ್ದಾರೆ.
ತಮ್ಮನ್ನು ಮುಠ್ಠಾಳರು, ಮೂರ್ಖರು, ಭ್ರಷ್ಟರು, ಲಂಚಕೋರರು ಎಂದಿರುವ ಬಾಬು ಮಾತುಗಳ ಬಗೆಗೆ ಹೇಳಿಕೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಸೆನ್ಸಾರ್ ಮಂಡಳಿಯ ಸದಸ್ಯರು, ಇಂಥಾ ಗುಣ ವಿಶೇಷಗಳುಳ್ಳವರ ಸಂತೆಯಲ್ಲಿ ಅಧ್ಯಾಪಕರು, ಸಾಹಿತಿಗಳು, ಪತ್ರಿಕೋದ್ಯಮಿಗಳು ಮಾತ್ರವಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆಸಿಎನ್ ಚಂದ್ರು ಸೇರಿದಂತೆ ಚಿತ್ರೋದ್ಯಮದ ವಿವಿಧ ಮಂದಿಯೂ ಇದ್ದಾರೆ ಅನ್ನುವುದನ್ನು ಹೇಳಿಕೆ ನೀಡುವಾಗ ಬಾಬು ನೆನಪಿನಲ್ಲಿಡಬೇಕಿತ್ತು ಎಂದು ವಿಷಾದಿಸಿದ್ದಾರೆ.
ಬಾಬು ಬೇಕಾಬಿಟ್ಟಿ ಆರೋಪ ಮಾಡಿದ್ದಾರೆ. ನಮ್ಮನ್ನೆಲ್ಲ ಲಂಚಕೋರರು ಅಂದಿದ್ದಾರೆ. ಇದೆಲ್ಲ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಅವರು ಹೂಡಿರುವ ತಂತ್ರ ಅಷ್ಟೆ . ಯಾವ ಯಾವ ನಿರ್ಮಾಪಕರು ಯಾವ್ಯಾವ ಸದಸ್ಯರಿಗೆ ಎಷ್ಟು ಲಂಚ ಕೊಟ್ಟಿದ್ದಾರೆ ಅನ್ನುವ ಸಾಕ್ಷ್ಯಗಳನ್ನು ಅವರೇಕೆ ಒದಗಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಸದಸ್ಯರು, ಗೌರವಸ್ಥ ಸದಸ್ಯರ ಮೇಲಿನ ಟೀಕೆಗಳನ್ನು ಪ್ರತಿಭಟಿಸುತ್ತೇವೆ ಎಂದಿದ್ದಾರೆ.
ಬಾಬುವಿನ ಅನೇಕ ಆರೋಪಗಳ ಬಗ್ಗೆ ಹೇಳಿಕೆ ಹೊರಡಿಸಿರುವ ಸದಸ್ಯರು ಸಮಜಾಯಿಷಿ ನೀಡಿದ್ದಾರೆ. ಅವರ ಸಮಜಾಯಿಷಿಗಳು ಇಂತಿವೆ -
- ರಿವಿಜನ್ ಕಮಟಿಯಲ್ಲಿ ಕುರಿಗಳಿಗೆ ಪ್ರಮಾಣ ಪತ್ರ ಸಿಕ್ಕಿತು ಎಂದು ಬಾಬು ಹೇಳಿದ್ದಾರೆ. ಆದರೆ, ಆಕ್ಷೇಪಾರ್ಹ ದೃಶ್ಯ- ಸಂಭಾಷಣೆಗಳಿಗೆ ಕತ್ತರಿ ಹಾಕಿದ ನಂತರವೇ ಪ್ರಮಾಣಪತ್ರ ಸಿಕ್ಕಿದೆ ಎನ್ನುವ ವಿಷಯವನ್ನು ಬಾಬು ಮರೆ ಮಾಚಿದ್ದಾರೆ. ಅಂದರೆ ಬಾಬು ಸುಳ್ಳು ಹೇಳಿದ್ದಾರೆ.
- ಸೆನ್ಸಾರ್ ಮಂಡಳಿ ಚರ್ಚೆಗೆ ಕರೆದಾಗ ನಿಯಮಾನುಸಾರ ನಿರ್ಮಾಪಕ ಹಾಗೂ ನಿರ್ದೇಶಕರು ಬರುವುದು ವಾಡಿಕೆ. ಆದರೆ, ಬಾಬು ತಮ್ಮೊಂದಿಗೆ ಏಳೆಂಟು ಮಂದಿಯನ್ನು ಕರೆತಂದಿದ್ದರು. ಮುಂದಿನ ಎರಡು ಸಾಲುಗಳಲ್ಲಿ ಬಾಬು ಹಿಂಬಾಲಕರೇ ಇದ್ದರು. ಅವರೆಲ್ಲಾ ಮಂಡಳಿ ಸದಸ್ಯರೊಂದಿಗೆ ಸೆಣಸಲೇ ಬಂದಂತಿದ್ದರು. ಅವರು - ನೀವೆಲ್ಲ ವೀರಪ್ಪನ್ ಕಡೆಯವರು, ಕನ್ನಡ ವಿರೋಧಿಗಳು ಎಂದು ನಮ್ಮನ್ನು ಜರೆದರು. ಬಾಬು ಹಾಗೂ ಜೈ ಜಗದೀಶ್ ಗಲಾಟೆಯನ್ನು ನೋಡುತ್ತ ತಣ್ಣಗೆ ಕೂತಿದ್ದರು.
- ಹೆಣ್ಣನ್ನು ಡಕೋಟಾ ಗಾಡಿ ಅಂದರೇನು ತಪ್ಪು ಅನ್ನುವುದು ಬಾಬು ಪ್ರಶ್ನೆ . ಅನ್ನಲಿ, ಬಾಬು ಅವರಿಗೆ ಸ್ತ್ರೀಯರ ಬಗೆಗೆ ಎಷ್ಟು ಗೌರವವಿದೆ ಎನ್ನುವುದು ಜನರಿಗೂ ಅರ್ಥವಾಗಲಿ.
- ಮೊದಲ ಹನ್ನೊಂದು ರೀಲುಗಳವರೆಗೆ ಸಿನಿಮಾ ತಮಾಷೆಯಾಗೇ ಸಾಗುತ್ತೆ . ಆಮೇಲಿನದೆ ನಿಜವಾದ ತಮಾಷೆ. ವೀರಪ್ಪನ್ ಪಾತ್ರಧಾರಿ ಬರುತ್ತಾನೆ, ತಮಿಳರ ನಿಂದನೆ ನಡೆಯುತ್ತೆ ... ಬೋರ್ಡಿನ ನಿಯಮಾನುಸಾರ ಇದನ್ನೆಲ್ಲ ಒಪ್ಪುವುದು ಸಾಧ್ಯವೇ ಇಲ್ಲ . ಅದನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆ ಬಾಬುವಿಗಿಲ್ಲ .
- ಸರಿಯಾಗಿ ಸಿನಿಮಾ ಮಾಡಲಿಕ್ಕೆ ಬರದೆ ಬಾಬು ನಷ್ಟ ಮಾಡಿಕೊಂಡಿದ್ದಾರೆ. ಅದಕ್ಕೂ ಮಂಡಳಿಗೂ ಸಂಬಂಧವಿಲ್ಲ .
ವಾರ್ತಾಸಂಚಯ
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications