ಪವನ್ ಕಲ್ಯಾಣ್ ಅಭಿಮಾನಿ ಚಿರಂಜೀವಿ? ಇದನ್ನು ಒಪ್ಪಿಕೊಳ್ತಾರಾ ಪ್ರೇಕ್ಷಕರು?
ಟಾಲಿವುಡ್ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಖದರ್ ಎಂಥದ್ದು ಎಂದು ಬಿಡಿಸಿ ಹೇಳಬೇಕಾಗಿಲ್ಲ. ತಮ್ಮ ವಿಭಿನ್ನ ಅಭಿನಯ, ಡ್ಯಾನ್ಸ್ನಿಂದ ಎನ್ಟಿಆರ್ರಂತಹ ದಿಗ್ಗರ ನಟರಿಗೆ ಪೈಪೋಟಿ ಕೊಟ್ಟ ನಟ ಚಿರಂಜೀವಿ. ಅಭಿಮಾನಿಗಳ ಪಾಲಿನ ಮೆಗಾಸ್ಟಾರ್ ಚಿರು ಹಾದಿಯಲ್ಲೇ ಅವರ ಕುಟುಂಬದಿಂದ ಸಾಕಷ್ಟು ಜನ ನಟರು ಚಿತ್ರರಂಗಕ್ಕೆ ಬಂದಿದ್ದಾರೆ.
ಚಿರಂಜೀವಿ ಹಾದಿಯಲ್ಲೇ ಸಹೋದರರಾದ ನಾಗಬಾಬು ಹಾಗೂ ಪವನ್ ಕಲ್ಯಾಣ್ ಕೂಡ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೆ ಪವನ್ ತಮ್ಮದೇ ವಿಭಿನ್ನ ಸ್ಟೈಲ್ ಹಾಗೂ ಅಭಿನಯದಿಂದ ಪವನ್ ಸ್ಟಾರ್ ಎನಿಸಿಕೊಂಡರು. ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಕೇವಲ 25 ಸಿನಿಮಾಗಳಿಂದ 100 ಸಿನಿಮಾಗಳಷ್ಟು ಜನಪ್ರಿಯತೆ ಗಳಿಸಿದ್ದಾರೆ. ಜನಸೇನಾ ಪಕ್ಷ ಕಟ್ಟಿ ರಾಜಕೀಯರಂಗಕ್ಕೂ ಧುಮುಕಿದ್ದಾರೆ. ಜೊತೆ ಜೊತೆಗೆ ಸಿನಿಮಾಗಳಲ್ಲೂ ಪವನ್ ನಟಿಸುತ್ತಿದ್ದಾರೆ.
ಚಿರಂಜೀವಿ ಹಾಕಿಕೊಟ್ಟ ಮಾರ್ಗದಲ್ಲೇ ಮೆಗಾ ಫ್ಯಾಮಿಲಿ ನಟರೆಲ್ಲಾ ಚಿತ್ರರಂಗಕ್ಕೆ ಬಂದರು. ಯಾರಿಗೆ ಎಷ್ಟೇ ಕ್ರೇಜ್ ಇದ್ದರೂ ಇಲ್ಲರೂ ಚಿರಂಜೀವಿಗೆ ನಂತರ ಸ್ಥಾನದಲ್ಲಿ ನಿಲ್ಲುತ್ತಾರೆ. ಆದರೆ ಚಿರು ನಟನೆಯ 'ಭೋಳಾ ಶಂಕರ್' ಚಿತ್ರದಲ್ಲಿ ಒಂದು ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆಯಂತೆ.

ಪವರ್ ಸ್ಟಾರ್ ಫ್ಯಾನ್ ಚಿರು?
ಸದ್ಯ ಚಿರಂಜೀವಿ 'ಭೋಳಾ ಶಂಕರ್' ಚಿತ್ರದಲ್ಲಿ ನಟಿಸ್ತಿದ್ದಾರೆ. ತಮಿಳಿನ 'ವೇದಾಳಂ' ರೀಮೆಕ್ ಆಗಿರುವ ಈ ಚಿತ್ರಕ್ಕೆ ಮೆಹರ್ ರಮೇಶ್ ಆಕ್ಷನ್ ಕಟ್ ಹೇಳ್ತಿದ್ದಾರೆ. ವಿಶೇಷ ಏನು ಅಂದರೆ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅಭಿಮಾನಿ ಆಗಿ ಚಿರಂಜೀವಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಇದನ್ನು ಕೇಳಿ ಮೆಗಾ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಚಿರು, ಪವನ್ ಅಭಿಮಾನಿ ಆಗಲು ಹೇಗೆ ಸಾಧ್ಯ ಎಂದು ಕೇಳುತ್ತಿದ್ದಾರೆ. ಇದನ್ನು ಸಿನಿರಸಿಕರು ಒಪ್ಪಿಕೊಳ್ಳುತ್ತಾರಾ? ಎನ್ನುವ ಅನುಮಾನ ಕೂಡ ಶುರುವಾಗಿದೆ. ಆದರೆ ಕೆಲವರು ತಮ್ಮ ಸಹೋದರನ ಅಭಿಮಾನಿ ಪಾತ್ರ ತಾನೇ ತಪ್ಪೇನಿಲ್ಲ ಎನ್ನುತ್ತಿದ್ದಾರೆ.

ಪವರ್ ಸ್ಟಾರ್ ಸಾಂಗ್ ರೀಮಿಕ್ಸ್?
'ಭೋಳಾ ಶಂಕರ್' ಚಿತ್ರದಲ್ಲಿ ಚಿರು ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ. 'ವೇದಾಳಂ' ರೀಮೆಕ್ ಆದರೂ ಒಂದಷ್ಟು ಬದಲಾವಣೆ ಮಾಡಿಕೊಂಡು ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಸಿನಿಮಾ ಕಟ್ಟಿಕೊಡುತ್ತಿದ್ದಾರಂತೆ. ಇನ್ನು ಚಿತ್ರದಲ್ಲಿ ಚಿರು, ಪವನ್ ಕಲ್ಯಾಣ್ ಅಭಿಮಾನಿ ಎನ್ನುವಂತೆ ಒಂದಷ್ಟು ಸನ್ನಿವೇಶಗಳನ್ನು ಕಟ್ಟಿಕೊಡಲಾಗ್ತಿದೆಯಂತೆ. ಪವನ್ ಕಲ್ಯಾಣ್ ನಟನೆಯ ಸೂಪರ್ ಹಿಟ್ ಸಿನಿಮಾ ಸಾಂಗ್ ರೀಮಿಕ್ಸ್ ಮಾಡುವ ಕೆಲಸವೂ ನಡೀತಿದೆ ಎನ್ನುವ ಗುಸುಗುಸು ಟಾಲಿವುಡ್ನಲ್ಲಿ ಕೇಳಿಬರ್ತಿದೆ. 'ಖುಷಿ' ಚಿತ್ರದಲ್ಲಿ ಪವನ್ ಕಲ್ಯಾಣ್ ಭೂಮಿಕಾ ಸೊಂಟ ನೋಡುವ ಸನ್ನಿವೇಶವನ್ನು ಈ ಚಿತ್ರದಲ್ಲಿ ರೀಕ್ರಿಯೇಟ್ ಮಾಡಿದ್ದಾರೆ ಎನ್ನಲಾಗ್ತಿದೆ.

ವೀರಯ್ಯ ಆಗಿ ಚಿರು ಕಂಬ್ಯಾಕ್
ಸತತ ಸೋಲುಗಳಿಂದ ಕಂಗೆಟ್ಟಿದ್ದ ಚಿರಂಜೀವಿ 'ವಾಲ್ತೇರು ವೀರಯ್ಯ' ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. 'ಸಂಕ್ರಾಂತಿ' ಸಂಭ್ರಮದಲ್ಲಿ ತೆರೆಗಪ್ಪಳಿಸಿದ ಸಿನಿಮಾ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಶೀಘ್ರದಲ್ಲೇ ಸಿನಿಮಾ ಓಟಿಟಿಗೂ ಬರ್ತಿದೆ. ಚಿತ್ರದಲ್ಲಿ ರವಿತೇಜಾ ಕೂಡ ಕೀ ರೋಲ್ ಒಂದನ್ನು ಪ್ಲೇ ಮಾಡಿದ್ದರು. ಸುಗ್ಗಿ ಸಂಭ್ರಮದಲ್ಲಿ 'ವೀರಸಿಂಹ ರೆಡ್ಡಿ' ವರ್ಸಸ್ 'ವಾಲ್ತೇರು ವೀರಯ್ಯ' ಫೈಟ್ನಲ್ಲಿ ವೀರಯ್ಯನ ಕೈ ಮೇಲಾಗಿತ್ತು.

ಕುತೂಹಲ ಕೆರಳಿಸಿದ 'ಭೋಳಾ ಶಂಕರ್'
'ವಾಲ್ತೇರು ವೀರಯ್ಯ' ಸಕ್ಸಸ್ ಬೆನ್ನಲ್ಲೇ 'ಭೋಳಾ ಶಂಕರ್' ಸಿನಿಮಾ ಚಿತ್ರೀಕರಣ ಬಿರುಸುಗೊಂಡಿದೆ. ಚಿತ್ರದಲ್ಲಿ ಕೀರ್ತಿ ಸುರೇಶ್ ಚಿರು ಸಹೋದರಿ ಪಾತ್ರದಲ್ಲಿ ನಟಿಸ್ತಿದ್ದಾರೆ. ತಮನ್ನಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಅದ್ಧೂರಿ ಸೆಟ್ಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಇತ್ತೀಚೆಗೆ ಅಣ್ಣ- ತಂಗಿ ಬಾಂಧವ್ಯದ ಹಾಡೊಂದನ್ನು ಚಿತ್ರತಂಡ ಅದ್ಧೂರಿಯಾಗಿ ಸೆರೆ ಹಿಡಿದಿದೆ.


Click it and Unblock the Notifications











