ಆ ಏರಿಯಾದಲ್ಲಿ ಚಿರುಗೆ ₹2000 ಕೋಟಿ ಪ್ರಾಪರ್ಟಿ? ಅತ್ತಿಗೆ ಮುಂದೆ ನಿಂತು ನಾದಿನಿಯರಿಗೆ ಕೊಟ್ಟಿದ್ದೆಷ್ಟು?
ಹೈದರಾಬಾದ್ನ ಕೋಕಪೇಟ್ ಪ್ರದೇಶದಲ್ಲಿ ಸರ್ಕಾರ ಭೂಮಿ ಹರಾಜು ಹಾಕಿ ಆದಾಯ ಗಳಿಸಲು ಮುಂದಾಗಿದೆ. ಅಲ್ಲಿನ ಭಾರೀ ವಿಸ್ತೀರ್ಣದ ನಿವೇಶನಗಳನ್ನು ಸರ್ಕಾರ ಮಾರಾಟ ಮಾಡುತ್ತಿದೆ. ಹರಾಜು ಪ್ರಕ್ರಿಯೆಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು ಎಕರೆಗೆ 100 ಕೋಟಿ ರೂ.ವರೆಗೆ ಹರಾಜು ಕೂಗಿದ್ದಾರೆ. ಇದರ ಬೆನ್ನಲ್ಲೇ ಅಲ್ಲಿರುವ ನಟ ಚಿರಂಜೀವಿ ಆಸ್ತಿಯ ಮೌಲ್ಯದ ಬಗ್ಗೆ ಚರ್ಚೆ ಶುರುವಾಗಿದೆ.
ದಶಕಗಳ ಹಿಂದೆ ನಟ ಚಿರಂಜೀವಿ ಹೈದರಾಬಾದ್ನ ಪ್ರತಿಷ್ಠಿತ ಏರಿಯಾ ಕೋಕಾಪೇಟ್ನಲ್ಲಿ ಭಾರೀ ವಿಸ್ತೀರ್ಣದ ಜಮೀನು ಖರೀದಿಸಿದ್ದರು. ರಿಯಲ್ ಎಸ್ಟೇಟ್ ಬೂಮ್ ಆಗುತ್ತಿದ್ದಂತೆ ಆ ಪ್ರದೇಶದ ಭೂಮಿಗೆ ಚಿನ್ನದ ಬೆಲೆ ಶುರುವಾಯಿತು. ಚಿರು ಎಷ್ಟು ಎಕರೆ ಜಮೀನು ಹೊಂದಿದ್ದಾರೆ ಎನ್ನುವ ಬಗ್ಗೆ ಅಧಿಕೃತವಾಗಿ ಲೆಕ್ಕ ಸಿಕ್ಕಿಲ್ಲ. ಆದರೆ ಅಂದಾಜು 20 ಎಕರೆ ಜಾಗ ಇದೆ ಎನ್ನುವ ವದಂತಿ ಇದೆ. ಆ ಲೆಕ್ಕದಲ್ಲಿ ಈಗ ಚಿರಂಜೀವಿ ಕೋಕಾ ಪೇಟಾದಲ್ಲಿರುವ ಚಿರು ಆಸ್ತಿಯ ಮೌಲ್ಯ 2000 ಕೋಟಿ ರೂ. ಎನ್ನುವ ಚರ್ಚೆ ಶುರುವಾಗಿದೆ.

ಕೋಕಾಪೇಟ್ನಲ್ಲಿರುವ ಚಿರು ಆಸ್ತಿ ಅಂದರೆ ಮತ್ಯಾವುದು ಅಲ್ಲ, 'ಆಚಾರ್ಯ' ಚಿತ್ರದಲ್ಲಿ ಟೆಂಪಲ್ ಟೌನ್ ಸೆಟ್ ಹಾಕಿದ್ದ ಪ್ರದೇಶ. ಹೌದು ತಮ್ಮದೇ ಜಾಗದಲ್ಲಿ ಬಹುಕೋಟಿ ವೆಚ್ಚದಲ್ಲಿ ಅದ್ಧೂರಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಶೂಟಿಂಗ್ ಬಳಿಕ ಅದನ್ನು ಕೆಡವದೇ ಬಿಟ್ಟಿದ್ದರು. ಇತ್ತೀಚೆಗೆ ಆ ಸೆಟ್ಗೆ ಬೆಂಕಿ ಬಿದ್ದ ವರದಿ ಆಗಿತ್ತು.
ಎಕರೆ 100 ಕೋಟಿ ರೂ.?
ಹೈದರಾಬಾದ್ ನಗರ ಅಭಿವೃದ್ಧಿ ನಿಗಮ ಸರ್ಕಾರದ ಆದಾಯಕ್ಕಾಗಿ ಭೂಮಿ ಹರಾಜು ನಡೆಸಿದೆ. ಕೋಕಾಪೇಟ್ ನಿಯೋಪೊಲಿಸ್ 2ನೇ ಹಂತದಲ್ಲಿರುವ ಜಮೀನು ಭಾರೀ ಬೆಲೆಗೆ ಮಾರಾಟವಾಗಿದೆ. ಈ ಹರಾಜಿನಿಂದ ಸರಕಾರಕ್ಕೆ 3 ಸಾವಿರದ 319.60 ಕೋಟಿ ಆದಾಯ ಬಂದಿದೆ. ಹರಾಜಿನಲ್ಲಿ ಎಕರೆ ಭೂಮಿಗೆ ಅತ್ಯಧಿಕ 100.75 ಕೋಟಿ ರೂ. ಕನಿಷ್ಠ 67.25 ಕೋಟಿ ರೂ.ವರೆಗೆ ಹರಾಜು ಕೂಗಿದ್ದಾರೆ. ಸದ್ಯ ಆ ಭಾಗದಲ್ಲಿ ಎಕರೆಗೆ ಸರಾಸರಿ 73.23 ಕೋಟಿ ರೂ. ಮೌಲ್ಯ ಇದೆ. ಇಂದಲ್ಲ ನಾಳೆ ಅದು 100 ಕೋಟಿ ರೂ. ಗಡಿ ದಾಟುವ ಸಾಧ್ಯತೆಯಿದೆ. ಆ ಅರ್ಥದಲ್ಲಿ ಚಿರುಗೆ ಸಾವಿರಾರು ಕೋಟಿ ಆಸ್ತಿ ಇದೆ ಎನ್ನುವ ಮಾತುಗಳು ಕೇಳಿಬರ್ತಿದೆ.

2 ಎಕರೆ ತಂಗಿಯರಿಗೆ ಗಿಫ್ಟ್
ಕೋಕಾಪೇಟ್ನಲ್ಲಿ ಚಿರುಗೆ ಎಷ್ಟು ಎಕರೆ ಆಸ್ತಿ ಇದೆ ಎನ್ನುವುದನ್ನು ಪಕ್ಕಕ್ಕಿಟ್ಟರೆ ಅದೇ ಭಾಗದ 2 ಎಕರೆ ಜಾಗವನ್ನು ತಂಗಿಯರಿಗೆ ಚಿರು ಉಡುಗೊರೆಯಾಗಿ ನೀಡಿದ್ದು ನೆನಪಾಗುತ್ತದೆ. 2 ವರ್ಷಗಳ ಹಿಂದೆ ರಕ್ಷಾ ಬಂಧನ್ ಸಮಯದಲ್ಲಿ ತಮ್ಮ ಸಹೋದರಿಯರಾದ ವಿಜಯ ದುರ್ಗಾ, ಮಾಧವಿಗೆ ತಲಾ ಒಂದು ಎಕರೆ ಜಾಗವನ್ನು ನೀಡಿದ್ದರು. ಸ್ವತಃ ಚಿರು ಪತ್ನಿ ಸುರೇಖಾ ಮುಂದೆ ನಿಂತು ರಿಜಿಸ್ಟ್ರೇಷನ್ ಮಾಡಿಸಿದ್ದರು. ಈ ವಿಚಾರವನ್ನು ಸ್ವತಃ ಚಿರಂಜೀವಿ ವೇದಿಕೆಯೊಂದರಲ್ಲಿ ಹೇಳಿದ್ದರು. ಅಂದರೆ ಚಿರು ತಂಗಿಯರಿಗೆ ನೀಡಿದ ಉಡುಗೊರೆಯ ಬೆಲೆ 200 ಕೋಟಿ ರೂ. ಎನ್ನಲಾಗುತ್ತಿದೆ.
ಚಿತ್ರರಂಗಕ್ಕೆ ಚಿರು ಕಂಬ್ಯಾಕ್
100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಚಿರಂಜೀವಿ ಜನಸೇವೆ ಮಾಡಬೇಕು ಎಂದು ರಾಜಕೀಯರಂಗ ಸೇರಿದ್ದರು. ಪ್ರಜಾರಾಜ್ಯಂ ಪಕ್ಷ ಕಟ್ಟಿ ಅಖಾಡಕ್ಕೆ ಇಳಿದರು. ಆದರೆ ರಾಜಕೀಯರಂಗದಲ್ಲಿ ಸಕ್ಸಸ್ ಆಗಲಿಲ್ಲ. ಹಾಗಾಗಿ 10 ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಮೆಗಾಸ್ಟಾರ್ ವಾಪಸ್ ಬಂದಿದ್ದರು. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಚಿರು ಅಬ್ಬರಿಸುತ್ತಿದ್ದಾರೆ.
ಆಗಸ್ಟ್ 11ಕ್ಕೆ 'ಭೋಳಾ ಶಂಕರ್'
ಸದ್ಯ ಚಿರಂಜೀವಿ ನಟನೆಯ 'ಭೋಳಾ ಶಂಕರ್' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ತಮಿಳಿನ 'ವೇದಾಳಂ' ಸಿನಿಮಾ ರೀಮೆಕ್ ಇದಾಗಿದ್ದು ತಮನ್ನಾ ನಾಯಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ಸ್ ಮತ್ತು ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಆಗಸ್ಟ್ 11ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











