ರಾಮ್ ಗೋಪಾಲ್ ವರ್ಮಾಗೆ 50 ಕೋಟಿ ಆಫರ್ ನೀಡಿದ್ರಾ ಚಂದ್ರಬಾಬು ನಾಯ್ಡು.?
Recommended Video

ವಿವಾದಾತ್ಮಕ ನಿರ್ದೇಶಕ ಅಂತಾನೆ ಖ್ಯಾತಿ ಗಳಿಸಿರುವ ರಾಮ್ ಗೋಪಾಲ್ ವರ್ಮ ನಿರ್ದೇಶನದ 'ಲಕ್ಷ್ಮೀಸ್ ಎನ್ ಟಿ ಆರ್' ಸಿನಿಮಾ ಈಗ ತೆಲುಗು ಚಿತ್ರರಂಗದಲ್ಲಿ ವಿವಾದದ ಕೇಂದ್ರ ಬಿಂದುವಾಗಿದೆ. ನಟ, ರಾಜಕಾರಣಿ ಎನ್ ಟಿ ಆರ್ ಜೀವನ ಆಧಾರಿತ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಎನ್.ಟಿ.ಆರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅನೇಕ ಸತ್ಯ ಘಟನೆಗಳನ್ನ ವರ್ಮಾ ಬಿಚ್ಚಿಟ್ಟಿದ್ದಾರಂತೆ.
ಎನ್ ಟಿ ಆರ್ ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಎನ್ ಟಿ ಆರ್ ಜೀವನಕ್ಕೆ ಎಂಟ್ರಿ ಕೊಟ್ಟ ಮೇಲೆ ಏನೆಲ್ಲ ಆಯಿತು? ಹಾಗೂ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಇವರಿಬ್ಬರ ಜೀವನಕ್ಕೆ ವಿಲನ್ ಆಗಿದ್ರಾ? ಎನ್ನುವುದನ್ನು 'ಲಕ್ಷ್ಮೀಸ್ ಎನ್ ಟಿ ಆರ್' ಚಿತ್ರದ ಮೂಲಕ ಆಂಧ್ರ ಜನತೆಯ ಮುಂದೆ ತರ್ತಿದ್ದಾರೆ ರಾಮ್ ಗೋಪಾಲ್ ವರ್ಮ.
ಎನ್ ಟಿ ಆರ್ ಅವರ ಜೊತೆಯೆ ಇದ್ದು ಅವರಿಗೆ ದ್ರೋಹ ಬಗೆದವರ ಕತೆ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ. ಹಾಗಾಗಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಇದನ್ನೆಲ್ಲಾ ನೋಡಿದ ಸಿಎಂ ಚಂದ್ರಬಾಬು ನಾಯ್ಡು ಅಭಿಮಾನಿಗಳು ಮತ್ತು ಟಿಡಿಪಿ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ರಿಲೀಸ್ ಮಾಡಬಾರದು ಎಂದು ಎಚ್ಚರಿಕೆ ಕೊಡ್ತಿದ್ದಾರೆ. ಈ ಮಧ್ಯೆ ಸ್ವತಃ ಚಂದ್ರಬಾಬು ನಾಯ್ಡು ಅವರೇ ಆರ್.ಜಿ.ವಿಗೆ ಸಿನಿಮಾ ಬಿಡುಗಡೆ ಮಾಡದಂತೆ 50 ಕೋಟಿ ಆಫರ್ ಮಾಡಿದ್ರು ಎನ್ನುವ ಸುದ್ದಿ ಈಗ ಟಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ಮುಂದೆ ಓದಿ..

ನಿಜಕ್ಕೂ 50 ಕೋಟಿ ಆಫರ್ ನೀಡಿದ್ರಾ?
ಚಂದ್ರಬಾಬು ನಾಯ್ಡು ಅವರನ್ನು ವಿಲನ್ ಹಾಗೆ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಸಿನಿಮಾ ನಿಲ್ಲಿಸುವಂತೆ ಚಂದ್ರಬಾಬು ನಾಯ್ಡು ನಿರ್ದೇಶಕ ವರ್ಮಾಗೆ 50 ಕೋಟಿ ಆಫರ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಿನಿಮಾದಲ್ಲಿ ಚಂದ್ರಬಾಬು ನಾಯ್ಡು ಅವರ ಅಸಲಿ ಮುಖ ಅನಾವರಣವಾಗಿದೆ, ಹಾಗಾಗಿಯೇ 50 ಕೋಟಿ ಆಫರ್ ಮಾಡಿ ಚಿತ್ರವನ್ನ ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದ್ರೆ, 50 ಕೋಟಿ ಆಫರ್ ಬಗ್ಗೆ ಟಿಡಿಪಿ ಆಗಲಿ ಅಥವಾ ರಾಮ್ ಗೋಪಾಲ್ ವರ್ಮ ಯಾವುದೇ ಸ್ಪಷ್ಟನೆ ನೀಡಿಲ್ಲ.

ಕೇಂದ್ರ ಚುನಾವಣಾ ಆಯೋಗಕ್ಕೆ ದೂರು
ಈ ಸಿನಿಮಾ ರಿಲೀಸ್ ಮಾಡಬಾರದು ಎಂದು ತೆಲುಗು ದೇಶಂ ಪಕ್ಷದ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಆದ್ರೆ, ಈ ಬಗ್ಗೆ ಎಲೆಕ್ಷನ್ ಕಮಿಷನ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯದ ಬೆಳವಣಿಗೆ ನೋಡಿದ್ರೆ ಚುನಾವಣೆ ಆಯೋಗದಿಂದ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರಕ್ಕೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ ಎನ್ನಲಾಗಿದೆ.

ರಿಲೀಸ್ ಅದ್ರೆ ಏನಾಗುತ್ತೆ?
ಈ ಚಿತ್ರದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ, ಇದರಿಂದ ನಾಯ್ಡು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತೆ. ಚುನಾವಣೆಗೂ ಮುಂಚೆ ಸಿನಿಮಾ ತೆರೆಕಾಣುತ್ತಿರುವುದರಿಂದ ಚಂದ್ರಬಾಬು ನಾಯ್ಡು ಅವರ ಬಗ್ಗೆ ಮತ್ತು ತೆಲುಗು ದೇಶಂ ಪಕ್ಷದ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಮೂಡುತ್ತೆ ಎನ್ನುವುದು ಟಿಡಿಪಿ ಆರೋಪ.

ಮಾರ್ಚ್ 22ಕ್ಕೆ ರಿಲೀಸ್
ಕೆಲವರು ಈ ಸುದ್ದಿಯನ್ನ ಸಿನಿಮಾ ಪ್ರಚಾರದ ಗಿಮ್ಮಿಕ್ಕು ಅಂತಾನು ಹೇಳುತ್ತಿದ್ದಾರೆ. ಮತ್ತೆ ಕೆಲವರು ಚಂದ್ರಬಾಬು ನಾಯ್ಡು ಅವರ ನಿಜ ವ್ಯಕ್ತಿತ್ವ ಬಯಲಾಗುತ್ತೆ ಎಂಬ ಆತಂಕದಿಂದ 50 ಕೋಟಿ ಆಫರ್ ಮಾಡಿದ್ರು ಅಚ್ಚರಿಯಿಲ್ಲ ಅಂತಿದ್ದಾರೆ. ಅದೇನೇ ಇದ್ದರೂ, ಸಿನಿಮಾ ಇದೆ ತಿಂಗಳು 22ಕ್ಕೆ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಕನ್ನಡದ ನಟಿ ಯಜ್ಞಾ ಶೆಟ್ಟಿ, ಎನ್ ಟಿ ಆರ್ ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











