ಯಶ್ ವಿರುದ್ಧ ನಡೀತಿದೆ 'ಮಂಡ್ಯ ಸ್ಟಾರ್'ಗಳ ಮಸಲತ್ತು?
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಯಾವ ಗಾಡ್ ಫಾದರ್ ಇಲ್ಲದೆ ಸ್ವಂತ ಪ್ರತಿಭೆಯಿಂದ ಬೆಳೆದುಬಂದ ಹೀರೋ. ಬೆನಕ ನಾಟಕ ಕಂಪೆನಿಯಿಂದ ಈಗ ಯಶ್ ಏರಿರೋ ಎತ್ತರ ದೊಡ್ಡದು. ಸಾಮಾನ್ಯನೊಬ್ಬ ಹೀಗೆ ಮಾಡೋದ್ರ ಹಿಂದೆ ದೊಡ್ಡ ಶ್ರಮವಿದೆ.
ಆದರೆ ಈಗ ಯಶ್ ರನ್ನ ಮಟ್ಟಹಾಕುವ ಪ್ರಯತ್ನ ನಡೀತಿದೆ. ಸತತ ಐದು ಸಿನಿಮಾ ಗೆದ್ದ ಯಶ್ ಈಗ ಮುಟ್ಟಿದ್ದೆಲ್ಲಾ ಚಿನ್ನ. ಓಡೋ ಕುದುರೆ ಯಶ್ ರನ್ನ ಹಿಡಿದು ನಿಲ್ಲಿಸೋಕೆ ಆಗದವರು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಈಗ ಇದು ಸುದ್ದಿಯಾಗ್ತಿರೋದು ಮಂಡ್ಯ ಸ್ಟಾರ್ ಸಿನಿಮಾ ಮೂಲಕ.
'ಮಂಡ್ಯ ಸ್ಟಾರ್' ಅನ್ನೋ ಸಿನಿಮಾದ ಕಾರ್ಯಕ್ರಮವೊಂದಕ್ಕೆ ಯಶ್ ಬರೋಕೆ ಒಪ್ಪಿಲ್ಲ ಅನ್ನೋದು ಸದ್ಯ ಹುಟ್ಟಿಕೊಂಡಿರೋ ವಿವಾದ. ಯಶ್ ರನ್ನ ಚಿತ್ರರಂಗದಲ್ಲಿ ತುಳಿಯೋಕೆ ಯತ್ನಿಸುತ್ತಿರೋ ಕೆಲವು ಸ್ಯಾಂಡಲ್ ವುಡ್ ನ ದೊಡ್ಡವರ ಪಿತೂರಿ ಇದು ಅಂತ ಯಶ್ ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.
ಈ ಹಿಂದೆ ಕೂಡ ಯಶ್ ರನ್ನ ಚೀಟಿಂಗ್ ವಿಷಯದಲ್ಲಿ ಮೋಸ ಮಾಡಿದ್ದಾರೆ ಅಂತ ಸಿಕ್ಕಿ ಹಾಕಿಸೋ ಪ್ರಯತ್ನ ನಡೆದಿತ್ತು. ಈಗ 'ಮಂಡ್ಯ ಸ್ಟಾರ್' ಅನ್ನೋ ಸಿನಿಮಾವನ್ನ ಬಳಸಿಕೊಂಡು ಯಾರದ್ದೋ ಮೂಲಕ ಹೇಳಿಕೆ ಕೊಡಿಸಿ ಯಶ್ ಜನಪ್ರಿಯತೆಯನ್ನ ಕುಗ್ಗಿಸಲಾಗ್ತಿದೆ ಅನ್ನೋ ಮಾತು ಗಾಂಧಿನಗರದ ಪಂಡಿತರ ಪಡಸಾಲೆಯಲ್ಲಿ ಕೇಳಿ ಬರ್ತಿದೆ.

ಈ ಮಂಡ್ಯ ಸ್ಟಾರ್ ಯಾರು?
ಮಂಡ್ಯಸ್ಟಾರ್ ಅನ್ನೋ ಹೊಸಬರ ಸಿನಿಮಾ ಶುರುವಾಗಿ ಮುಗಿದು ರಿಲೀಸ್ ಗೂ ತಯಾರಾಗಿದೆ. ಇತ್ತೀಚೆಗೆ ಮಂಡ್ಯದ ಹುಲಿ ಯಶ್ ರನ್ನ ಮಂಡ್ಯಸ್ಟಾರ್ ಸಿನಿಮಾ ಕಾರ್ಯಕ್ರಮಕ್ಕೆ ಕರೆದು ಬರಲಿಲ್ಲ ಅನ್ನೋ ವಿವಾದ ಶುರುವಾಗಿದೆ. ಇದು ರೈತರ ಸಿನಿಮಾ ಅದಕ್ಕಾಗಿ ಯಶ್ ಬರಬೇಕಿತ್ತು ಅಂತಾರೆ ಮಂಡ್ಯ ಮಂದಿ.

ಅಲ್ಲಿ ಮಾತಾಡೋರು ಮಂಡ್ಯದವ್ರ?
ಯಶ್ ವಿರುದ್ಧ ಏಕವಚನದಲ್ಲಿ ಮಾತ್ನಾಡೋ ಆ ವ್ಯಕ್ತಿ ಯಾವ ಆಂಗಲ್ ನಿಂದ ಕೂಡ ಮಂಡ್ಯದವರು ಅಂತ ಎಲ್ಲೂ ಅನ್ನಿಸೋದೇ ಇಲ್ಲ. ಬೆಂಗಳೂರು ಭಾಷೆಯಲ್ಲಿ ಮಾತಾಡೋ ಲೋಕಲ್ ಹೈದನನ್ನ ಮಂಡ್ಯ ಬಡ್ಡೆದು ಅಂತ ಯಾರಾದ್ರೂ ನಂಬ್ತಾರಾ.

ಅದು ರೈತರ ಸಿನಿಮಾನಾ?
ಯಶ್ ರನ್ನ ಮಂಡ್ಯ ಜನ ಬೆಳೆಸಿರಬಹುದು. ಮಂಡ್ಯ ಜನರ ಬಗ್ಗೆ ಯಶ್ ಗೂ ಪ್ರೀತಿ ಇದೆ. ಆದ್ರೆ ಯಾವ ರೈತ ಕೂಡ ಎರಡು ಮೂರು ಕೋಟಿ ಹಾಕಿ ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡೋ ಸಿನಿಮಾ ಮಾಡೋದಿಲ್ಲ. ಸಿನಿಮಾದ ಟ್ರೇಲರ್ ನೋಡ್ತಿದ್ರೆ ಅದೂ ಒಂದು ಕಮರ್ಷಿಯಲ್ ಸಿನಿಮಾ ಅನ್ನೋದ್ರಲ್ಲಿ ಅನುಮಾನವಿಲ್ಲ.

ಹೇಳಿಕೆಯಲ್ಲಿ ಕಾಣೋ ಅನುಮಾನ
ಯಶ್ ಬರಲಿಲ್ಲ ಅಂದ್ರೆ ಪ್ರತಿಭಟನೆ ಮಾಡ್ತಾರಂತೆ. ಯಶ್ ಬರೋದು ಬಿಡೋದು ಅವ್ರ ಇಚ್ಚೆಗೆ ಬಿಟ್ಟ ವಿಚಾರ. ಬರಲೇಬೇಕು ಅಂತ ಯಾವ ನಿಯಮಾನೂ ಇಲ್ಲ. ಇಷ್ಟಕ್ಕೂ ಶೂಟಿಂಗ್ ಶೆಡ್ಯೂಲ್ ಇದ್ರೆ ಯಾರಿಗೆ ತಾನೆ ಬರೋಕಾಗುತ್ತೆ. ಅಥವಾ ಬರೋದಕ್ಕೆ ಇದೇನು ಮಹಾನ್ ವ್ಯಕ್ತಿಗೆ ಗೌರವ ನೀಡ್ತಿರೋ ಕಾರ್ಯಕ್ರಮಾನಾ? ಅಥವಾ ಚಿತ್ರರಂಗದ ಕಾರ್ಯಕ್ರಮಾನಾ?

ಹಿಂದೆಯೂ ಕಿಡಿಗೇಡಿ ಕೆಲಸ
ಎರಡು ವರ್ಷದ ಹಿಂದೆ ಯಶ್ ಮತ್ತು ಕುಟುಂಬ ಚೀಟಿ ವಿಚಾರವಾಗಿ ವಂಚಿಸಿ ಬೆಂಗಳೂರಿಗೆ ಬಂದಿದೆ ಅಂತ ಸುದ್ದಿಯಾಗಿತ್ತು. ಆಗ ಯಶ್ ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ರು. ಈ ಸಂದರ್ಭದಲ್ಲಿ ಸ್ವತಃ ಮಂಡ್ಯ ಜನ್ರು ಯಶ್ ಬೆಂಬಲಕ್ಕೆ ನಿಂತಿದ್ರು. ಅದು ಯಾರೋ ಕಿಡಿಗೇಡಿಗಳು ಯಶ್ ಬೆಳೆಯೋದನ್ನ ಸಹಿಸದೇ ಮಾಡಿದ್ದ ಸುದ್ದಿಯಾಗಿತ್ತು.

ಯಶ್ ಕರ್ನಾಟಕದ ಯೂತ್ ಐಕಾನ್
ಕಳೆದ ವರ್ಷ ಟೈಮ್ಸ್ ನಡೆಸಿದ ಸಮೀಕ್ಷೆಯಲ್ಲಿ ಯಶ್ ಕರ್ನಾಟಕದ ಯೂತ್ ಐಕಾನ್ ಆಗಿ ಆಯ್ಕೆಯಾಗಿದ್ರು. ಅದಾದ ನಂತರ ಯಶ್ ಮತ್ತೆರೆಡು ಹಿಟ್ ಸಿನಿಮಾ ಕೊಟ್ಟಿದ್ದಾರೆ. ಹಾಗಾಗಿ ರಾಕಿಂಗ್ ಸ್ಟಾರ್ ವೇಗಕ್ಕೆ ಬ್ರೇಕ್ ಹಾಕೋ (ಇಮೇಜ್ ಗೆ ಮಸಿ ಬಳಿಯೋ) ಪ್ರಯತ್ನ ಯಾವುದೋ ಮೂಲೆಯಿಂದ ನಡೀತಿರ್ಬಹುದು ಅನ್ನೊ ಮಾತುಗಳು ಕೇಳಿಬರ್ತಿವೆ.

ಬೆಳೆಯೋ ಸಮಯದಲ್ಲಿದು ಸಹಜ
ಚಿತ್ರರಂಗದ ಯಜಮಾನ ವಿಷ್ಣುರಂತಹಾ ದಿಗ್ಗಜರೇ ಸ್ಟಾರ್ ಗಳಾಗಿ ಬೆಳೆದಾಗ ಇಂತಹಾ ಸಮಸ್ಯೆಗಳನ್ನ ಎದುರಿಸಿದ್ರು. ಆದ್ರೆ ಅದು ಅಭಿಮಾನಿಗಳ ಹುಚ್ಚುತನದಿಂದಾದ ಅನಾಹುತ. ಇವತ್ತಿನ ವೈಚಾರಿಕ ಜಗತ್ತಿನಲ್ಲೂ ಇಂತಹಾ ವ್ಯವಸ್ಥಿತ ಪಿತೂರಿ ನಡೆಯುತ್ತೆ ಅಂದ್ರೆ ಅದು ನಿಜಕ್ಕೂ ಆಚ್ಚರಿಯ ವಿಷಯ.


Click it and Unblock the Notifications











